ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವುದು, ತಮಗೆ ಬೇಕಾದವರಿಗೆ ಮತ ಚಲಾಯಿಸುವಂತೆ ಬೆದರಿಕೆ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು(ಏ.25): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳಿಗೆ ಪೊಲೀಸರ ದಿಢೀರ್ ಭೇಟಿ ಮುಂದುವರೆದಿದ್ದು, ಕೆ.ಜಿ.ಹಳ್ಳಿ ಉಪ ವಿಭಾಗದ ವ್ಯಾಪ್ತಿ 160 ರೌಡಿಗಳಿಗೆ ಪೊಲೀಸರು ಸೋಮವಾರ ಬಿಸಿ ಮುಟ್ಟಿಸಿದ್ದಾರೆ.
ಕೆ.ಜಿ.ಹಳ್ಳಿ ಉಪವಿಭಾಗದ ದೇವರಜೀವನಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 5ರಿಂದ 10 ಗಂಟೆವರೆಗೆ ಈ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಕುಖ್ಯಾತ ರೌಡಿಗಳಾದ ಜೊಲ್ಲು ಇಮ್ರಾನ್, ಅನೀಸ್, ಜಹೀರ್ ಅಬ್ಬಾಸ್, ಹುಸೇನ್ ಷರೀಫ್, ಗ್ರಾನೈಟ್ ಸಾಧಿಕ್, ಸಕೀರ್, ಭಿಂಡಿ ಇರ್ಫಾನ್, ಯೂಸುಫ್, ತೌಫಿಕ್, ನೆಲ್ಸನ್ ಹಾಗೂ ಆಸಿಫ್ ಸೇರಿದಂತೆ ಇತರೆ ರೌಡಿಗಳಿಗೆ ಎಸಿಪಿ ಜಗದೀಶ್ ನೇತೃತ್ವದ ತಂಡ ಚುರುಕು ಮುಟ್ಟಿಸಿದೆ.
ರೌಡಿ ಮತ್ತು ಅಪರಾಧ ಹಿನ್ನೆಲೆಯುಳ್ಳವರ ಖಾಯಂ ವಾಸದ ಸ್ಥಳದ, ಉದ್ಯೋಗ, ಮೊಬೈಲ್ ನಂಬರ್ ಮತ್ತು ಕುಟುಂಬ ಸದಸ್ಯರ ಮಾಹಿತಿ ಸೇರಿದಂತೆ ಸ್ವವಿವರ ಕಲೆ ಹಾಕಲಾಗಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವುದು, ತಮಗೆ ಬೇಕಾದವರಿಗೆ ಮತ ಚಲಾಯಿಸುವಂತೆ ಬೆದರಿಕೆ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಡ ಜೈಲಲ್ಲಿ.. ಹೆಂಡತಿ ಡ್ರಗ್ಸ್ ಡೀಲ್ನಲ್ಲಿ! ಗಾಂಜಾ ಲೇಡಿಯ ನೆಟ್ವರ್ಕ್ ಹೇಗಿದೆ ಗೊತ್ತಾ?
ಮಂಚದ ಕೆಳಗೆ ಗಾಂಜಾ:
ಇನ್ನು ಮೋದಿ ರಸ್ತೆಯ ರೌಡಿ ಆಸೀಫ್ ಮನೆ ಡಿ.ಜೆ.ಹಳ್ಳಿ ಪೊಲೀಸರ ಹಠಾತ್ ದಾಳಿ ನಡೆಸಿ ಪರಿಶೀಲಿಸಿದಾಗ 1 ಕ್ವಿಂಟಾಲ್ ಗಾಂಜಾ ಪತ್ತೆಯಾಗಿದೆ. ಈಗ ಗಾಂಜಾ ಮಾರಾಟ ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿಗಳ ಮನೆಗಳಿಗೆ ದಿಢೀರ್ ಭೇಟಿ ನಿಮಿತ್ತ ಆಸೀಫ್ ನಿವಾಸಕ್ಕೂ ಸೋಮವಾರ ಬೆಳಗ್ಗೆ ಎಸಿಪಿ ಜಗದೀಶ್ ಹಾಗೂ ಡಿ.ಜೆ.ಹಳ್ಳಿ ಇನ್ಸ್ಪೆಕ್ಟರ್ ಆರ್.ಪ್ರಕಾಶ್ ದಾಂಗುಡಿಯಿಟ್ಟಿದೆ. ಆಗ ಆತನ ಮಲಗುವ ಕೋಣೆಯ ಮಂಚದ ಕೆಳಗೆ ಮೂಟೆಯಲ್ಲಿ ತುಂಬಿ ಬಚ್ಚಿಟ್ಟಿದ್ದ 105 ಕೇಜಿ ಗಾಂಜಾ ಹಾಗೂ 8 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆಸೀಫ್ ವೃತ್ತಿಪರ ಗಾಂಜಾ ಪೆಡ್ಲರ್ ಆಗಿದ್ದು, ಆತನ ಮೇಲೆ 8 ಪ್ರಕರಣಗಳು ದಾಖಲಾಗಿವೆ. ಹೊರ ರಾಜ್ಯಗಳಿಂದ ಕಡಿಮೆ ಬೆಲೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಆಸೀಫ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
