ಇಂಡೋ ಪಾಕ್ ಪಂದ್ಯ ಆಯೋಜನೆ ಕುರಿತು ಮೋದಿ ವಿರುದ್ಧ ಕಿಡಿ ಸೈನಿಕರು ಸಾಯುತ್ತಿರುವಾಗ ಟಿ20 ಪಂದ್ಯ ಯಾಕೆ ಎಂದು ಓವೈಸಿ ಓವೈಸಿ ಬೆನ್ನಲ್ಲೇ ಕೇಂದ್ರ ಸಚಿವ ರಾಮದಾಸ ಅಠವಾಳೆ ಮನವಿ ಇಂಡೋ ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಲು ಕರೆ

ನವದೆಹಲಿ(ಅ.19): ಭಾರತೀಯ ಸೇನಾ ಯೋಧರು ಭಯೋತ್ಪಾದಕರ ದಾಳಿ ಹುತಾತ್ಮರಾಗುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನ ಜೊತೆ ಟಿ20 ಪಂದ್ಯ ಯಾಕೆ ಎಂದು ಓವೈಸಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ರಾಮದಾಸ ಅಠವಾಳೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

T20 World Cup: ಪಾಕ್‌ ವಿರುದ್ಧದ ಪಂದ್ಯ ರದ್ದು ಮಾಡಲು ಆಗ್ರಹ : ಬಿಸಿಸಿಐ ಹೇಳಿದ್ದೇನು..?

ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಆಡಬಾರದು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಚೂ ಬಿಟ್ಟು ಅಶಾಂತಿ ಸೃಷ್ಟಿಸುತ್ತಿರುವ ಪಾಕಿಸ್ತಾನ ವಿರುದ್ಧ ಟಿ20 ಪಂದ್ಯ ಅವಶ್ಯಕತೆ ಇಲ್ಲ ಎಂದು ರಾಮದಾಸ ಅಠವಾಳೆ ಹೇಳಿದ್ದಾರೆ. ವಲಸೆ ಕಾರ್ಮಿಕರನ್ನು ಹತ್ಯೆ ಮಾಡುತ್ತಿರುವ ಉಗ್ರರ ಹಿಂದೆ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿದೆ. ಈ ಕುರಿತು ಕ್ರೀಡಾ ಸಚಿವರಿಗೆ ಪತ್ರ ಬರೆಯುವುದಾಗಿ ಅಠವಾಳೆ ಹೇಳಿದ್ದಾರೆ.

ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದ ಕಾರ್ಮಿಕರು, ಬೀದಿ ವ್ಯಾಪಾರಿಗಳನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಹಿಂದೂ ಹಾಗೂ ಸಿಖ್‌ರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದೆ. ಉಗ್ರರ ದಾಳಿಯಲ್ಲಿ ಯೋಧರು ಹುತಾತ್ಮಾರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನ ವಿರುದ್ಧ ಟಿ20 ಪಂದ್ಯದ ಅಗತ್ಯವಿಲ್ಲ ಎಂದು ಅಠವಾಳೆ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಾಗರೀಕರ ಹತ್ಯೆ ಪ್ರಕರಣ, ಪಾಕಿಸ್ತಾನ ವಿರುದ್ಧ ಪಂದ್ಯ ಆಡದಂತೆ ಹೆಚ್ಚಿದ ಒತ್ತಡ!

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜೊತೆಗೂ ಮಾತುಕತೆ ನಡೆಸುವುದಾಗಿ ಅಠವಾಳೆ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧ ಯಾವ ವ್ಯವಾಹಾರ ಭಾರತಕ್ಕೆ ಬೇಕಿಲ್ಲ ಎಂದು ಅಠವಾಳೆ ಹೇಳಿದ್ದಾರೆ. ಅಠವಾಳೆಗೂ ಮೊದಲು ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು.

ಗಡಿಯಲ್ಲಿ ನಮ್ಮ ಸೈನಿಕರು ಉಗ್ರರ ದಾಳಿಗೆ ಹುತಾತ್ಮರಾಗಿದ್ದಾರೆ. ಸೈನಿಕರು, ನಾಗರೀಕರು ಸಾಯುತ್ತಿರುವಾಗ ಪಾಕಿಸ್ತಾನದ ಜೊತೆ ಟಿ20 ಪಂದ್ಯ ಆಡಲು ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದು ಯಾಕೆ? ನಮ್ಮ 9 ಸೈನಿಕರು ಸಾವನ್ನಪ್ಪಿದ್ದಾರೆ, ಇತ್ತ ಪಾಕಿಸ್ತಾನ ವಿರುದ್ಧ ಟಿ20 ಪಂದ್ಯ ಆಡಲು ಭಾರತ ಸಜ್ಜಾಗಿದೆ ಇದು ಎಷ್ಟು ಸರಿ ಎಂದು ಪ್ರಧಾನಿ ಮೋದಿಗೆ ಓವೈಸಿ ಪ್ರಶ್ನಿಸಿದ್ದಾರೆ.

ವಿರಾಟ್ ಕೊಹ್ಲಿಗಾಗಿ T20 World Cup ಗೆಲ್ಲಿ: ಸುರೇಶ್ ರೈನಾ ಸಂದೇಶ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಕ್ಟೋಬರ್ 24 ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ವಿರುದ್ಧ ಪಂದ್ಯ ಬೇಡ, ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಬೇಕು ಎಂದು ಅಭಿಯಾನ ಆರಂಭಗೊಂಡಿದೆ.

ಹಲವರು ಪಂದ್ಯ ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ. ಇದರ ನಡುವೆ ಬಿಸಿಸಿಐ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನ ವಿರುದ್ಧ ಭಾರತ ಯಾವುದೇ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ. ಈ ಕುರಿತು ಬಿಸಿಸಿಐ ನಿಲುವು ಸ್ಪಷ್ಟವಾಗಿದೆ. ಆದರೆ ಸದ್ಯ ಟಿ20 ವಿಶ್ವಕಪ್ ಟೂರ್ನಿಯಾಗಿದೆ. ಇದು ಐಸಿಸಿ ಟೂರ್ನಿಯಾಗಿರುವುದರಿಂದ ಪಂದ್ಯ ಆಡಲೇಬೇಕಿದೆ. ಈ ಪಂದ್ಯದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.