ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದೆ. ಆದರೆ, ಕಳೆದ ವರ್ಷದ ವಿಕ್ಟರಿ ಪೆರೇಡ್ ವೇಳೆ ನಡೆದ ದುರ್ಘಟನೆಯಿಂದಾಗಿ ಈ ಬಾರಿ ತವರಿನಲ್ಲಿ ಸಂಭ್ರಮಾಚರಣೆ ನಡೆಸುವ ಬಗ್ಗೆ ಅನಿಶ್ಚಿತತೆ ಮೂಡಿದೆ.
ಅಹಮದಾಬಾದ್: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 31ರಂದು ನಡೆದ ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎನ್ನುವ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾತ್ರವಾಗಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿನ್ನೆ ಚಾಂಪಿಯನ್ ಆಗುತ್ತಿದ್ದೆಯೇ ರಾತ್ರಿಯೇ ಅಪ್ಪಟ ಅಭಿಮಾನಿಗಳು ಬೆಂಗಳೂರು ಸೇರಿದಂತೆ ದೇಶಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಇನ್ನು ಇದೆಲ್ಲದರ ನಡುವೆ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ವಿಕ್ಟರಿ ಪೆರೇಡ್ ನಡೆಸುತ್ತಾ ಎನ್ನುವುದರ ಬಗ್ಗೆ ಕುತೂಹಲ ಜೋರಾಗಿದೆ.
IPL 2026 ಗೆದ್ದ ಆರ್ಸಿಬಿ ತವರಿನಲ್ಲಿ ವಿಕ್ಟರಿ ಪೆರೇಡ್ ನಡೆಸುತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ ಕಳೆದ ಸೀಸನ್ನಲ್ಲಿ ಅಂದರೆ 2025ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ರಜತ್ ಪಾಟೀದಾರ್ ಪಡೆ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆರ್ಸಿಬಿ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರೂ, ವಿಕ್ಟರಿ ಪೆರೇಡ್ ವಿಚಾರದಲ್ಲಿ ಇನ್ನೂ ಅನಿಶ್ಚಿತತೆ ಮುಂದುವರೆದಿದೆ. ಅಂದಹಾಗೆ ಯಾವುದೇ ಐಪಿಎಲ್ ತಂಡವು ಟ್ರೋಫಿ ಗೆದ್ದರೇ ತಮ್ಮ ತವರಿನಲ್ಲಿ ವಿಕ್ಟರಿ ಪೆರೇಡ್ ನಡೆಸುತ್ತವೆ. ಆದರೆ ದುರಾದೃಷ್ಟವಶಾತ್ ಆರ್ಸಿಬಿ ಪರಿಸ್ಥಿತಿ ಹೀಗಿಲ್ಲ.
ಸದ್ಯ ಇರುವ ಮಾಧ್ಯಮಗಳ ವರದಿ ಪ್ರಕಾರ, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವುದೇ ಸಾರ್ವಜನಿಕ ಸಮಾರಂಭದಿಂದ ದೂರ ಉಳಿಯಲು ತೀರ್ಮಾನಿಸಿದೆ ಎನ್ನಲಾಗಿದೆ. ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ಸಿಬಿ ತಂಡವು ಅಹಮದಾಬಾದ್ನಿಂದ ಬೆಂಗಳೂರಿಗೆ ಬರಬೇಕಿತ್ತು. ಆದರೆ ಸದ್ಯ ಆರ್ಸಿಬಿ ತಂಡವು ಅಹಮದಾಬಾದ್ನ ಹೋಟೆಲ್ನಲ್ಲಿಯೇ ಉಳಿದುಕೊಂಡಿದೆ. ಈ ನಡುವೆ ಆರ್ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಒಂದು ಭಾವುಕ ಸಂದೇಶವನ್ನು ರವಾನಿಸಿದ್ದು, ಸಂಯಮ ಹಾಗೂ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ಮಾಡಿ ಎಂದು ಮನವಿ ಮಾಡಿಕೊಂಡಿದೆ.
ಎಂತಹ ರಾತ್ರಿ, ಎಂತಹ ಭಾವನೆ. ಆರ್ಸಿಬಿ ದೇಶದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು. ಇದು ನಿಮ್ಮ ಗೆಲುವು. ಸಂಭ್ರಮಾಚರಣೆ ಮಾಡುವ ವೇಳೆ ಜವಾಬ್ದಾರಿಯುತವಾಗಿ ವರ್ತಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಭ್ರಮಾಚರಣೆ ಮಾಡಿ. ನೆನಪುಗಳನ್ನು ಮೆಲುಕು ಹಾಕಿ, ನಿಮ್ಮ ಮನೆಯಲ್ಲಿಯೇ ಸಂಭ್ರಮಾಚರಣೆ ಮಾಡಿ ಎಂದು ಆರ್ಸಿಬಿ ಫ್ರಾಂಚೈಸಿ ಮನವಿ ಮಾಡಿಕೊಂಡಿದೆ.
ಇನ್ನೂ ಮರೆತಿಲ್ಲ ಕಳೆದ ವರ್ಷದ ದುರ್ಘಟನೆ:
ಕಳೆದ ವರ್ಷ ಆರ್ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುತ್ತಿದ್ದಂತೆಯೇ ಮರು ದಿನವೇ ತವರಿನ ಅಭಿಮಾನಿಗಳ ಜತೆ ಸಂಭ್ರಮಾಚರಣೆ ಮಾಡಲು ಬೆಂಗಳೂರಿಗೆ ಬಂದಿತ್ತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ ಫ್ಯಾನ್ಸ್ ಪೈಕಿ 11 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದರು. ಇನ್ನು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೇ ಕಾರಣಕ್ಕಾಗಿ ಆರ್ಸಿಬಿ ಈ ಬಾರಿ ವಿಕ್ಟರಿ ಪೆರೇಡ್ ನಡೆಸಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.

