ಬೆನ್ನುನೋವಿನಿಂದಾಗಿ ವೇಗಿ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ತವರು ಸರಣಿಯಿಂದ ಹೊರಗುಳಿಯುವ ಸಾಧ್ಯತೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಗಾಯಗೊಂಡ ಬುಮ್ರಾ, ಗಾಯದ ತೀವ್ರತೆ ಅನುಸಾರ 2-3 ವಾರಗಳಿಂದ 3 ತಿಂಗಳವರೆಗೆ ವಿಶ್ರಾಂತಿ ಪಡೆಯಬೇಕಾಗಬಹುದು. ಚಾಂಪಿಯನ್ಸ್ ಟ್ರೋಫಿಗೆ ಮೊದಲು ಫಿಟ್ ಆಗುವ ನಿರೀಕ್ಷೆಯಿದೆ.

ಸಿಡ್ನಿ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಬೆನ್ನು ನೋವಿಗೆ ತುತ್ತಾಗಿದ್ದು, ಇಂಗ್ಲೆಂಡ್‌ ವಿರುದ್ಧ ತವರಿನ ಸರಣಿಯ ಬಹುತೇಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ ಸರಣಿಯಲ್ಲಿ 32 ವಿಕೆಟ್‌ ಪಡೆದಿರುವ ಬುಮ್ರಾ, ಕೊನೆ ಟೆಸ್ಟ್‌ನ ದಿನ ಬೆನ್ನು ನೋವಿನಿಂದಾಗಿ ಮೈದಾನ ತೊರೆದಿದ್ದರು. ಅವರು ಕೊನೆ ದಿನ ಬೌಲ್‌ ಮಾಡಿರಲಿಲ್ಲ. ಸದ್ಯದ ವರದಿ ಪ್ರಕಾರ, ಬುಮ್ರಾ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಅವರ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ಇಟ್ಟಿದೆ. ಒಂದು ವೇಳೆ ಗಾಯದ ಪ್ರಮಾಣ ಸಣ್ಣದಿದ್ದರೆ ಕನಿಷ್ಠ 2-3 ವಾರ, ಗಾಯ ಹೆಚ್ಚಿದ್ದರೆ ಕನಿಷ್ಠ 3 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ.

ಇಂಗ್ಲೆಂಡ್‌ ಸರಣಿ ಜನವರಿ 22ರಿಂದ ಆರಂಭಗೊಳ್ಳಲಿದ್ದು, 5 ಟಿ20, 3 ಏಕದಿನ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಬುಮ್ರಾ ಆಡುವ ಸಾಧ್ಯತೆಯಿಲ್ಲ. ಗಾಯ ಹೆಚ್ಚಿಲ್ಲದಿದ್ದರೆ ಅವರು ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಫಿಟ್‌ ಆಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಟೆಸ್ಟ್‌ ಕ್ರಿಕೆಟ್‌ಗೆ ಹೊಸ ಶೈಲಿ, 2 ದರ್ಜೆಗಳ ಸರಣಿಗೆ ಐಸಿಸಿ ಪ್ಲ್ಯಾನ್‌: ಏನಿದು ಹೊಸ ಯೋಜನೆ?

ವಿಜಯ್‌ ಹಜಾರೆ ಟ್ರೋಫಿ: ಪ್ರಸಿದ್ಧ್‌, ಪಡಿಕ್ಕಲ್‌ ನಾಕೌಟ್‌ಗೆ ಲಭ್ಯ

ಬೆಂಗಳೂರು: ಜನವರಿ 11ರಿಂದ 18ರ ವರೆಗೆ ಬರೋಡಾದಲ್ಲಿ ನಡೆಯಲಿರುವ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್‌ ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ದೇವದತ್‌ ಪಡಿಕ್ಕಲ್‌, ಪ್ರಸಿದ್ಧ್‌ ಕೃಷ್ಣ ತಂಡಕ್ಕೆ ಮರಳಿದ್ದು, ನಾಕೌಟ್‌ಗೂ ಮುನ್ನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ರಾಜ್ಯ ತಂಡ ಜ.11ರಂದು ಬರೋಡಾ ವಿರುದ್ಧ ಕ್ವಾರ್ಟರ್‌ ಫೈನಲ್‌ ಆಡಲಿದೆ. ತಂಡವನ್ನು ಮಯಾಂಕ್‌ ಅಗರ್‌ವಾಲ್‌ ಮುನ್ನಡೆಸಲಿದ್ದು, ಶ್ರೇಯಸ್‌ ಗೋಪಾಲ್‌ ಉಪನಾಯಕನಾಗಿ ಮುಂದುವರಿಯಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಮುಂದಿದೆ 6 ಬೆಟ್ಟದಷ್ಟು ಸವಾಲು!

ತಂಡ: ಮಯಾಂಕ್‌(ನಾಯಕ), ದೇವದತ್‌, ನಿಕಿನ್‌ ಜೋಸ್‌, ಅನೀಶ್‌ ಕೆ.ವಿ., ಸ್ಮರಣ್‌ ಆರ್‌., ಶ್ರೀಜಿತ್‌ ಕೆ.ಎಲ್‌., ಅಭಿನವ್‌ ಮನೋಹರ್‌, ಶ್ರೇಯಸ್‌(ಉಪನಾಯಕ), ಹಾರ್ದಿಕ್‌ ರಾಜ್‌, ಪ್ರಸಿದ್ಧ್‌ ಕೃಷ್ಣ, ಕೌಶಿಕ್‌, ವಿದ್ಯಾಧರ್‌ ಪಾಟೀಲ್‌, ಅಭಿಲಾಶ್‌ ಶೆಟ್ಟಿ, ಪ್ರವೀಣ್‌ ದುಬೆ, ಲುವ್ನಿತ್‌ ಸಿಸೋಡಿಯಾ, ಯಶೋವರ್ಧನ್‌.