*   ಎಲೆಕ್ಟ್ರಾನಿಕ್‌ ಸಿಟಿಯ ಮೈಲಸಂದ್ರದ ಮಳಿಗೆಯಲ್ಲಿ ನಡೆದ ಘಟನೆ*   ಇಬ್ಬರು ಮಳಿಗೆಗೆ ಆಗಮಿಸಿ ಆಭರಣ ವಿಚಾರಣೆ*   ಮತ್ತಿಬ್ಬರು ಬಂದು ಗನ್‌ ತೋರಿಸಿ ದುಷ್ಕೃತ್ಯ 

ಬೆಂಗಳೂರು(ಜು.05):  ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗೆ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೌಕರನಿಗೆ ಪಿಸ್ತೂಲ್‌ ತೋರಿಸಿ ಕೈ ಕಾಲು ಕಟ್ಟಿ ನಗದು ಸೇರಿದಂತೆ 1.58 ಕೋಟಿ ರು. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಮೈಲಸಂದ್ರದ ‘ರಾಮದೇವ್‌ ಬ್ಯಾಂಕ​ರ್ಸ್‌ ಆ್ಯಂಡ್‌ ಜ್ಯೂವೆಲರಿ’ ಮಳಿಗೆಯಲ್ಲಿ ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಕರಣ ಭೇದಿಸಲು ರಚಿಸಿರುವ ಪೊಲೀಸರ ನಾಲ್ಕು ತಂಡಗಳು ದುಷ್ಕರ್ಮಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್

ಘಟನೆ ವಿವರ

ಭವಾರಿಲಾಲ್‌ ಎಂಬುವವರಿಗೆ ಸೇರಿದ ಈ ಮಳಿಗೆಯಲ್ಲಿ ಚಿನ್ನಾಭರಣಗಳನ್ನು ಅಡಮಾನ ಇರಿಸಿಕೊಳ್ಳುವುದು ಹಾಗೂ ಚಿನ್ನ ಹಾಗೂ ಬೆಳ್ಳಿ ಆಭರಣ ಮಾರಾಟ ಮಾಡಲಾಗುತ್ತದೆ. ಸೋಮವಾರ ಬೆಳಗ್ಗೆ 7.30ಕ್ಕೆ ನೌಕರರ ಧರ್ಮಸೇನಾ ಎಂದಿನಂತೆ ಮಳಿಗೆ ಬಾಗಿಲು ತೆರೆದು ಆಭರಣಗಳನ್ನು ಜೋಡಿಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರು ಅಪರಿಚಿತರು ಗ್ರಾಹಕರ ಸೋಗಿನಲ್ಲಿ ಮಳಿಗೆ ಪ್ರವೇಶಿಸಿ, ಆಭರಣಗಳ ಬಗ್ಗೆ ವಿಚಾರಿಸಿದ್ದಾರೆ.

ಪತಿಯೊಂದಿಗೆ ಕ್ಷುಲ್ಲಕ ಜಗಳ: 7 ತಿಂಗಳ ಮಗನನ್ನು ಕೊಂದು ಮಹಿಳೆ ಆತ್ಮಹತ್ಯೆ

ಅಷ್ಟರಲ್ಲಿ ಮತ್ತಿಬ್ಬರು ಏಕಾಏಕಿ ಮಳಿಗೆ ಪ್ರವೇಶಿಸಿ ನೌಕರ ಧರ್ಮಸೇನಾಗೆ ಪಿಸ್ತೂಲ್‌ ತೋರಿಸಿ ಬೆದರಿಸಿದ್ದಾರೆ. ಬಳಿಕ ನಾಲ್ವರು ಸೇರಿಕೊಂಡು ಆತನ ಕೈ ಕಾಲು ಕಟ್ಟಿಹಾಕಿ ಲಾಕರ್‌ ತೆರೆದು ಸುಮಾರು 3.5 ಕೆ.ಜಿ. ಚಿನ್ನಾಭರಣ, 30 ಕೆ.ಜಿ. ಬೆಳ್ಳಿ ಆಭರಣ ಹಾಗೂ .80 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಪರಾರಿಯಾಗುವ ವೇಳೆ ಧರ್ಮಸೇನಾ ಅವರ ಮೊಬೈಲ್‌ ಕಸಿದುಕೊಂಡು ಸ್ವಿಚ್‌್ಡಆಫ್‌ ಮಾಡಿ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದಾರೆ.

ಬಳಿಕ ಕಟ್ಟನ್ನು ಬಿಚ್ಚಿಕೊಂಡಿರುವ ನೌಕರ ಧರ್ಮಸೇನಾ ಕೂಡಲೇ ಮಾಲಿಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಮಾಲಿಕ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮಳಿಗೆಯ ಸಿಸಿಟಿವಿ ಕ್ಯಾಮರಾ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.