ಎಲ್ಲಾ ಮಾದರಿ ಕ್ರಿಕೆಟ್ಗೆ ಯೂಸುಫ್ ಪಠಾಣ್ ವಿದಾಯ; ವಿಶ್ವಕಪ್, ಸಚಿನ್ ನೆನಪಿಸಿದ ಆಲ್ರೌಂಡರ್!
ಟೀಂ ಇಂಡಿಯಾ ವಿಶ್ವಕಪ್ ವಿಜೇತ ತಂಡದ ಸದಸ್ಯ, ಭಾರತದ ಹಲವು ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಹಿಸಿದ ಯೂಸುಫ್ ಪಠಾಣ್ ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ವಿದಾಯ ಪತ್ರದಲ್ಲಿ ಯೂಸುಫ್ ಹಲವು ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಬರೋಡ(ಫೆ.26): ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ಶ್ರೇಷ್ಠ ನಾಯಕ ಎೆಂದು ಗುರುತಿಸಿಕೊಂಡಿದ್ದ ಆರ್ ವಿನಯ್ ಕುಮಾರ್ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾದ ಮತ್ತೊರ್ವ ಕ್ರಿಕೆಟಿಗ ಯೂಸುಫ್ ಪಠಾಣ್ ವಿದಾಯ ಹೇಳಿದ್ದಾರೆ. ಟ್ವಿಟರ್ ಮೂಲಕ ಪಠಾಣ್ ತಮ್ಮ ವಿದಾಯ ಘೋಷಿಸಿದ್ದಾರೆ.
ಎಲ್ಲಾ ಮಾದರಿಯ ಕ್ರಿಕೆಟ್ಗೆ ದಿಢೀರ್ ಗುಡ್ಬೈ ಹೇಳಿದ ವಿನಯ್ ಕುಮಾರ್..!
ಪೋಷಕರು, ಸ್ನೇಹಿತರು, ಅಭಿಮಾನಿಗಳು, ಮಾರ್ಗದರ್ಶಕರು, ಸಲಹೆ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಯೂಸುಫ್ ಹೇಳಿದ್ದಾರೆ. ಭಾವನಾತ್ಮಕ ಪತ್ರ ಬರೆದಿರುವ ಯೂಸುಫ್ ಪಠಾಣ್, ತಮ್ಮ ಕ್ರಿಕೆಟ್ ಕರಿಯರ್ನ ಕೆಲ ಅವಿಸ್ಮರಣೀಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ನನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇನೆ. ಈ ಮೂಲಕ ನನ್ನ ವಿದಾಯ ಅಧೀಕೃತವಾಗಿ ಘೋಷಿಸುತ್ತಿದ್ದೇನೆ. ವಿಶ್ವಕಪ್ ಗೆಲುವು ಹಾಗೂ ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸಿರುವುದು ನನ್ನ ಕ್ರಿಕೆಟ್ ಜೀವನದ ಅವಿಸ್ಮರಣೀಯ ಕ್ಷಣ ಎಂದಿದ್ದಾರೆ.
2007ರಲ್ಲಿ ಟಿ20 ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯೂಸುಫ್ ಪಠಾಣ್, 2021ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಯೂಸುಫ್ ಕೊನೆಯ ಬಾರಿ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಂಡಿರುವುದು 2012ರಲ್ಲಿ. ಬಳಿಕ ಟೀಂ ಇಂಡಿಯಾ ಪರ ಆಡಿಲ್ಲ.
2019ರ ಐಪಿಎಲ್ ಟೂರ್ನಿ ಕೊನೆಯದಾಗಿ ಆಡಿದ ಚುಟುಕ ಸರಣಿಯಾಗಿದೆ. ಇನ್ನು ರಣಜಿ ತಂಡದಲ್ಲಿ ಸಕ್ರೀಯರಾಗಿದ್ದರು.