ಬೆಂಗಳೂರು: ರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ, 11 ಮಂದಿ ಅರೆಸ್ಟ್
ಹಲಸೂರು, ರಾಜಾಜಿನಗರ, ಸದಾಶಿವನಗರ, ಜಯನಗರ ಹಾಗೂ ಬಸವನಗುಡಿಗಳಲ್ಲಿ ಆರೋಪಿಗಳ ನಿವಾಸ ಹಾಗೂ ಬ್ಯಾಂಕ್ ಕಚೇರಿಗಳ ಮೇಲೆ ಕಾರ್ಯಾಚರಣೆ| ಕೆಲವು ದಾಖಲೆಗಳನ್ನು ಜಪ್ತಿ| ಮಯ್ಯ ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ಕೆಲವರ ಹೆಸರು ಉಲ್ಲೇಖ|
ಬೆಂಗಳೂರು(ಆ.05): ಬಸವನಗುಡಿಯ ಶ್ರೀಗುರುರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಬಹುಕೋಟಿ ವಂಚನೆ ಹಾಗೂ ನಿವೃತ್ತ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣಗಳ ಸಂಬಂಧ ಬ್ಯಾಂಕ್ನ ನಿರ್ದೇಶಕರು ಸೇರಿದಂತೆ ಹನ್ನೊಂದು ಮಂದಿಯನ್ನು ಸಿಐಡಿ ಮಂಗಳವಾರ ಬಂಧಿಸಿದೆ. ಈ ಪೈಕಿ ಒಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಗುರುರಾಘವೇಂದ್ರ ಬ್ಯಾಂಕ್ನ ಬಹುಕೋಟಿ ವಂಚನೆ ಮತ್ತು ನಿವೃತ್ತ ಸಿಇಓ ಆತ್ಮಹತ್ಯೆ ಸಂಬಂಧ ಹನ್ನೊಂದು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವು ಹೈ ಕೋರ್ಟ್ನಲ್ಲಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸಿಐಡಿ ಡಿಜಿಪಿ ಪಿ.ಎಸ್.ಸಂಧು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಹಣಕ್ಕಾಗಿ ಗುರು ರಾಘವೇಂದ್ರ ಬ್ಯಾಂಕ್ ಮುಂದೆ ಗ್ರಾಹಕರ ದಂಡು!
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು, ಹಲಸೂರು, ರಾಜಾಜಿನಗರ, ಸದಾಶಿವನಗರ, ಜಯನಗರ ಹಾಗೂ ಬಸವನಗುಡಿಗಳಲ್ಲಿ ಆರೋಪಿಗಳ ನಿವಾಸ ಹಾಗೂ ಬ್ಯಾಂಕ್ ಕಚೇರಿಗಳ ಕಾರ್ಯಾಚರಣೆ ನಡೆಸಿತು. ಈ ವೇಳೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಗೊತ್ತಾಗಿದೆ.
ಇತ್ತೀಚಿಗೆ ಗುರುರಾಘವೇಂದ್ರ ಬ್ಯಾಂಕ್ನ ವಂಚನೆ ಕೃತ್ಯ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸಿಐಡಿ ತನಿಖೆ ನಡೆದಿರುವ ವೇಳೆಯೇ ಆರೋಪ ಎದುರಿಸುತ್ತಿದ್ದ ಬ್ಯಾಂಕ್ನ ಮಾಜಿ ಸಿಇಓ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಯ್ಯ ಅವರು ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ಕೆಲವರ ಹೆಸರು ಉಲ್ಲೇಖವಾಗಿದ್ದವು. ಈಗ ಬಂಧಿತರಾಗಿರುವ ಪೈಕಿ ಕೆಲವರ ಹೆಸರು ಮಯ್ಯ ಅವರ ಮರಣ ಪತ್ರದಲ್ಲಿದ್ದವು. ಕೆಲವರು ವಂಚನೆಗೆ ಸಹಕರಿಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.