ಕಾಂಗ್ರೆಸ್ ನಾಯಕಿ ಸೋಗಲ್ಲಿ ನೌಕರಿ ಆಮಿಷ: 55 ಜನಕ್ಕೆ ಕೋಟಿ ರೂ. ವಂಚನೆ
* ಕೆಲಸ ಕೊಡಿಸುವ ನೆಪದಲ್ಲಿ 1.62 ಕೋಟಿ ವಂಚನೆ
* ಈ ಸಂಬಂಧ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
* ರಾಧಾ ಉಮೇಶ್, ಶ್ರೀಲೇಖಾ, ಹಾಗೂ ಸಂಪತ್ಕುಮಾರ್ ವಿರುದ್ಧ ಎಫ್ಐಆರ್
ಬೆಂಗಳೂರು(ಸೆ. 29): ಕಾಂಗ್ರೆಸ್(Congress) ನಾಯಕಿ ಸೋಗಿನಲ್ಲಿ ರಾಜ್ಯ ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ ನಂಬಿಸಿ ಸುಮಾರು 55 ಉದ್ಯೋಗಾಂಕ್ಷಿಗಳಿಂದ 1.62 ಕೋಟಿ ವಸೂಲಿ ಮಾಡಿ ವಂಚಿಸಿರುವ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಾರಸ್ವಾಮಿಲೇಔಟ್ ನಿವಾಸಿ ಕೆ.ಜಿ.ಮಂಜುನಾಥ್ ಎಂಬುವರೇ ದೂರು ಕೊಟ್ಟಿದ್ದು, ಅದರನ್ವಯ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್, ಶ್ರೀಲೇಖಾ, ಹಾಗೂ ಸಂಪತ್ಕುಮಾರ್ ವಿರುದ್ಧ ವಂಚನೆ(Fraud) ಆರೋಪದಡಿ ಎಫ್ಐಆರ್(FIR) ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಮ್ಮನ ಹೆಸರಲ್ಲಿ ಪರೀಕ್ಷೆ ಬರೆದ ಪೊಲೀಸ್ ಪೇದೆ ವಜಾ
ಎರಡೂವರೆ ವರ್ಷಗಳ ಹಿಂದೆ ಮಂಜುನಾಥ್ ಅವರಿಗೆ ಕೆಪಿಸಿಸಿ ಕಾರ್ಮಿಕ ವಿಭಾಗ ಉಪಾಧ್ಯಕ್ಷೆ ಎಂದು ರಾಧಾ ಪರಿಚಯಿಸಿಕೊಂಡಿದ್ದಳು. ನನಗೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ದಿನಗೂಲಿ ನೌಕರರ ಏಜೆನ್ಸಿ ಕೊಡಿಸುತ್ತೇನೆ. ಇದಕ್ಕೆ 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಈ ಮಾತು ನಂಬಿದ ಮಂಜುನಾಥ್, 4 ಕಂತುಗಳಲ್ಲಿ ಆಕೆಗೆ ಹಣ ಪಾವತಿಸಿದ್ದರು. ಆನಂತರ ಶ್ರೀಲೇಖಾ, ನಿಮಗೆ ಏಜೆನ್ಸಿ ಗೋಜು ಬೇಡ. ಗೃಹ ಇಲಾಖೆಯಲ್ಲಿ ಕಿರಿಯ, ಹಿರಿಯ ಮತ್ತು ಅಧೀಕ್ಷರ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದೆ. ಅದರಲ್ಲಿ ಯಾವುದಾದರೂ ಹುದ್ದೆ ಕೊಡಿಸುವುದಾಗಿ ಮಾತು ಬದಲಾಯಿಸಿದರು. ಈಕೆಯ ಮಾತು ನಂಬಿ 55 ಮಂದಿ ಉದ್ಯೋಗಾಕಾಂಕ್ಷಿಗಳು ಒಟ್ಟಿಗೆ ಸೇರಿ ಹಂತ ಹಂತವಾಗಿ ಆರೋಪಿಗಳಿಗೆ 1.61 ಕೋಟಿ ನೀಡಿದ್ದರು. ಈ ಹಣ ಸ್ವೀಕರಿಸಿದ ಬಳಿಕ ಸಂತ್ರಸ್ತರಿಗೆ ನಕಲಿ ದಾಖಲೆ ಸೃಷ್ಟಿಸಿ ನೇಮಕಾತಿ ಆದೇಶವನ್ನು ಆರೋಪಿಗಳು ಕೊಟ್ಟಿದ್ದರು.
ಇದೇ ವರ್ಷದ ಸೆ.24 ರಂದು ವಿಧಾನಸೌಧ ಆರ್ಥಿಕ ಇಲಾಖೆಗೆ ಹೋಗಿ ನೇಮಕಾತಿ ಆದೇಶವನ್ನು ದೂರುದಾರರು ನೀಡಿದಾಗಲೇ ನಕಲಿ ಎಂಬುದು ಗೊತ್ತಾಗಿದೆ. ಅಲ್ಲದೆ, ಇಂತಹ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಕೊನೆಗೆ ವಂಚನೆ ಬಗ್ಗೆ ಪೊಲೀಸರಿಗೆ(Police) ಅವರು ದೂರು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.