ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಕ್ವಾರ್ಟರ್‌ ಫೈನಲ್ ಪ್ರವೇಶಹರ್ಯಾಣ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಮಯಾಂಕ್ ಅಗರ್‌ವಾಲ್ ಪಡೆ'ಸಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರಾಜ್ಯ ತಂಡ

ಮೊಹಾಲಿ(ಅ.23): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ತಂಡ ಪ್ರವೇಶಿಸಿದೆ. ಶನಿವಾರ ಹರ್ಯಾಣ ವಿರುದ್ಧ 5 ವಿಕೆಟ್‌ ಜಯ ಸಾಧಿಸಿದ ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ನೇರವಾಗಿ ಅಂತಿಮ 8ರ ಸುತ್ತಿಗೆ ಪ್ರವೇಶಿಸಿತು. ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವೆನಿಸಿತ್ತು. ಮೊದಲು ಬ್ಯಾಟ್‌ ಮಾಡಿದ ಹರ್ಯಾಣ 20 ಓವರಲ್ಲಿ 9 ವಿಕೆಟ್‌ಗೆ ಕೇವಲ 125 ರನ್‌ ಗಳಿಸಿತು. ರಾಹುಲ್‌ ತೆವಾಟಿಯಾ 27, ಚೈತನ್ಯ ಬಿಷ್ಣೋಯ್‌ 26 ರನ್‌ ಗಳಿಸಿದರು. ರಾಜ್ಯದ ಪರ ಸ್ಪಿನ್ನರ್‌ ಕೆ.ಗೌತಮ್‌ 3, ವೇಗಿಗಳಾದ ವೈಶಾಕ್‌ ಹಾಗೂ ವಿದ್ವತ್‌ ತಲಾ 2 ವಿಕೆಟ್‌ ಕಿತ್ತರು.

ಸುಲಭ ಗುರಿ ಬೆನ್ನತ್ತಿದ ಕರ್ನಾಟಕ 36ಕ್ಕೆ 3 ವಿಕೆಟ್‌ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಎಲ್ ಆರ್ ಚೇತನ್‌ ಶೂನ್ಯ ಸುತ್ತಿದರೆ, ನಾಯಕ ಮಯಾಂಕ್ ಅಗರ್‌ವಾಲ್ 14 ಹಾಗೂ ಲುವ್ನಿತ್ ಸಿಸೋಡಿಯಾ 10 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮನೀಶ್‌ ಪಾಂಡೆ ಆಸರೆಯಾದರು. 47 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್‌ನೊಂದಿಗೆ ಔಟಾಗದೆ 64 ರನ್‌ ಗಳಿಸಿದರು. ಆಲ್ರೌಂಡರ್ ಶ್ರೇಯಸ್ ಗೋಪಾಲ್‌ 22 ಹಾಗೂ ಅಭಿನವ್ ಮನೋಹರ್ ಸ್ಪೋಟಕ 15 ರನ್‌ ಬಾರಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ಸ್ಕೋರ್‌: ಹರ್ಯಾಣ 20 ಓವರಲ್ಲಿ 125/9(ತೆವಾಟಿಯಾ 27, ಚೈತನ್ಯ 26, ಗೌತಮ್‌ 3-17)
ಕರ್ನಾಟಕ 17.2 ಓವರಲ್ಲಿ 129/5(ಪಾಂಡೆ 64*, ಶ್ರೇಯಸ್‌ 22, ಮೋಹಿತ್‌ 2-22)

ಅ.30ರಿಂದ ನಾಕೌಟ್‌ ಹಂತ

ಪಂದ್ಯಾವಳಿಯ ನಾಕೌಟ್‌ ಹಂತ ಮುಂದಿನ ವಾರ ಆರಂಭಗೊಳ್ಳಲಿದೆ. ಅ.30ರಂದು ಮೂರು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿದ್ದು, ನ.1ರಂದು ಕ್ವಾರ್ಟರ್‌ ಫೈನಲ್‌ ಪಂದ್ಯಗಳು, ನ.3ಕ್ಕೆ ಸೆಮೀಸ್‌ ಹಾಗೂ ನ.5ಕ್ಕೆ ಫೈನಲ್‌ ನಡೆಯಲಿದೆ. ನಾಕೌಟ್‌ ಹಂತಕ್ಕೆ ಕೋಲ್ಕತಾ ಆತಿಥ್ಯ ವಹಿಸಲಿದೆ.

IND vs PAK ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಬದ್ಧವೈರಿಗಳ ಹೋರಾಟಕ್ಕೆ ಮಳೆ ಸಾಧ್ಯತೆ ಎಷ್ಟು?

ಮುಂಬೈ, ಡೆಲ್ಲಿ, ಕರ್ನಾಟಕ, ಹಿಮಾಚಲ ಪ್ರದೇಶ, ಬೆಂಗಾಲ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿವೆ. ಪ್ರಿ ಕ್ವಾರ್ಟರ್‌ನಲ್ಲಿ ಪಂಜಾಬ್‌-ಹರ್ಯಾಣ, ಕೇರಳ-ಸೌರಾಷ್ಟ್ರ, ವಿದರ್ಭ-ಛತ್ತೀಸ್‌ಗಢ ಸೆಣಸಲಿವೆ. ಮೊದಲ ಪ್ರಿ ಕ್ವಾರ್ಟರಲ್ಲಿ ಗೆಲ್ಲುವ ತಂಡ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್‌ ತಮಿಳುನಾಡು ಗುಂಪು ಹಂತದಲ್ಲೇ ಹೊರಬಿದ್ದಿದೆ.