Asianet Suvarna News Asianet Suvarna News

IPL Final: ಇಂದೂ ಫೈನಲ್‌ಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಅಹಮದಾಬಾದ್‌ನಲ್ಲಿ ನಿನ್ನೆ ಭಾರೀ ಮಳೆ
ಸಂಜೆ 7.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ ರಾತ್ರಿ 10.45 ಆದರೂ ಶುರುವಾಗಲಿಲ್ಲ
ಸಾವಿರಾರು ರುಪಾಯಿ ಕೊಟ್ಟು ಟಿಕೆಟ್‌ ಖರೀದಿಸಿದ್ದ ಅಭಿಮಾನಿಗಳಿಗೆ ನಿರಾಸೆ
ಪಿಚ್‌ ಕಾಪಾಡಲು ಮೈದಾನ ಸಿಬ್ಬಂದಿ ಹರಸಾಹಸ

What Happens If IPL Final 2023 Between CSK vs GT Gets Washed Out Due To Rain on Reserve Day kvn
Author
First Published May 29, 2023, 12:04 PM IST

ಅಹ​ಮ​ದಾ​ಬಾ​ದ್‌(ಮೇ.29): ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪಂದ್ಯಕ್ಕೆ ಇಷ್ಟು ಪ್ರಮಾಣದಲ್ಲಿ ಮಳೆ ಕಾಟ ಎದುರಾಯಿತು. ಭಾನುವಾರ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್‌್ಸ ನಡುವೆ ನಡೆಯಬೇಕಿದ್ದ 16ನೇ ಆವೃತ್ತಿಯ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಸಂಜೆ ಆರಂಭಗೊಂಡ ಮಳೆ ಟಾಸ್‌ ಕೂಡ ನಡೆಸಲು ಬಿಡಲಿಲ್ಲ. ರಾತ್ರಿ 10.45 ಆದರೂ ಮಳೆ ನಿಲ್ಲಲಿಲ್ಲ. ಅಹ​ಮ​ದಾ​ಬಾ​ದ್‌​ನಲ್ಲಿ ದಿನ​ಗಳ ಹಿಂದೆಯೇ ಮಳೆಯ ಮುನ್ಸೂ​ಚನೆ ಇತ್ತಾ​ದರೂ ಪಂದ್ಯದ ದಿನ ಮೋಡ ಕವಿದ ವಾತಾ​ವ​ರ​ವಿತ್ತು. ಆದರೆ ಸಂಜೆ ಆಗುತ್ತಿದ್ದಂತೆ ಸುರಿ​ಯಲು ಆರಂಭಿ​ಸಿದ ಮಳೆ ರಾತ್ರಿ​ವ​ರೆಗೂ ನಿಲ್ಲಲಿ​ಲ್ಲ. ಆಗಾಗ್ಗೆ ನಿಂತಂತೆ ಕಂಡರೂ, ಟಾಸ್‌ ನಡೆಸುವ, ಪಂದ್ಯ ಆರಂಭಿಸುವ ಬಗ್ಗೆ ಸಿಬ್ಬಂದಿ ನಿರ್ಧರಿಸುವ ವೇಳೆಗೆ ಮತ್ತೆ ಮಳೆ ಜೋರಾಗುತ್ತಿತ್ತು. ಹೀಗಾಗಿ ಐಪಿಎಲ್ ಫೈನಲ್‌ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಯಿತು.

ಬರೀ ಲೆಕ್ಕಾ​ಚಾ​ರ​ದಲ್ಲೇ ಸಮಯ ವ್ಯರ್ಥ!

ಭಾನುವಾರ ಕೆಲ​ವೊಮ್ಮೆ ಮಳೆ ಬಿಡುವು ನೀಡಿ​ದರೂ ಗಂಟೆ​ಗಳ ಕಾಲ ಸುರಿದ ಮಳೆ​ಯಿಂದಾಗಿ ಟಾಸ್‌ ಕೂಡಾ ಸಾಧ್ಯ​ವಾ​ಗಲಿಲ್ಲ. ಯಾವುದೇ ಓವರ್‌ ಕಡಿ​ತ​ವಿ​ಲ್ಲದೇ ರಾತ್ರಿ 9.40ರ ವರೆಗೂ ಪಂದ್ಯ ಆರಂಭಿ​ಸಲು ಅವ​ಕಾ​ಶ​ವಿ​ದ್ದರೂ ಮಳೆ ಬಿಟ್ಟೂ​ಬಿ​ಡ​ದೆ ಸುರಿದ ಪರಿ​ಣಾಮ ಸಂಪೂರ್ಣ 20 ಓವರ್‌ ಆಟಕ್ಕೆ ಅವ​ಕಾಶ ಸಿಗ​ಲಿಲ್ಲ. ಹೀಗಾಗಿ ಯಾವ ಸಮ​ಯಕ್ಕೆ ಮಳೆ ನಿಂತರೆ ಎಷ್ಟುಓವರ್‌ ಆಟ ಆಡಿ​ಸ​ಬ​ಹುದು, ಮಳೆ ನಿಲ್ಲ​ದಿ​ದ್ದರೆ ಏನಾ​ಗ​ಬ​ಹುದು, 5 ಓವರ್‌ ಆಟ ಯಾವಾಗ ಆರಂಭಿಸಬಹುದು, ಆಟ ಸಾಧ್ಯವಾಗದೆ ಇದ್ದರೆ ಏನಾಗಲಿದೆ, ಮೀಸಲು ಎಂಬ ಲೆಕ್ಕಾ​ಚಾ​ರದಲ್ಲೇ ಪಂದ್ಯದ ಅಧಿ​ಕಾ​ರಿ​ಗಳು, ಅಭಿ​ಮಾ​ನಿ​ಗಳು ಮುಳು​ಗಿ​ದ್ದ​ರು. ಇನ್ನು ಬಿಸಿ​ಸಿಐ ಕಾರ‍್ಯ​ದ​ರ್ಶಿ ಜಯ್‌ ಶಾ, ಐಪಿ​ಎಲ್‌ ಮುಖ್ಯಸ್ಥ ಅರುಣ್‌ ಧುಮಾಳ್‌ ಹಾಗೂ ಬಿಸಿ​ಸಿಐ ಅಧಿ​ಕಾ​ರಿ​ಗಳು ಮೈದಾ​ನ​ದಲ್ಲೇ ಇದ್ದು ಪರಿ​ಸ್ಥಿತಿ ಅವ​ಲೋ​ಕಿಸಿ ಅಂಪೈರ್‌ಗಳು, ಮೈದಾನ ಸಿಬ್ಬಂದಿಯೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿದ್ದ ದೃಶ್ಯಗಳು ಕಂಡುಬಂತು.

ಇಂದೂ ಮಳೆ ಬಂದರೆ ಏನಾಗುತ್ತೆ?

ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವು ಇದೀಗ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಸೋಮವಾರ ಪೂರ್ತಿ 20 ಓವರ್‌ಗಳ ಪಂದ್ಯ ನಡೆಯಬೇಕಿದೆ. ಒಂದು ವೇಳೆ ಮತ್ತೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದರೆ, ರಾತ್ರಿ 9.40ರ ವರೆಗೂ ಓವರ್ ಕಡಿತಗೊಳಿಸದೇ ಪಂದ್ಯ ನಡೆಸಬಹುದು. ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲು ಮಧ್ಯರಾತ್ರಿ 12.06ರ ವರೆಗೆ ಸಮಯಾವಕಾಶವಿರಲಿದೆ. ಅದೂ ಸಾಧ್ಯವಾಗದೇ ಇದ್ದರೆ ಸೂಪರ್ ಓವರ್‌ ಮೂಲಕ ಫಲಿತಾಂಶ ನಿರ್ಧರಿಸಲು ಮಧ್ಯರಾತ್ರಿ 12.50ರ ವರೆಗೂ ಕಾಲಾವಕಾಶ ಇರಲಿದೆ. ಸೂಪರ್ ಓವರ್‌ ಕೂಡಾ ನಡೆಸಲು ಸಾಧ್ಯವಾಗದೇ ಇದ್ದರೆ, ಲೀಗ್ ಹಂತ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುವುದು.

ಪ್ರೇಕ್ಷ​ಕ​ರಿಗೆ ಭಾರೀ ನಿರಾ​ಸೆ

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎನಿ​ಸಿ​ಕೊಂಡಿ​ರುವ ಅಹ​ಮ​ದಾ​ಬಾದ್‌ ಕ್ರೀಡಾಂಗ​ಣ​ದಲ್ಲಿ ಐಪಿ​ಎಲ್‌ ಫೈನಲ್‌ ಪಂದ್ಯ​ ವೀಕ್ಷ​ಣೆ​ಗಾಗಿ ಸುಮಾ​ರು 75000ಕ್ಕೂ ಹೆಚ್ಚು ಅಭಿ​ಮಾ​ನಿ​ಗಳು ಸೇರಿ​ದ್ದರು. ಮಳೆಯಿಂದ ಪಾರಾಗಲು ಕ್ರೀಡಾಂಗಣದ ಸುರಕ್ಷಿತ ಸ್ಥಳಗಳಿಗೆ ಓಡುತ್ತಿದ್ದ ಅಭಿಮಾನಿಗಳು, ಮಳೆ ಸ್ವಲ್ಪ ಬಿಡುವು ನೀಡಿದರೂ ಮತ್ತೆ ತಮ್ಮ ಆಸನಗಳತ್ತ ಮರಳುತ್ತಿದ್ದರು. ಹೀಗೆ ಹಲವು ಬಾರಿ ಅಭಿಮಾನಿಗಳು ಓಡಾಡಬೇಕಾಯಿತು.

ಮೊಟಕುಗೊಂಡ ಸಮಾರೋಪ ಸಮಾರಂಭ!

ಬಿಸಿಸಿಐ ಫೈನಲ್‌ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಿತ್ತು. ಡಿಜೆ ನ್ಯೂಕ್ಲೆಯಾ ಅವರ ಪ್ರದರ್ಶನವೊಂದೇ ನಡೆದಿದ್ದು. ಇನ್ನುಳಿದ ಪ್ರದರ್ಶನಗಳು ಶುರುವಾಗುವ ವೇಳೆಗೆ ಮಳೆ ಸುರಿದ ಕಾರಣ ಸಮಾರೋಪ ಸಮಾರಂಭವನ್ನು ಮೊಟಕುಗೊಳಿಸಲಾಯಿತು.

ಮೈದಾನ ಸಿಬ್ಬಂದಿ ಸುಸ್ತೋ ಸುಸ್ತು!

ಮಳೆ ಅಲ್ಪ ಸಮಯ ಬಿಡುವು ನೀಡಿ ಮತ್ತೆ ಮತ್ತೆ ಸುರಿ​ಯು​ತ್ತಿದ್ದ ಕಾರ​ಣ ಮೈದಾನ ಸಿಬ್ಬಂದಿ ಪಿಚ್‌ಗೆ ಕವ​ರ್‌​ಗ​ಳನ್ನು ಹಾಕಿ, ಬಳಿಕ ತೆರ​ವು​ಗೊ​ಳಿ​ಸು​ವು​ದ​ರಲ್ಲೇ ಹೈರಾ​ಣಾ​ದರು. ಹಲವು ಸಿಬ್ಬಂದಿ ಮಳೆ​ಯಲ್ಲಿ ಸಂಪೂರ್ಣ ಒದ್ದೆ​ಯಾ​ಗಿಯೇ ಕರ್ತವ್ರ್ಯ ನಿರ್ವ​ಹಿ​ಸು​ತ್ತಿದ್ದ ದೃಶ್ಯ​ಗಳೂ ಕ್ಯಾಮ​ರಾ​ದಲ್ಲಿ ಸೆರೆ​ಯಾ​ಯಿ​ತು. ಸೂಪರ್‌ ಸಾಪರ್‌ಗಳು ಬಿಡುವಿಲ್ಲದಂತೆ ಮೈದಾನದ ತುಂಬಾ ಓಡಾಡಿದ ದೃಶ್ಯವೂ ಸಾಮಾನ್ಯವಾಗಿತ್ತು.

Follow Us:
Download App:
  • android
  • ios