Rohit Sharma Fitness Test: ಮೊದಲ ಪರೀಕ್ಷೆ ಪಾಸಾದ ಟೀಂ ಇಂಡಿಯಾ ಕ್ರಿಕೆಟಿಗ
* ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ
* ಬೆಂಗಳೂರಿನ ಎನ್ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಹಿಟ್ ಮ್ಯಾನ್
* ಇದೀಗ ಮೊದಲ ಫಿಟ್ನೆಸ್ ಪಾಸ್ ಮಾಡಿದ ಟೀಂ ಇಂಡಿಯಾ ಸೀಮಿತ ಓವರ್ಗಳ ತಂಡದ ನಾಯಕ
ಬೆಂಗಳೂರು(ಡಿ.26): ಭಾರತ ಏಕದಿನ ಹಾಗೂ ಟಿ20 ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) (National Cricket Academy)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಶನಿವಾರ ನಡೆಸಲಾದ ಮೊದಲ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ನಾಯು ಸೆಳೆತದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ (Test Cricket Series) ಅಲಭ್ಯರಾಗಿದ್ದ ರೋಹಿತ್, ಎನ್ಸಿಎ(NCA)ನಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು. ಭಾನುವಾರ 2ನೇ ಹಂತದ ಫಿಟ್ನೆಸ್ ಪರೀಕ್ಷೆಗೆ (Fitness Test) ರೋಹಿತ್ ಒಳಗಾಗಲಿದ್ದು, ಅದರಲ್ಲೂ ಉತ್ತೀರ್ಣರಾದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರು ಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಎನ್ಸಿಎ ಶಿಬಿರದಲ್ಲಿ ಪಾಲ್ಗೊಂಡಿರುವ ರವೀಂದ್ರ ಜಡೇಜಾ (Ravindra Jadeja) ಹಾಗೂ ಅಕ್ಷರ್ ಪಟೇಲ್ (Axar Patel) ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದರು. ಟೀಂ ಇಂಡಿಯಾ(Team India), ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
3 ಪಂದ್ಯಗಳ ಏಕದಿನ ಸರಣಿಗೆ ಸೋಮವಾರ ಇಲ್ಲವೇ ಮಂಗಳವಾರ ತಂಡದ ಆಯ್ಕೆ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 19ರಿಂದ ಆರಂಭವಾಗಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರ ಬಾಕ್ಸಿಂಗ್ ಡೇ ದಿನದಂದು ಆರಂಭವಾಗಲಿದೆ. ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದೀಗ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಪರ ಕನ್ನಡದ ಜೋಡಿಯಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್. ರಾಹುಲ್ ಆರಂಭಿಕರಾಗಿ ಇನಿಂಗ್ಸ್ ಆರಂಭಿಸಲಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರಿಂದ ಕೆ.ಎಲ್. ರಾಹುಲ್ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.
9 ವರ್ಷ ಬಳಿಕ ರಣಜಿ ಟ್ರೋಫಿಯಲ್ಲಿ ಶ್ರೀಶಾಂತ್?
ತಿರುವನಂತಪುರ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ (IPL Spot Fixing) ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐನಿಂದ (BCCI) ನಿಷೇಧಕ್ಕೊಳಗಾಗಿ ಬಳಿಕ ಕ್ಲೀನ್ಚಿಟ್ ಪಡೆದ ವೇಗಿ ಎಸ್. ಶ್ರೀಶಾಂತ್ (S Sreesanth) 9 ವರ್ಷಗಳ ಬಳಿಕ ರಣಜಿ ಟ್ರೋಫಿಗೆ (Ranji Trophy) ಮರಳಲು ಕಾತರಿಸುತ್ತಿದ್ದಾರೆ. ಶನಿವಾರ ಕೇರಳ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದ 24 ಸದಸ್ಯರ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರಿದೆ.
IPL 2022: ಸಾಧ್ಯವಾದರೆ ಎಂದೆಂದಿಗೂ ನಾನು ಕೆಕೆಆರ್ ಪರವೇ ಆಡಬೇಕೆಂದಿದ್ದೇನೆಂದ ಶುಭ್ಮನ್ ಗಿಲ್
ಶ್ರೀಶಾಂತ್ ಕ್ಲೀನ್ ಚಿಟ್ ಪಡೆದ ಬಳಿಕ ಕೇರಳ ಪರ ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಹಾಗೂ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ (Syed Mushtaq Ali Trophy) ಆಡಿದ್ದಾರೆ. ಆದರೆ ಕೊನೆ ಬಾರಿಗೆ ಅವರು ಪ್ರಥಮ ದರ್ಜೆ ಪಂದ್ಯವನ್ನಾಡಿದ್ದು 2013ರಲ್ಲಿ. ಜನವರಿ 13ರಿಂದ 2022ನೇ ಸಾಲಿನ ರಣಜಿ ಟ್ರೋಫಿ ಆರಂಭಗೊಳ್ಳಲಿದೆ.