ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿ ಭಾರತ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಅವರ ಇನ್ನಿಂಗ್ಸ್ ಮತ್ತು ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದರು.  

ಮುಂಬೈ: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ 7 ರನ್‌ಗಳ ರೋಚಕ ಜಯ ಸಾಧಿಸಿ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಖುಷಿಯನ್ನು ನಾಯಕ ಸೂರ್ಯಕುಮಾರ್ ಯಾದವ್ ಹಂಚಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಫೈನಲ್‌ಗೆ ಕೊಂಡೊಯ್ಯುವುದು ಒಂದು ವಿಶೇಷ ಅನುಭವ ಅಂತ ಸೂರ್ಯ ಹೇಳಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಸಂಜು ಸ್ಯಾಮ್ಸನ್ ಅವರ ಇನ್ನಿಂಗ್ಸ್ ಮತ್ತು ಬೌಲರ್‌ಗಳ ಪ್ರದರ್ಶನವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಶ್ಲಾಘಿಸಿದ ಸೂರ್ಯಕುಮಾರ್ ಯಾದವ್

"ಸಂಜು ಸ್ಯಾಮ್ಸನ್ ಕ್ರೀಸ್‌ಗೆ ಇಳಿದಾಗಲೇ, ತಾನು ಏನು ಮಾಡಬೇಕು ಅನ್ನೋ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. ವಿಕೆಟ್ ಬಿದ್ದರೂ ಒತ್ತಡಕ್ಕೆ ಒಳಗಾಗದೆ, ಅವರು ಆಕ್ರಮಣಕಾರಿ ಆಟವಾಡಿದರು. ತಂಡಕ್ಕೆ ಬೇಕಾಗಿದ್ದೂ ಅದೇ. ಕಳೆದ ಒಂದು ವರ್ಷದಿಂದ ಸಂಜು ಪಟ್ಟಿರುವ ಕಠಿಣ ಶ್ರಮಕ್ಕೆ ಸಿಕ್ಕ ಫಲ ಇದು. ಅದೊಂದು ತುಂಬಾನೇ ಸ್ಪೆಷಲ್ ಇನ್ನಿಂಗ್ಸ್ ಆಗಿತ್ತು," ಎಂದು ಸೂರ್ಯಕುಮಾರ್ ಯಾದವ್ ಹೊಗಳಿದ್ದಾರೆ.

"ಆದಿಲ್ ರಶೀದ್ ಅವರನ್ನು ಎದುರಿಸಲೆಂದೇ ನಾವು ಶಿವಂ ದುಬೆ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಿದ್ದೆವು. ಒಂದು ವೇಳೆ ಕಳೆದ ಮ್ಯಾಚ್‌ನಲ್ಲಿ ನಾನು ಸೆಂಚುರಿ ಅಥವಾ ಹಾಫ್ ಸೆಂಚುರಿ ಹೊಡೆದಿದ್ದರೂ, ಇಂಗ್ಲೆಂಡ್ ವಿರುದ್ಧ ದುಬೆ ಅವರೇ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದರು," ಎಂದು ಸೂರ್ಯ ಸ್ಪಷ್ಟಪಡಿಸಿದರು.

ಟಾಸ್‌ಗೆ ತೆರಳುವ ಮುನ್ನ, ನಿಮ್ಮನ್ನು ಸೋಲಿಸಲು ನಾವು ಇನ್ನೆಷ್ಟು ರನ್ ಹೊಡಿಬೇಕು?' ಅಂತ ನಾನು ಹ್ಯಾರಿ ಬ್ರೂಕ್‌ಗೆ ತಮಾಷೆಯಾಗಿ ಕೇಳಿದೆ. ಅಷ್ಟರಮಟ್ಟಿಗೆ ಅವರು ಚೆನ್ನಾಗಿ ಹೋರಾಡಿದರು. ಆದರೆ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಪಂದ್ಯವನ್ನು ನಮ್ಮ ಕಡೆಗೆ ತಿರುಗಿಸಿದ ರೀತಿ ಮಾತ್ರ ನಂಬಲು ಅಸಾಧ್ಯವಾಗಿತ್ತು. ಬುಮ್ರಾ ವರ್ಷಗಳಿಂದ ಭಾರತಕ್ಕೆ ಏನು ಮಾಡುತ್ತಿದ್ದಾರೋ, ಅದನ್ನೇ ಇವತ್ತೂ ಪುನರಾವರ್ತಿಸಿದರು. ನಿರ್ಣಾಯಕ ಹಂತದಲ್ಲಿ ಜವಾಬ್ದಾರಿ ಹೊತ್ತು ತಂಡವನ್ನು ಗೆಲ್ಲಿಸಿದರು," ಎಂದು ಸೂರ್ಯ ಬಣ್ಣಿಸಿದರು.

ಹೃದಯಬಡಿತ 160-175 ಮುಟ್ಟಿರುತ್ತಿತ್ತು

ಪಂದ್ಯದ ಕೊನೆಯ ಓವರ್‌ಗಳಲ್ಲಿ ತಾನು ಅನುಭವಿಸಿದ ಟೆನ್ಶನ್ ಬಗ್ಗೆಯೂ ಸೂರ್ಯಕುಮಾರ್ ತುಟಿಬಿಚ್ಚಿದ್ದಾರೆ. "ಆ ಸಮಯದಲ್ಲಿ ಯಾರಾದರೂ ನನ್ನ ಹಾರ್ಟ್‌ಬೀಟ್ ಚೆಕ್ ಮಾಡಿದ್ದರೆ, ಅದು 160-175 ಮುಟ್ಟಿರುತ್ತಿತ್ತು. ಅಷ್ಟೊಂದು ಟೆನ್ಶನ್‌ನಲ್ಲಿ ಇದ್ದೆ. ಆದರೆ ಇದೆಲ್ಲಾ ಆಟದ ಒಂದು ಭಾಗ. ಇಂತಹ ಅದ್ಭುತ ಅಭಿಮಾನಿಗಳ ಮುಂದೆ ಗೆದ್ದಿದ್ದು ಖುಷಿ ಕೊಟ್ಟಿದೆ," ಎಂದು ಸೂರ್ಯಕುಮಾರ್ ಹೇಳಿದರು.

ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಹಿಡಿದ ಅದ್ಭುತ ಕ್ಯಾಚ್‌ಗಳ ಬಗ್ಗೆ ಕೇಳಿದಾಗ, ಸೂರ್ಯಕುಮಾರ್ ಅದರ ಸಂಪೂರ್ಣ ಕ್ರೆಡಿಟ್ ಅನ್ನು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ ನೀಡಿದರು. "ಅವರು ತರಬೇತಿ ಅವಧಿಗಳನ್ನು ಮಜವಾಗಿ, ಆದರೆ ಸ್ಪರ್ಧಾತ್ಮಕವಾಗಿ ಮಾಡಿದ್ದೇ, ನಾವು ಫೀಲ್ಡ್‌ನಲ್ಲಿ ಇಷ್ಟು ಉತ್ತಮ ಪ್ರದರ್ಶನ ನೀಡಲು ಕಾರಣ," ಎಂದು ಅವರು ಹೇಳಿದರು. ಇಂಗ್ಲೆಂಡ್ ತಂಡವನ್ನು ಏಳು ರನ್‌ಗಳಿಂದ ಸೋಲಿಸಿರುವ ಭಾರತ, ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. "ಒತ್ತಡ ಇದ್ದೇ ಇರುತ್ತದೆ, ಆದರೆ ತಂಡ ಮತ್ತು ಸಹಾಯಕ ಸಿಬ್ಬಂದಿ ಎಲ್ಲರೂ ಉತ್ಸಾಹದಲ್ಲಿದ್ದಾರೆ. ಈ ಬಾರಿ ಕಪ್ ಉಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸವಿದೆ," ಎಂದು ಸೂರ್ಯಕುಮಾರ್ ಯಾದವ್ ಭರವಸೆ ವ್ಯಕ್ತಪಡಿಸಿದರು.

ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ:

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ಆತಿಥೇಯ ತಂಡವು ಟಿ20 ವಿಶ್ವಕಪ್ ಜಯಿಸಿಲ್ಲ. ಇದೀಗ ಚುಟುಕು ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತ ತಂಡವು ಮಾರ್ಚ್ 08ರಂದು ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅದೇ ರೀತಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇದುವರೆಗೂ ಯಾವ ತಂಡವು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಜಯಿಸಿಲ್ಲ. ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಹೊಸತೊಂದು ಮೈಲಿಗಲ್ಲು ನೆಡಲು ಸುವರ್ಣಾವಕಾಶ ಬಂದೊದಗಿದೆ.