* ಮಹಿಳಾ ಟಿ20 ಚಾಲೆಂಜ್ ಫೈನಲ್ನಲ್ಲಿಂದು ವೆಲಾಸಿಟಿ-ಸೂಪರ್ನೋವಾಸ್ ಸೆಣಸಾಟ* 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸೂಪರ್ನೋವಾಸ್* ಚೊಚ್ಚಲ ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದೆ ವೆಲಾಸಿಟಿ
ಪುಣೆ(ಮೇ.28): 4ನೇ ಆವೃತ್ತಿ ಮಹಿಳಾ ಟಿ20 ಚಾಲೆಂಜ್(ಮಹಿಳಾ ಐಪಿಎಲ್) ಟೂರ್ನಿಯ ಪೈನಲ್ ಪಂದ್ಯ ಶನಿವಾರ ನಡೆಯಲಿದ್ದು, 2 ಬಾರಿ ಚಾಂಪಿಯನ್ ಸೂಪರ್ನೋವಾಸ್ ಹಾಗೂ ವೆಲಾಸಿಟಿ (Velocity vs Supernovas) ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. 2019ರ ಫೈನಲ್ನಲ್ಲಿ ವೆಲಾಟಿಸಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಸೂಪರ್ನೋವಾಸ್ ಮತ್ತೊಮ್ಮೆ ಚಾಂಪಿಯನ್ ಆಗಲು ಕಾತರಿಸುತ್ತಿದೆ.
ಮತ್ತೊಂದೆಡೆ ದೀಪ್ತಿ ಶರ್ಮಾ ಸಾರಥ್ಯದ ವೆಲಾಸಿಟಿ ಈ ಬಾರಿ ಗುಂಪು ಹಂತದಲ್ಲಿ ಸೂಪರ್ನೋವಾಸ್ ತಂಡಕ್ಕೆ ಸೋಲುಣಿಸಿದ್ದು, ಮತ್ತೊಂದು ಗೆಲುವಿನ ಮೂಲಕ ಚೊಚ್ಚಲ ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದೆ. ಟೂರ್ನಿ ಇತಿಹಾಸದಲ್ಲಿ ಉಭಯ ತಂಡಗಳು 4 ಬಾರಿ ಮುಖಾಮುಖಿಯಾಗಿದ್ದು, ಇತ್ತಂಡಗಳೂ ತಲಾ 2 ಬಾರಿ ಗೆಲುವು ಸಾಧಿಸಿವೆ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಮೋದಿ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರು!
ಅಹಮದಾಬಾದ್: ಆರ್ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ (RCB vs RR) ನಡುವಿನ ಐಪಿಎಲ್ ಕ್ವಾಲಿಫೈಯರ್-2 ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನ್ನುವ ಹಿರಿಮೆ ಹೊಂದಿರುವ ಮೋದಿ ಕ್ರೀಡಾಂಗಣ (Narendra Modi Stadium) 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿದ್ದು, ಶುಕ್ರವಾರ ಬಹುತೇಕ ಭರ್ತಿಯಾಗಿತ್ತು.
ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಶೇ.100ರಷ್ಟುಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೇ ಕ್ರೀಡಾಂಗಣದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಸಂಜೆ 7.30ರ ಪಂದ್ಯಕ್ಕೆ ಸಂಜೆ 4ರಿಂದಲೇ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಸ್ತೆಯುದ್ದಕ್ಕೂ ಜನರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಟ್ರಾಫಿಕ್ ಸಮಸ್ಯೆ ತಡೆಯಲು ಸುಮಾರು 1800 ಪೊಲೀಸರನ್ನು ಕ್ರೀಡಾಂಗಣದ ಸುತ್ತಲೂ ನಿಯೋಜಿಸಲಾಗಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ಶಾ ಸೇರಿದಂತೆ ಹಲವು ಗಣ್ಯರು ಪಂದ್ಯವನ್ನು ನೇರವಾಗಿ ವೀಕ್ಷಿಸಿದರು.
ರಣಜಿ ನಾಕೌಟ್: ಬಂಗಾಳ ಪರ ಆಡಲ್ಲ ಎಂದ ಸಾಹ
ಕೋಲ್ಕತಾ: ಭಾರತದ ಹಿರಿಯ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅವರು ಬಂಗಾಳ ಪರ ರಣಜಿ ನಾಕೌಟ್ ಪಂದ್ಯಗಳಲ್ಲಿ ಆಡಲ್ಲ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಗುರುವಾರ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಬಿ ಅಧ್ಯಕ್ಷ ಅಭಿಷೇಕ್ ದಾಲ್ಮೀಯಾ, ‘ಬಂಗಾಳ ಪರ ಆಡುವಂತೆ ಸಾಹ ಅವರನ್ನು ಮನವೊಲಿಸಲು ಪ್ರಯತ್ನಿಸಲಾಯಿತು. ಆದರೆ ಅವರು ನಿರಾಕರಿಸಿದ್ದಾರೆ’ ಎಂದಿದ್ದಾರೆ.
IPL 2022 ಬಟ್ಲರ್ ಸೆಂಚುರಿಯಿಂದ ಆರ್ಸಿಬಿ ಹೋರಾಟ ಅಂತ್ಯ, ಫೈನಲ್ ಪ್ರವೇಶಿಸಿದ ರಾಜಸ್ಥಾನ!
ಇನ್ನು ನಿರಾಕ್ಷೇಪಣಾ ಪತ್ರ(ಎನ್ಒಸಿ) ನೀಡಲು ಸಾಹ ಒತ್ತಾಯಿಸಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಎನ್ಒಸಿಗೆ ಸಾಹ ಮನವಿ ಮಾಡಿಲ್ಲ. ಬೇಕಿದ್ದರೆ ಅದನ್ನು ಕೊಡುತ್ತೇವೆ’ ಎಂದಿದ್ದಾರೆ. ಸಾಹ 2007ರಿಂದ ಬಂಗಾಳ ಪರ 122 ಪ್ರಥಮ ದರ್ಜೆ, 102 ಲಿಸ್ಟ್ ‘ಎ’ ಪಂದ್ಯಗಳನ್ನಾಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡದಿಂದ ಕೈಬಿಟ್ಟಾಗ ಸಿಟ್ಟಾಗಿದ್ದ ಸಾಹ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಬಿ ಕಾರ್ಯದರ್ಶಿ ಸಾಹ ವಿರುದ್ಧ ಕಿಡಿಕಾರಿದ್ದರು. ಇದರಿಂದ ಕೆರಳಿದ್ದ ಸಾಹ, ತಮ್ಮ ಬಳಿ ಕಾರ್ಯದರ್ಶಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು.
