* ರಿಷಭ್ ಪಂತ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ* ತವರು ರಾಜ್ಯ ಉತ್ತರಖಂಡದ ರಾಯಭಾರಿಯಾಗಿ ಪಂತ್ ನೇಮಕ* ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಟೀಂ ಇಂಡಿಯಾ ಕ್ರಿಕೆಟಿಗ

ಡೆಹರಾಡೂನ್‌(ಡಿ.20): ಟೀಂ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant), ತಮ್ಮ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ (Indian Cricket Team) ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ರಿಷಭ್ ಪಂತ್ ಅವರ ಯಶಸ್ಸು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ತಮ್ಮ ರಾಜ್ಯವಾದ ಇಡೀ ಉತ್ತರಖಂಡವೇ ಹೆಮ್ಮೆ ಪಡುವಂತಹ ಕೀರ್ತಿಗೆ ರಿಷಭ್ ಪಂತ್ ಭಾಜನರಾಗಿದ್ದಾರೆ.

ಹೌದು, ಎಡಗೈ ಬ್ಯಾಟರ್ ರಿಷಭ್ ಪಂತ್‌, ಉತ್ತರಖಂಡದ ರಾಯಭಾರಿಯಾಗಿ (Brand Ambassador for Uttarakhand) ನೇಮಕವಾಗಿದ್ದಾರೆ. ಈ ವಿಚಾರವನ್ನು ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಘೋಷಿಸಿದ್ದಾರೆ. ರಿಷಭ್ ಪಂತ್ ಅವರ ನೇಮಕದಿಂದಾಗಿ ಉತ್ತರಖಂಡದ ಯುವಕರು ಕ್ರೀಡೆಯತ್ತ ಮತ್ತಷ್ಟು ಒಲವು ತೋರಿಸಲು ಈ ನಡೆ ಸ್ಪೂರ್ತಿಯಾಗಲಿದೆ. ಇತ್ತೀಚೆಗಿನ ದಿನಗಳಲ್ಲಿ ಉತ್ತರಖಂಡ ರಾಜ್ಯದಲ್ಲಿ ಕ್ರಿಕೆಟ್ ಹಾಗೂ ಮೂಲಭೂತ ಸೌಕರ್ಯಗಳು ನಿಧಾನವಾಗಿ ಸುಧಾರಣೆಯಾಗುತ್ತಿವೆ.

ಭಾರತ ಕ್ರಿಕೆಟ್ ತಂಡದ ಉತ್ತಮ ಆಟಗಾರರಲ್ಲಿ ಒಬ್ಬರಾದ ಹಾಗೂ ಯುವಕರ ಪಾಲಿನ ಮಾದರಿ ಆಟಗಾರರಾದ ಲಾಲ್ ಶ್ರೀ ರಿಷಭ್ ಪಂತ್ ಅವರನ್ನು ನಮ್ಮ ರಾಜ್ಯ ಸರ್ಕಾರವು ರಾಜ್ಯದ ರಾಯಭಾರಿಯಾಗಿ ನೇಮಕ ಮಾಡಿದೆ. ಯುವಕರನ್ನು ಕ್ರೀಡೆಯತ್ತ ಪ್ರೋತ್ಸಾಹಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಳಕಳಿಯಿಂದ ರಿಷಭ್ ಪಂತ್ ಅವರನ್ನು ಉತ್ತರಖಂಡದ ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮೂಲಕ ಘೋಷಿಸಿದ್ದಾರೆ.

Scroll to load tweet…

ಪುಷ್ಕರ್ ಸಿಂಗ್ ಧಾಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಿಷಭ್ ಪಂತ್, ಉತ್ತರ ಖಂಡದ ಕ್ರೀಡೆ ಹಾಗೂ ಆರೋಗ್ಯದ ಕುರಿತಂತೆ ಜಾಗೃತಿ ಮೂಡಿಸಲು ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿ ಅವಕಾಶ ನೀಡಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು. ಭಾರತವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಈ ಸಂದೇಶವನ್ನು ಸಾರುತ್ತೇನೆ. ರೂರ್ಕಿ ಎನ್ನುವ ಸಣ್ಣ ನಗರದಿಂದ ಬಂದ ನಾನು ಇದೀಗ ರಾಜ್ಯದ ರಾಯಭಾರಿ ಆಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇಲ್ಲಿನ ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾಣಿಕೆ ನೀಡುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ರಿಷಭ್ ಪಂತ್ ಟ್ವೀಟ್‌ ಮಾಡಿದ್ದಾರೆ.

Scroll to load tweet…

IPL Auction 2022: ಆಟಗಾರರ ಹರಾಜು ಮತ್ತಷ್ಟು ತಡವಾಗುವ ಸಾಧ್ಯತೆ..!

ರಿಷಭ್ ಪಂತ್ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು (India Tour of South Africa), ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಫ್ರೀಡಂ ಟ್ರೋಫಿ ಟೂರ್ನಿಯು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿರುವ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾಗಲಿದೆ. ರಿಷಭ್ ಪಂತ್ ಇತ್ತೀಚಿನ ದಿನಗಳಲ್ಲಿ ನಾಯಕನಾಗಿಯೂ ಯಶಸ್ವಿಯಾಗುತ್ತಿದ್ದಾರೆ. 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ (IPL) ಲೀಗ್‌ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.

India Tour of South Africa: ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಪಟ್ಟ..!

2022ನೇ ಸಾಲಿನ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಒಟ್ಟು ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ನಾಯಕ ರಿಷಭ್ ಪಂತ್, ಆರಂಭಿಕ ಬ್ಯಾಟರ್ ಪೃಥ್ವಿ ಶಾ, ಆಲ್ರೌಂಡರ್ ಅಕ್ಷರ್ ಪಟೇಲ್ ಹಾಗೂ ಮಾರಕ ವೇಗಿ ಏನ್ರಿಚ್ ನೊಕಿಯೆ ಮುಂದಿನ ಆವೃತ್ತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವೇ ಕಾಣಿಸಿಕೊಳ್ಳಲಿದ್ದಾರೆ.