ಕ್ರಿಕೆಟಿಗ ಅಶೋಕ್ ದಿಂಡಾ ಮೇಲೆ ಮಾರಕ ದಾಳಿ; Y+ ಭದ್ರತೆ ನೀಡಿದ ಕೇಂದ್ರ!
ಕಳೆದ ತಿಂಗಳು ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಅಶೋಕ್ ದಿಂಡಾ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ ಆರಂಭದಲ್ಲೇ ದಿಂಡಾ ಮೇಲೆ ಮಾರಕ ದಾಳಿ ನಡೆದಿದ್ದು, ಕೇಂದ್ರ ಸರ್ಕಾರ Y+ ಭದ್ರತೆ ನೀಡಿದೆ.
ಕೋಲ್ಕತಾ(ಮಾ.31): ಟೀಂ ಇಂಡಿಯಾ ವೇಗಿ ಅಶೋಕ್ ದಿಂಡಾ ಕ್ರಿಕೆಟ್ ಕರಿಯರ್ ಹಲವು ಏಳು ಬೀಳುಗಳನ್ನು ಕಂಡಿದೆ. ದೇಶಿ ಕ್ರಿಕೆಟ್ನಲ್ಲಿ ಮಿಂಚಿದ ದಿಂಡಾ ಫೆಭ್ರವರಿ 2, 2021ರಲ್ಲಿ ವಿದಾಯ ಘೋಷಿಸಿದ್ದಾರೆ. ವಿದಾಯ ಹೇಳಿದ ಬೆನ್ನಲ್ಲೇ ದಿಂಡಾ, ಬಿಜೆಪಿ ಸೇರಿಕೊಂಡು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ಸ್ಪರ್ಧಿಸುತ್ತಿರುವ ದಿಂಡಾಗೆ ಇದೀಗ Y+ ಭದ್ರತೆ ನೀಡಲಾಗಿದೆ.
ಟೀಂ ಇಂಡಿಯಾ ವೇಗಿ ಅಶೋಕ್ ದಿಂಡಾ ಕ್ರಿಕೆಟ್ಗೆ ಗುಡ್ಬೈ
ಪಶ್ಚಿಮ ಬಂಗಾಳದ ಮೊಯ್ನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಿಂಡಾ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ ಇದೇ ವೇಳೆ ದಿಂಡಾ ಮೇಲೆ ಮಾರಕ ದಾಳಿ ನಡೆಸಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪೂರ್ವ ಮಿಡ್ನಾಪೂರ್ನಲ್ಲಿ ದಿಂಡಾ ಮೇಲೆ 50ಕ್ಕೂ ಹೆಚ್ಚು ಮಂದಿ ದಾಳಿ ನಡೆಸಿದ್ದಾರೆ.
ಮಾರ್ಚ್ 30 ರಂದು ದಿಂಡಾ ಪ್ರಯಾಣಿಸುತ್ತಿದ್ದ ಕಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಡಿಗೆ, ಕೋಲುಗಳಿಂದ ಕಾರಿನ ಮೇಲೆ ದಾಳಿ ಮಾಡಿದ ಪರಿಣಾಮ ದಿಂಡಾ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಇದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದಾಳಿ. ಮೊಯ್ನಾ ಕ್ಷೇತ್ರದಲ್ಲಿ ಟಿಎಂಸಿ ಸೋಲು ಖಚಿತವಾಗುತ್ತಿದ್ದಂತೆ ಇದೀಗ ಎದುರಾಳಿಗಳನ್ನೇ ಮುಗಿಸಲು ಟಿಎಂಸಿ ಯತ್ನಿಸುತ್ತಿದೆ ಎಂದು 37 ವರ್ಷದ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಆರೋಪಿಸಿದ್ದಾರೆ.
ಮಾರಕ ದಾಳಿ ಬಳಿಕ ಅಶೋಕ್ ದಿಂಡಾಗೆ Y+ ಸೆಕ್ಯೂರಿಟಿ ನೀಡಲಾಗಿದೆ. CRPF ಭದ್ರತೆ ಜವಾಬ್ದಾರಿ ವಹಿಸಿದೆ. CRPF ಕಮಾಂಡರ್, ನಾಲ್ವರು ಪೊಲೀಸ್ ಪೇದೆ ಹಾಗೂ ಇಬ್ಬರು ಪರ್ಸನಲ್ ಸೆಕ್ಯೂರಿಟಿ ಆಫೀಸರ್ ನೇಮಕ ಮಾಡಲಾಗಿದೆ.