ಮದುವೆಗೂ ಮುನ್ನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್
ಮೈಸೂರಿನ ಚಾಮುಂಡೇಶ್ವರಿಯ ತಾಯಿಯ ದರ್ಶನ ಪಡೆದ ಕೆ ಎಲ್ ರಾಹುಲ್
ಜನವರಿ 22-23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಟೀಂ ಇಂಡಿಯಾ ಕ್ರಿಕೆಟಿಗ
ಮದುವೆಗೂ ಮುನ್ನ ನಾಡದೇವತೆಯ ದರ್ಶನದ ಪಡೆದ ಕನ್ನಡಿಗ ರಾಹುಲ್
ಮೈಸೂರು(ಡಿ.04): ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ ಜನವರಿ 22 ಹಾಗೂ 23ರಂದು ಪುಣೆಯಲ್ಲಿ ತಮ್ಮ ಬಹುಕಾಲದ ಗೆಳತಿ ಆತಿಯಾ ಶೆಟ್ಟಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಕನ್ನಡಿಗ ಕೆ ಎಲ್ ರಾಹುಲ್, ನಾಡದೇವತೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ.
ಹೌದು, ಇಂದು ಮುಂಜಾನೆ ಸಾಂಸ್ಕೃತಿಕ ನಗರಿ ಮೈಸೂರಿಗೆ ತೆರಳಿದ ಕೆ ಎಲ್ ರಾಹುಲ್, ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ರಣಜಿ ಪಂದ್ಯಗಳನ್ನಾಡುವ ಸಂದರ್ಭದಲ್ಲಿ ಚಾಮುಂಡೇಶ್ವರಿ ತಾಯಿಯ ದೇಗುಲಕ್ಕೆ ಭೇಟಿ ನೀಡಿದ್ದರು. ಇದಾಗಿ ಐದಾರು ವರ್ಷಗಳ ಬಳಿಕ ಕೆ ಎಲ್ ರಾಹುಲ್ ಮೊದಲ ಬಾರಿಗೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ತಾಯಿ ಚಾಂಮುಂಡೇಶ್ವರಿ ಸನ್ನಿದಿಯಲ್ಲಿ ಕೆ ಎಲ್ ರಾಹುಲ್ 15 ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದರು.
ಶ್ರೀಲಂಕಾ ಟಿ20 ಸರಣಿಯಿಂದ ಬ್ರೇಕ್ ಪಡೆದಿರುವ ರಾಹುಲ್: ಜನವರಿ 03ರಿಂದ ಆರಂಭವಾಗಿರುವ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಟಿ20 ಸರಣಿ ಮುಗಿದ ಬಳಿಕ ಭಾರತ ತಂಡವು ತವರಿನಲ್ಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಜನವರಿ 10ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯಕ್ಕೆ ಗುವಾಹಟಿ, ಜನವರಿ 12ರಂದು 2ನೇ ಪಂದ್ಯಕ್ಕೆ ಕೋಲ್ಕತಾ, ಜನವರಿ 15ರಂದು 3ನೇ ಪಂದ್ಯಕ್ಕೆ ತಿರುವನಂತಪುರ ಆತಿಥ್ಯ ನೀಡಲಿದೆ.
ಲಂಕಾ ಎದುರಿನ ಏಕದಿನ ಸರಣಿಗೆ ಟೀಂ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅಶ್ರ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.