DRS Controversy: ಡಿಆರ್ಎಸ್ ಬಗ್ಗೆ ವಿರಾಟ್ ಕೊಹ್ಲಿ ಕೆಂಡಾಮಂಡಲ..!
* ಕೇಪ್ಟೌನ್ ಟೆಸ್ಟ್ ಪಂದ್ಯದ ಡಿಆರ್ಎಸ್ ಬಗ್ಗೆ ಕೊಹ್ಲಿ ಸಿಡಿಮಿಡಿ
* ಅಶ್ವಿನ್ ಬೌಲಿಂಗ್ನಲ್ಲಿ ಎಲ್ಗರ್ ಅವರನ್ನು ಔಟ್ ನೀಡಿದ್ದ ಅಂಪೈರ್
* ಡಿಆರ್ಎಸ್ನಲ್ಲಿ ಚೆಂಡು ವಿಕೆಟ್ಗಿಂತ ಮೇಲೆ ಪುಟಿತ ಕಂಡಿರುವಂತೆ ಗೋಚರ
ಕೇಪ್ಟೌನ್(ಜ.14): ತಂತ್ರಜ್ಞಾನ ಶೇ.100ರಷ್ಟು ಪಾರದರ್ಶಕವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. 3ನೇ ದಿನದಾಟದ ವೇಳೆ ರವಿಚಂದ್ರನ್ ಅಶ್ವಿನ್ (Ravichandran Ashwin) ಎಸೆತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಡೀನ್ ಎಲ್ಗರ್ (Dean Elgar) ಎಲ್ಬಿ ಬಲೆಗೆ ಬಿದ್ದಿದ್ದರು. ಅಂಪೈರ್ ಎರಾಸ್ಮಸ್ ನೀಡಿದ್ದ ತೀರ್ಪನ್ನು ಎಲ್ಗರ್ ಪ್ರಶ್ನಿಸಿದರು. ಹಾಕ್-ಐ ತಂತ್ರಜ್ಞಾನ ಬಳಕೆ ಮಾಡಿದಾಗ ಚೆಂಡು ಸ್ಟಂಫ್ಸ್ನಿಂದ ಮೇಲೆ ಹೋಗುತ್ತಿದೆ ಎಂದು ತಿಳಿಸಲಾಯಿತು. ಈ ತೀರ್ಪು ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು (Virat Kohli) ಕೆರಳಿಸಿತು.
ಸ್ವತಃ ಅಂಪೈರ್ ಎರಾಸ್ಮಸ್ ‘ಇದು ಅಸಾಧ್ಯ’ ಎಂದರು. ಸ್ಟಂಪ್ ಮೈಕ್ನ ಹತ್ತಿರಕ್ಕೆ ಹೋಗಿ ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ, ಪ್ರಸಾರಕರನ್ನು ಟೀಕಿಸಿದರು. ‘ಬರೀ ಎದುರಾಳಿ ಮಾತ್ರವಲ್ಲ, ನಿಮ್ಮ ತಂಡದ ಬಗ್ಗೆಯೂ ಗಮನಿಸಿ’ ಎಂದರು. ಉಪನಾಯಕ ಕೆ.ಎಲ್.ರಾಹುಲ್(KL Rahul), ‘11 ಆಟಗಾರರ ವಿರುದ್ಧ ಇಡೀ ದೇಶವೇ ನಿಂತಿದೆ’ ಎನ್ನುವುದು ಕೇಳಿಸಿತು. ಅಶ್ವಿನ್ ಆತಿಥೇಯ ಪ್ರಸಾರಕರಾದ ಸೂಪರ್ ಸ್ಪೋರ್ಟ್ ವಾಹಿನಿಯನ್ನು ಗುರಿಯಾಗಿಸಿಕೊಂಡು ‘ಗೆಲ್ಲಲು ಬೇರೆ ದಾರಿಗಳನ್ನು ಹುಡುಕಿ’ ಎಂದು ಕಿಡಿಕಾರಿದರೆ, ಮಯಾಂಕ್ ಅಗರ್ವಾಲ್(Mayank Agarwal) ‘ಆಟಕ್ಕೆ ಕಳಂಕ ತರುವಂತಾಗುತ್ತಿದೆ. ಇದು ಸರಿಯಲ್ಲ’ ಎಂದಿದ್ದು ಸ್ಪಷ್ಟವಾಗಿ ಕೇಳಿಸಿತು. ಸಾಮಾಜಿಕ ತಾಣಗಳಲ್ಲಿ ಈ ವಿವಾದದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಜೋಹಾನ್ಸ್ಬರ್ಗ್ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ಎರಡನೇ ಇನಿಂಗ್ಸ್ನಲ್ಲಿ ಅಜೇಯ 96 ರನ್ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ್ದರು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸುವಂತೆ ಮಾಡಿದ್ದರು. ಆದರೆ ಇದೀಗ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಕೊನೆಯಲ್ಲಿ ಎಲ್ಗರ್ ಅವರ ವಿಕೆಟ್ ಕಬಳಿಸುವಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದು, ನಾಲ್ಕನೇ ದಿನದಾಟದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕುತೂಹಲಘಟ್ಟ ತಲುಪಿದ ಕೇಪ್ಟೌನ್ ಟೆಸ್ಟ್
ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಈಡೇರುತ್ತೋ ಇಲ್ಲವೋ ಎನ್ನುವುದು ಶುಕ್ರವಾರ ನಿರ್ಧಾರವಾಗಲಿದೆ. 3ನೇ ಹಾಗೂ ಅಂತಿಮ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ ಆತಿಥೇಯ ತಂಡಕ್ಕೆ ಗೆಲ್ಲಲು ಕೇವಲ 212 ರನ್ ಗುರಿ ನಿಗದಿ ಮಾಡಿದ್ದು, 3ನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲ್ಲಲು ಇನ್ನು 111 ರನ್ ಗಳಿಸಬೇಕಿದ್ದು, ಭಾರತಕ್ಕೆ 8 ವಿಕೆಟ್ ಬೇಕಿದೆ.
SA vs India 3rd Test : ಗೆಲುವಿನ ಹಾದಿಯಲ್ಲಿ ದಕ್ಷಿಣ ಆಫ್ರಿಕಾ, ತಿರುಗೇಟು ನೀಡುತ್ತಾ ಟೀಂ ಇಂಡಿಯಾ?
ದಿನದಾಟದ ಅಂತಿಮ ಓವರಲ್ಲಿ ಡೀನ್ ಎಲ್ಗರ್ ವಿಕೆಟ್ ಕಿತ್ತ ಭಾರತ, ಪಂದ್ಯ ದ.ಆಫ್ರಿಕಾ ಕಡೆಗೆ ಸಂಪೂರ್ಣ ವಾಲದಂತೆ ತಡೆದಿದೆ. ಆದರೂ ಕೀಗನ್ ಪೀಟರ್ಸನ್ 48 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಹಿಂದಿನ ಪಂದ್ಯಗಳಲ್ಲಿ ಭಾರತವನ್ನು ಕಾಡಿದ್ದ ತೆಂಬ ಬವುಮಾ ಇನ್ನಷ್ಟೇ ಕ್ರೀಸ್ಗಿಳಿಯಬೇಕಿದೆ. 4ನೇ ದಿನ ಭಾರತೀಯ ಬೌಲರ್ಗಳಿಂದ ಅಸಾಧಾರಣ ಪ್ರದರ್ಶನ ಮೂಡಿಬಂದರಷ್ಟೇ ಭಾರತಕ್ಕೆ ಗೆಲುವು ಒಲಿಯಲಿದ್ದು, ಸ್ವಲ್ಪ ಮೈಮರೆತರೂ ದಕ್ಷಿಣ ಆಫ್ರಿಕಾ ವಿಜಯ ಪತಾಕೆ ಹಾರಿಸಲಿದೆ.
‘ಪುರಾನೆ’ಗಳ ಬಗ್ಗೆ ಭಾರೀ ಟ್ರೋಲ್!
ಸತತ ವೈಫಲ್ಯ ಅನುಭವಿಸುತ್ತಿರುವ ಪೂಜಾರ ಹಾಗೂ ರಹಾನೆಯನ್ನು ‘ಪುರಾನೆ’(ಹಳೆಯದು) ಎಂದು ಟೀಕಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು, ಸಾಮಾಜಿಕ ತಾಣಗಳಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದಾರೆ. ಪೂಜಾರ ಔಟಾಗಿ ಹೊರಟರೆ ಹಿಂದೆ ರಹಾನೆಯೂ ಹೋಗುತ್ತಾರೆ ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದರೆ, ಇಬ್ಬರೂ ಈಗಾಗಲೇ ನಿವೃತ್ತಿ ಬಳಿಕ ಏನು ಮಾಡಬೇಕು ಎನ್ನುವುದನ್ನು ಚರ್ಚಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.