ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಈ ಸೋಲಿನಿಂದ ಕೆರಳಿದ ಪಾಕ್ ಅಭಿಮಾನಿಗಳು ಟಿವಿ ಸೆಟ್ಗಳನ್ನು ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟಿದೆ.
ಕೊಲಂಬೋ: ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತ ಬೆನ್ನಲ್ಲೇ, ಪಾಕ್ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ತಮ್ಮ ತಂಡದ ಹೀನಾಯ ಸೋಲಿನಿಂದ ಕೆರಳಿದ ಅಭಿಮಾನಿಗಳು ಟೆಲಿವಿಷನ್ ಸೆಟ್ಗಳನ್ನು ಬ್ಯಾಟ್ನಿಂದ ಹೊಡೆದು ಪುಡಿಗಟ್ಟುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 61 ರನ್ಗಳ ಈ ಹೀನಾಯ ಸೋಲು ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಆಘಾತ ನೀಡಿದೆ. "ಈ ಅವಮಾನ ಮತ್ತು ಆಘಾತದಿಂದ ಮಾತುಗಳೇ ಬರುತ್ತಿಲ್ಲ" ಎಂದು ಟಿವಿ ಒಡೆದುಹಾಕಿದ ಪಾಕ್ ಅಭಿಮಾನಿಯೊಬ್ಬರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಾಲಿ ಚಾಂಪಿಯನ್ ಭಾರತ, ಆಟದ ಎಲ್ಲಾ ವಿಭಾಗಗಳಲ್ಲೂ ಪಾಕಿಸ್ತಾನವನ್ನು ಹಿಂದಿಕ್ಕಿ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಇಶಾನ್ ಕಿಶನ್ (40 ಎಸೆತಗಳಲ್ಲಿ 77 ರನ್) ಸ್ಪೋಟಕ ಆಟವಾಡಿದರು. ನಿಧಾನಗತಿಯ ಪಿಚ್ನಲ್ಲೂ ಕಿಶನ್ ತೋರಿದ ನಿರ್ಭೀತ ಬ್ಯಾಟಿಂಗ್, ಭಾರತಕ್ಕೆ 175 ರನ್ಗಳ ಬೃಹತ್ ಮೊತ್ತ ತಂದುಕೊಟ್ಟಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಆರಂಭದಲ್ಲೇ ಶಾಕ್ ನೀಡಿದರು. ಮೊದಲ ಪವರ್ಪ್ಲೇನಲ್ಲೇ ನಾಯಕ ಸಲ್ಮಾನ್ ಆಗಾ ಸೇರಿದಂತೆ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡ ಪಾಕಿಸ್ತಾನ ತೀವ್ರ ಒತ್ತಡಕ್ಕೆ ಸಿಲುಕಿತು.
ನಿರಾಸೆಗೊಂಡ ಅಭಿಮಾನಿಗಳು; ಟಿವಿ ನುಚ್ಚುನೂರು
ಸ್ಟೇಡಿಯಂನ ಹೊರಗೆ ಪಾಕ್ ಅಭಿಮಾನಿಗಳು ತೀವ್ರ ನಿರಾಸೆಯಿಂದ ಪ್ರತಿಕ್ರಿಯಿಸಿದರು. "ಇದು ಈಗ ಮಾಮೂಲಿ ಕಥೆಯಾಗಿದೆ. ಬುಮ್ರಾ ಮತ್ತು ಹಾರ್ದಿಕ್ ದಾಳಿಗೆ ನಮ್ಮಲ್ಲಿ ಉತ್ತರವೇ ಇಲ್ಲ. ಟೀಂ ಇಂಡಿಯಾ ಯಾವಾಗಲೂ ಪಕ್ಕಾ ಹೋಮ್ವರ್ಕ್ ಮಾಡಿಕೊಂಡು ಬರುತ್ತದೆ," ಎಂದು ಸ್ಟೇಡಿಯಂನಿಂದ ಹೊರಬಂದ 'ಮಕ್ಬೂಲ್' ಎಂಬ ಅಭಿಮಾನಿಯೊಬ್ಬರು ಸುದ್ದಿ ಸಂಸ್ಥೆಯೊಂದಿಗೆ ಬೇಸರ ವ್ಯಕ್ತಪಡಿಸಿದರು. ಸುಮಾರು 25 ವರ್ಷಗಳ ಹಿಂದೆ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿದ್ದ ಪಾಕಿಸ್ತಾನಕ್ಕೆ, ಈಗ ಭಾರತದ ಮುಂದೆ ನಿಲ್ಲಲೂ ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದರು.
ಬಾಬರ್ ಅಜಮ್ ಸೇರಿದಂತೆ ಸ್ಟಾರ್ ಆಟಗಾರರು ಭಾರತೀಯ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಎದುರು ಪರದಾಡಿದರು. ಅಂತಿಮವಾಗಿ ಪಾಕಿಸ್ತಾನ ಕೇವಲ 114 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ದಾಖಲೆ 8-1ಕ್ಕೆ ಏರಿದೆ. 2026ರ ಈ ನಿರ್ಣಾಯಕ ಗೆಲುವಿನೊಂದಿಗೆ ಭಾರತ ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು ಸೂಪರ್-8 ಹಂತಕ್ಕೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ.
ಪಾಕ್ಗೆ ಭಾರತೀಯರ ‘ನೋ ಶೇಕ್ಹ್ಯಾಂಡ್’
ಕೊಲಂಬೊ: ಭಾನುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾರತೀಯರು ಹಸ್ತಲಾಘವ ನಿರಾಕರಿಸಿದರು. ಟಾಸ್ ಸಮಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಹಸ್ತಲಾಘವ ಮಾಡಲಿಲ್ಲ. ಈ ಮೂಲಕ ಕಳೆದ ವರ್ಷ ಏಷ್ಯಾಕಪ್ನಲ್ಲಿ ಆರಂಭಗೊಂಡಿದ್ದ ‘ನೋ ಶೇಕ್ಹ್ಯಾಂಡ್’ ಪದ್ಧತಿಯನ್ನು ಮುಂದುವರೆಸಿದ್ದಾರೆ. ಪಂದ್ಯ ಆರಂಭಕ್ಕೂ ಒಂದು ಗಂಟೆ ಮುನ್ನವೇ ಬಿಸಿಸಿಐ ಅಧಿಕಾರಿಯೊಬ್ಬರು, ‘ಹ್ಯಾಂಡ್ಶೇಕ್ ನಿರಾಕರಣೆ ನೀತಿ ಮುಂದುವರಿಲಿದೆ’ ಎಂದು ಸ್ಪಷ್ಟಪಡಿಸಿದ್ದರು.
ಭಾರತ-ಪಾಕಿಸ್ತಾನ ಪಂದ್ಯ: 2000 ಪೊಲೀಸರು, 600+ ಸೈನಿಕರಿಂದ ಬಿಗಿ ಭದ್ರತೆ
ಕೊಲಂಬೊ: ನಾನಾ ಹೈಡ್ರಾಮಗಳ ಬಳಿಕ ಭಾನುವಾರ ನಡೆದ ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಕ್ರೀಡಾಂಗಣದ ಸುತ್ತಮುತ್ತ 2000 ಪೊಲೀಸರು, 600 ಸೈನಿಕರು ಕಣ್ಗಾವಲಿರಿಸಿದ್ದರು. ಆಟಗಾರರು ಉಳಿದುಕೊಳ್ಳು ಹೋಟೆಲ್, ಕ್ರೀಡಾಂಗಣಕ್ಕೆ ಬರುವ ದಾರಿ, ಕ್ರೀಡಾಂಗಣದ ಬಳಿ ಇರುವ ಆಯಕಟ್ಟಿನ ಜಾಗ, ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತೀವ್ರ ಕುತೂಹಲ ಸೃಷ್ಟಿಸಿದ್ದ ಪಂದ್ಯಕ್ಕೆ 18,000 ಭಾರತೀಯ, 12000 ಪಾಕಿಸ್ತಾನಿ ಅಭಿಮಾನಿಗಳು ಸಾಕ್ಷಿಯಾಗಿದ್ದರು.


