* ಭಾರತ-ಶ್ರೀಲಂಕಾ ನಡುವಿನ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭ* ಹೊಸ ಮುಖಗಳಿಗೆ ಟೀಂ ಇಂಡಿಯಾದಲ್ಲಿ ಮಣೆಹಾಕುವ ಸಾಧ್ಯತೆ* ದೇವದತ್ ಪಡಿಕ್ಕಲ್‌ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಸಾಧ್ಯತೆ

ಕೊಲಂಬೊ(ಜು.25): ಏಕದಿನ ಸರಣಿ ಗೆದ್ದ ಬಳಿಕ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನೂ ಗೆಲ್ಲಲು ಭಾರತ ತಂಡ ಪಣತೊಟ್ಟಿದೆ. 3 ಪಂದ್ಯಗಳ ಸರಣಿ ಭಾನುವಾರ ಆರಂಭಗೊಳ್ಳಲಿದ್ದು, ಟಿ20 ವಿಶ್ವಕಪ್‌ಗೆ ಆಯ್ಕೆಯಾಗಲು ಕೆಲ ಹೊಸ ಮುಖಗಳಿಗೆ ಇದು ಉತ್ತಮ ವೇದಿಕೆಯಾಗಲಿದೆ.

ಕರ್ನಾಟಕದ ದೇವದತ್‌ ಪಡಿಕ್ಕಲ್‌ ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಬ್ಯಾಟ್ಸ್‌ಮನ್‌ ಋುತುರಾಜ್‌ ಗಾಯಕ್ವಾಡ್‌ ಸಹ ಅವಕಾಶ ಪಡೆಯಲು ಕಾಯುತ್ತಿದ್ದಾರೆ. ಸರಣಿ ಗೆದ್ದ ಬಳಿಕವಷ್ಟೇ ಹೊಸಬರಿಗೆ ಅವಕಾಶ ನೀಡುವ ಪ್ರಯೋಗ ಮಾಡುತ್ತೇವೆ ಎಂದು ನಾಯಕ ಶಿಖರ್‌ ಧವನ್‌ ಹೇಳಿದ್ದಾರಾದರೂ, ತಂಡದಲ್ಲಿ ಕೆಲ ಬದಲಾವಣೆಗಳು ಆಗಬಹುದು ಎಂದು ವಿಶ್ಲೇಷಿಸಲಾಗಿದೆ. ಮತ್ತೊಂದೆಡೆ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದ ಶ್ರೀಲಂಕಾ, ತನ್ನ ಗೆಲುವಿನ ಓಟವನ್ನು ಟಿ20 ಸರಣಿಯಲ್ಲೂ ಮುಂದುವರಿಯಲು ಕಾಯುತ್ತಿದೆ.

Scroll to load tweet…

ಪಂದ್ಯ: ರಾತ್ರಿ 8ರಿಂದ
ನೇರ ಪ್ರಸಾರ: ಸೋನಿ ಟೆನ್‌

ಇಂಗ್ಲೆಂಡ್‌ ಸರಣಿಗೆ ಪೃಥ್ವಿ, ಸೂರ್ಯ ಆಯ್ಕೆ: ವರದಿ

ನವದೆಹಲಿ: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿರುವ ಕಾರಣ, ಶ್ರೀಲಂಕಾದಲ್ಲಿ ಸೀಮಿತ ಓವರ್‌ ಸರಣಿ ಆಡುತ್ತಿರುವ ತಂಡದಲ್ಲಿರುವ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್‌ ಯಾದವ್‌ರನ್ನು ಇಂಗ್ಲೆಂಡ್‌ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. 

INDvSL; ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾರಿಗೆ ಚಾನ್ಸ್? ಇಲ್ಲಿದೆ ಸಂಭವನೀಯ ಪ್ಲೇಯಿಂಗ್ 11!

ಶುಭ್‌ಮನ್‌ ಗಿಲ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಆವೇಶ್‌ ಖಾನ್‌ ಗಾಯಗೊಂಡು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಕಾರಣ ಬಿಸಿಸಿಐ ಬದಲಿ ಆಟಗಾರರನ್ನು ಕಳುಹಿಸಲು ಸಿದ್ಧತೆ ಆರಂಭಿಸಿದೆ. ಲಂಕಾ ವಿರುದ್ಧದ ಟಿ20 ಸರಣಿ ವೇಳೆ ಇಲ್ಲವೇ ಸರಣಿ ಮುಕ್ತಾಯಗೊಂಡ ಬಳಿಕ ಪೃಥ್ವಿ ಹಾಗೂ ಸೂರ್ಯ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.