Asianet Suvarna News Asianet Suvarna News

Team India ಪಂದ್ಯ ಗೆದ್ದ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹರಾಜ್‌ಗೆ ಥ್ಯಾಂಕ್ಸ್‌ ಹೇಳಿದ ಶಿಖರ್ ಧವನ್‌..!

* ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ
* ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಕ್ಕೆ ಥ್ಯಾಂಕ್ಸ್‌ ಎಂದ ಶಿಖರ್ ಧವನ್
* ಎದುರಾಳಿ ತಂಡದ ನಾಯಕನಿಗೆ ಥ್ಯಾಂಕ್ಸ್‌ ಎಂದ ಶಿಖರ್ ಧವನ್

Shikhar Dhawan thanks Keshav Maharaj for winning the toss and opting to bat first in 2nd ODI kvn
Author
First Published Oct 10, 2022, 11:42 AM IST

ರಾಂಚಿ(ಅ.10): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ,  7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌, ಅಚ್ಚರಿಯ ರೀತಿಯಲ್ಲಿ ಎದುರಾಳಿ ತಂಡದ ನಾಯಕ ಕೇಶವ್ ಮಹರಾಜ್‌ಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ಹಂಗಾಮಿ ನಾಯಕ ಕೇಶವ್ ಮಹರಾಜ್‌ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಶಿಖರ್ ಧವನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿತ್ತು. ಈ ಸ್ಪರ್ಧಾತ್ಮಕ ಗುರಿಯನ್ನು ಅನಾಯಾಸವಾಗಿ ತಲುಪುವಲ್ಲಿ ಯಶಸ್ವಿಯಾಯಿತು. ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಪಡೆ 25 ಎಸೆತಗಳು ಬಾಕಿ ಇರವಂತೆಯೇ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿ, ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಪಂದ್ಯ ಗೆಲುವಿನ ಬಳಿಕ ಮಾತನಾಡಿದ ಶಿಖರ್ ಧವನ್, ' ಟಾಸ್ ನಮ್ಮ ಪಾಲಿಗೆ ಒಳ್ಳೆಯದ್ದೇ ಆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಕ್ಕೆ ಕೇಶವ್ ಮಹರಾಜ್‌ಗೆ ಧನ್ಯವಾದಗಳು. ನಮ್ಮ ಅದೃಷ್ಟಕ್ಕೆ ಸರಿಯಾದ ಸಂದರ್ಭದಲ್ಲಿ ಇಬ್ಬನಿ ಕೂಡಾ ನಮ್ಮ ನೆರವಿಗೆ ಬಂದಿತು ಎಂದು ನಗು ನಗುತ್ತಲೇ ಎದುರಾಳಿ ತಂಡದ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇದಾದ ಬಳಿಕ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅದ್ಭುತ ಜತೆಯಾಟದ ಬಗ್ಗೆ ಶಿಖರ್ ಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದ್ದರ ಬಗ್ಗೆ ನಾಯಕ ಧವನ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಇಶಾನ್ ಮತ್ತು ಶ್ರೇಯಸ್ ಅದ್ಭುತವಾಗಿ ಆಡಿದರು. ಈ ಜತೆಯಾಡ ನೋಡಲು ಚೆನ್ನಾಗಿತ್ತು. ಮೊದಲ 10 ಓವರ್‌ನಲ್ಲೇ ಸ್ಪೋಟಕ ಬ್ಯಾಟಿಂಗ್ ಮಾಡಬೇಕು ಎನ್ನುವುದು ನಮ್ಮ ಪ್ಲಾನ್ ಆಗಿತ್ತು. ಯಾಕೆಂದರೆ, ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಾಗಬಹುದು ಎನ್ನುವುದು ನಮಗೆ ಗೊತ್ತಿತ್ತು. ಆದರೆ ಇಬ್ಬನಿ ಬೀಳಲಾರಂಭಿಸಿದ ಬಳಿಕ ಬ್ಯಾಟಿಂಗ್ ನಡೆಸುವುದು ಸುಲಭವಾಯಿತು ಎಂದು ಶಿಖರ್ ಧವನ್ ಹೇಳಿದರು.

IND vs SA ಅಯ್ಯರ್ ಸೆಂಚುರಿ, ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲುವಿನ ನಗಾರಿ!

ಇನ್ನು ನಮ್ಮ ತಂಡದ ಬೌಲರ್‌ಗಳ ಪ್ರದರ್ಶನದ ಬಗ್ಗೆ ತೃಪ್ತಿಯಿದೆ. ಅವರೆಲ್ಲ ಯುವ ಆಟಗಾರರಾಗಿದ್ದು, ಕಲಿಕೆಗೆ ಉತ್ತಮ ಅವಕಾಶವಾಗಿದೆ. ಶಹಬಾಜ್ ಅಹಮದ್ ಸೇರಿದಂತೆ ಎಲ್ಲಾ ಬೌಲರ್‌ಗಳು ಪ್ರಬುದ್ದವಾಗಿ ಪ್ರದರ್ಶನದ ತೋರಿದ್ದರ ಬಗ್ಗೆ ಹೆಮ್ಮೆಯಿದೆ ಎಂದು ಧವನ್‌ ಟೀಂ ಇಂಡಿಯಾ ಬೌಲರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ನೀಡಿದ್ದ 278 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ಶಿಖರ್ ಧವನ್(13) ಹಾಗೂ ಶುಭ್‌ಮನ್ ಗಿಲ್(28) ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಶ್ರೇಯಸ್ ಅಯ್ಯರ್ ಅಜೇಯ 113 ಹಾಗೂ ಇಶಾನ್ ಕಿಶನ್ ಶತಕ ವಂಚಿತ 93 ರನ್‌ಗಳ ನೆರವಿನಿಂದ ಸುಲಭ ಗೆಲುವು ದಾಖಲಿಸಿತು. ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವು ಮಂಗಳವಾರ(ಅ.11) ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.

Follow Us:
Download App:
  • android
  • ios