2,000 ರೂ. ನೋಟ್ ಎಕ್ಸ್ಚೇಂಜ್ ಹೆಸರಲ್ಲಿ 25 ಲಕ್ಷ ರೂ. ವಂಚನೆ: ತಿರುಪತಿಗೆ ಕರೆಸಿ ನಾಮ ಹಾಕಿದ ಖದೀಮರು
ರಿಸರ್ವ್ ಬ್ಯಾಂಕ್ನಿಂದ ಚಲಾವಣೆ ಸ್ಥಗಿತಗೊಳಿಸಿದ 2000 ರೂ. ನೋಟುಗಳ ಎಕ್ಸ್ಚೇಂಜ್ಗೆ ಒಂದೂವರೆಪಟ್ಟು ಹಣ ಕೊಡುವುದಾಗಿ ಬೆಂಗಳೂರಿನ ಕಾಂಟ್ರ್ಯಾಕ್ಟರ್ಗೆ 25 ಲಕ್ಷ ರೂ. ವಂಚನೆ ಮಾಡಲಾಗಿದೆ.
![25 lakh rupees fraud in the name of 2000 Rs note exchange they called him to Tirupati and cheated sat 25 lakh rupees fraud in the name of 2000 Rs note exchange they called him to Tirupati and cheated sat](https://static-ai.asianetnews.com/images/01h6ktv529pq4f9d2eze7haek9/2000-note-exchange_363x203xt.jpg)
ಬೆಂಗಳೂರು (ಜು.30): ಈಗಾಗಲೇ ದೇಶದಲ್ಲಿ ರಿಸರ್ವ್ ಬ್ಯಾಂಕ್ನಿಂದ 2000 ರೂ. ನೋಟಿನ ಚಲಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಸೂಕ್ತ ದಾಖಲೆಗಳನ್ನು ತೋರಿಸಿ ಬ್ಯಾಕ್ಗಳಿಗೆ ಜಮಾವಣೆ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ, ನಮ್ಮ ಬಳಿ ಕೋಟ್ಯಂತರ ರೂ. 2000 ಮುಖಬೆಲೆಯ ನೋಡುಗಳಿದ್ದು, ನೀವು 500 ರೂ. ಮುಖಬೆಲೆಯ ನೋಟು ಕೊಟ್ಟ ಒಂದೂವರೆ ಪಟ್ಟು ಹಣ ಕೊಡುವುದಾಗಿ ಹೇಳಿ ಸಿವಿಲ್ ಕಾಂಟ್ರ್ಯಾಕ್ಟರ್ ಕಡೆಯಿಂದ 25 ಲಕ್ಷ ರೂ. ಹಣವನ್ನು ಪಡೆದು ಯಾವುದೇ ಹಣ ಕೊಡದೇ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲೊಂದು ಖತರ್ನಾಕ್ ನಯವಂಚಕರ ಜಾಲ ಪತ್ತೆಯಾಗಿದೆ. 2000 ರೂ. ನೋಟ್ ಎಕ್ಸ್ ಚೇಂಜ್ ಹೆಸರಲ್ಲಿ ಸಿವಿಲ್ ಕಂಟ್ರಾಕ್ಟರ್ ಗೆ ಬರೊಬ್ಬರಿ 25 ಲಕ್ಷ ವಂಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಡೀಲ್ ಮಾಡಿ ತಿರುಪತಿಗೆ ಕರೆಸಿ ಪಂಗನಾಮ ಹಾಕಿದ್ದಾರೆ. 2000 ರೂ. ಮುಖ ಬೆಲೆಯ ನೋಟ್ ಗಳು ಬ್ಯಾನ್ ಆಗಲಿದ್ದು, ಅವುಗಳ ಎಕ್ಸ್ಚೇಂಜ್ ಮಾಡುವುದಾಗಿ ಹೇಳಿ ವಂಚನೆ ಮಾಡಲಾಗಿದೆ. ವಂಚನೆಗೆ ಒಳಗಾದ ವ್ಯಕ್ತಿಯನ್ನು ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರೋಡ್ ನ ಸಿವಿಲ್ ಕಂಟ್ರಾಕ್ಟರ್ ಸುರೇಶ್(51) ಎನ್ನುವವರಾಗಿದ್ದಾರೆ.
Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ
ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವಂತೆ ಆಮಿಷ: ನಿಮ್ಮ ಬಳಿಯಲ್ಲಿರುವ 2000 ರೂ. ಮುಖ ಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಡುತ್ತೇವೆ. ಇದಕ್ಕಾಗಿ ನಮ್ಮ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿ ಎಂದು ಹೇಳಿದ್ದಾರೆ. ಸುರೇಶ್ ಗೆ ಕಳೆದ 2 ತಿಂಗಳ ಹಿಂದೆ ಅನಮಾಧೇಯ ವ್ಯಕ್ತಿಗಳಿಂದ ಕರೆ ಬಂದಿದೆ. ಶಿವು ಎಂಬ ಹೆಸರಿನ ವ್ಯಕ್ತಿ ಕರೆ ಮಾಡಿ 2 ಸಾವಿರದ ನೋಟ್ ಗಳನ್ನ ಪ್ರಧಾನಿ ಬ್ಯಾನ್ ಮಾಡಲಿದ್ದಾರೆ. ನಮ್ಮ ಬಳಿ 2 ಸಾವಿರ ಮುಖ ಬೆಲೆ ನೋಟ್ ಗಳು ಕೋಟ್ಯಾಂತರ ರೂಪಾಯಿ ಇದೆ. ನೀವು 500 ರೂ ಮುಖಬೆಲೆಯ 25 ಲಕ್ಷ ಹಣ ನೀಡಿದರೆ, ನಾವು 2000 ಮುಖಬೆಲೆಯ 37.5 ಲಕ್ಷ ಹಣ ನೀಡುತ್ತೇವೆ ಎಂದು ಹೇಳಿದ್ದರು.
ಮಂತ್ರಾಲಯ, ತಿರುಪತಿ, ನಂತರ ನೆಲ್ಲೂರಿಗೆ ಕರೆಸಿ ವಂಚನೆ: ಹಲವು ಬಾರಿ ಕರೆ ಮಾಡಿ ಕಾಂಟ್ರ್ಯಾಕ್ಟರ್ ಸುರೇಶ್ಗೆ ನಂಬಿಕೆ ಹುಟ್ಟಿಸಿದ್ದ ವಂಚಕರು, ಸುಲಭವಾಗಿ ಹಣ ಮಾಡುವ ಮಾರ್ಗದ ಮೇಲೆ ಆಸೆ ಹುಟ್ಟಿಸಿದ್ದಾರೆ. ಇದನ್ನು ನಂಬಿಕೊಂಡ ಗುತ್ತಿಗೆದಾರ ಸುರೇಶ್ ತಮ್ಮ ಕಾರಿನಲ್ಲಿ 25 ಲಕ್ಷ ತೆಗೆದುಕೊಂಡು ಹೋಗಲು ಸಿದ್ಧರಾಗಿದ್ದಾರೆ. ವಂಚಕರು ಮೇ 27 ರಂದು ಹಣ ತೆಗೆದುಕೊಂಡು ಮಂತ್ರಾಲಯಕ್ಕೆ ಬರಲು ತಿಳಿಸಿದ್ದರು. ನಂತರ, ಇದ್ದಕ್ಕಿದ್ದಂತೆ ಕರೆ ಮಾಡಿ ಮಂತ್ರಾಲಯ ಬೇಡ, ನಾವು ತಿರುಪತಿಯಲ್ಲಿ ಇದ್ದೇವೆ, ಅಲ್ಲಿಗೆ ಬರುವಂತೆ ಸೂಚಿಸಿದ್ದಾರೆ. ಇನ್ನು ತಿರುಪತಿ ಹೋದ ನಂತರ ನೆಲ್ಲೂರಿಗೆ ಬರಲು ತಿಳಿಸಿದ್ದಾರೆ.
500 ರೂ. ಮುಖಬೆಲೆಯ 25ಲಕ್ಷ ಪಡೆದು ಪರಾರಿ: ಇನ್ನು ಹಣದ ಆಸೆಗೆ ವಂಚಕರು ಹೇಳಿದ ಕಡೆಗೆಲ್ಲಾ ಕಾರಿನಲ್ಲಿ ಹಣವನ್ನು ಇಟ್ಟುಕೊಂಡು ಪ್ರಯಾಣ ಮಾಡಿದ ಗುತ್ತಿಗೆದಾರ ಸುರೇಶ್ ಕೊನೆಗೆ ನೆಲ್ಲೂರಿಗೆ ಹೋಗಿದ್ದಾರೆ. ಅಲ್ಲಿ ಶ್ರೀನಿವಾಸ್ ಎಂಬ ವ್ಯಕ್ತಿ ನಿಮಗೆ ಸಿಗ್ತಾರೆ, ಅವರು ಹೇಳಿದ ರೀತಿ ಕೇಳುವಂತೆ ತಿಳಿಸಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ಆಟೋದಲ್ಲಿ ಬಂದ ವ್ಯಕ್ತಿ ತಾನು ಶ್ರೀನಿವಾಸ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಆತ ಒಂದು ಟ್ರಂಕ್ ತೋರಿಸಿ ಬಿಡಿಯಾಗಿದ್ದ 2,000 ರೂ ನೋಟ್ ಗಳನ್ನು ತೊರಿಸಿದ್ದಾನೆ. ನಂತರ ಅದನ್ನ ಬಂಡಲ್ ಮಾಡಿ ಕೊಡೋದಾಗಿ ಹೇಳಿ 25 ಲಕ್ಷದ 500 ರೂ ನೋಟುಗಳನ್ನ ಪಡೆದಿದ್ದಾನೆ.
ಬೆಳಗಾವಿ: ಅಕ್ರಮ ಹಣ ಬದಲಾವಣೆ ದಂಧೆ, ಮೂವರು ಅಂದರ್!
ಸಿಸಿಬಿಗೆ ಕೇಸ್ ವರ್ಗಾಯಿಸಿದ ಪೊಲೀಸರು: ಗುತ್ತಿಗೆದಾರ ಸುರೇಶ್ರಿಂದ 500 ರೂ. ಮುಖಬೆಲೆಯ 25 ಲಕ್ಷ ರೂ. ಹಣದ ಬ್ಯಾಗ್ ಪಡೆದು, ನೀವು 2000 ರೂ. ಮುಖಬೆಲೆಯ 37.5 ಲಕ್ಷ ರೂ. ಹಣವನ್ನು ಬಂಡಲ್ ರೀತಿಯಲ್ಲಿ ತಿರುಪತಿಗೆ ಬಂದು ಕಲೆಕ್ಟ್ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಅಷ್ಟೊತ್ತಿಗೆ ಸುರೇಶ್ಗೆ ತಾನು ವಂಚನೆಗೊಳಗಾಗುತ್ತಿದ್ದೇನೆ ಎಂಬ ಅನುಮಾನ ಬಂದಿತ್ತು. ಆದರೂ, ನಂಬಿಕೆಯಿಟ್ಟು ಹಣವನ್ನು ಕೊಟ್ಟಿದ್ದಾರೆ. ಈಗ ಎರಡು ತಿಂಗಳಾದರೂ ಸುರೇಶ್ಗೆ ಇನ್ನೂ ಹಣ ಮಾತ್ರ ಬಂದಿಲ್ಲ. ಸದ್ಯ ಈ ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಶಿವು, ಶಿವಕುಮಾರ್ ಸ್ವಾಮಿ ಹಾಗೂ ಶ್ರೀನಿವಾಸ್ ಎಂಬುವವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಪ್ರಕರಣವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಬಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.