ಗುಜರಾತ್‌ ಟೈಟಾನ್ಸ್‌ ತಂಡ ಐಪಿಎಲ್‌ನಿಂದ ಆರ್‌ಸಿಬಿ ತಂಡವನ್ನು ಹೊರಹಾಕಿದ ಬೆನ್ನಲ್ಲಿಯೇ, ಶುಭಮನ್‌ ಗಿಲ್‌ ಸಹೋದರಿ ಶಾನೀಲ್‌ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ನಿಂದನಾರ್ಹ ಕಾಮೆಂಟ್‌ಗಳನ್ನು ಹಾಕಲಾಗುತ್ತಿದೆ. 

ಬೆಂಗಳೂರು (ಮೇ.22): ಯುವ ಆಟಗಾರ ಶುಭ್‌ಮನ್‌ ಗಿಲ್ ಪಾಲಿಗೆ ಭಾನುವಾರ ಅತ್ಯಂತ ಸ್ಮರಣೀಯ ದಿನ. ಆರ್‌ಸಿಬಿ ಪಾಲಿಗೆ ಪ್ಲೇ ಆಫ್‌ಗೇರಲು ಬಹಳ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಆರಂಭಿಕ ಆಟಗಾರ ಆಕರ್ಷಕ ಶತಕ ಸಿಡಿಸುವ ಮೂಲಕ ಆರ್‌ಸಿಬಿ ವಿರುದ್ಧ ತಂಡದ 6 ವಿಕೆಟ್‌ ಗೆಲುವಿಗೆ ಕಾರಣರಾದರು. ತವರಿನ ಚಿನ್ನಸ್ವಾಮಿ ಮೈದಾನದಲ್ಲಿಯೇ ಆರ್‌ಸಿಬಿ ಸೋಲು ಕಾಣುವ ಮೂಲಕ ಪ್ಲೇ ಆಫ್‌ ಸ್ಥಾನದಿಂದ ವಂಚಿತವಾಗಿತ್ತು. ಈ ವೇಳೆ ಶುಭ್‌ಮನ್‌ ಗಿಲ್‌ ಅವರ ಸಹೋದರಿ ಶಾನೀಲ್‌ ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದ್ದರು. ಸಹೋದರ ಬಾರಿಸುವ ಒಂದೊಂದು ಸಿಕ್ಸರ್‌ಗೂ ಅವರು ಸ್ಟ್ಯಾಂಡ್‌ನಲ್ಲಿಯೇ ಸಂಭ್ರಮಿಸುತ್ತಿದ್ದವು. ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಬೆಂಬಲ ನೀಡಿದ್ದ ಚಿತ್ರಗಳನ್ನು ಶಾನೀಲ್‌ ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದರು. ತಮ್ಮ ಸ್ನೇಹಿತೆಯರೊಂದಿಗೆ ಇರುವ ಚಿತ್ರಗಳನ್ನು ಅವರು ಪ್ರಕಟಿಸಿದ್ದರು. ಮೊದಲೇ ಆರ್‌ಸಿಬಿ ಸೋಲಿನ ಬೇಸರದಲ್ಲಿದ್ದ ಆರ್‌ಸಿಬಿಯ ಅಭಿಮಾನಿಗಳು ಶಾನೀಲ್‌ ಸ್ಟ್ಯಾಂಡ್‌ನಲ್ಲಿದ್ದ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲಿಯೇ ನಿಂದನಾರ್ಹ ಕಾಮೆಂಟ್‌ಗಳನ್ನು ಹಾಕಿಕೊಳ್ಳುವ ಮೂಲಕ ಟೀಕೆ ಮಾಡಿದ್ದಾರೆ. ಅದರೊಂದಿಗೆ ವಿರಾಟ್‌ ಕೊಹ್ಲಿಯ ಅಭಿಮಾನಿಗಳು ಕೂಡ ಸೇರಿಕೊಂಡಿದ್ದಾರೆ.

'ಎಂಥಾ ಅದ್ಭುತ ದಿನ..' ಎಂದು ಬರೆದುಕೊಂಡು ಲಕ್ನೋನಲ್ಲಿ ವೀಕ್ಷಿಸಿದ್ದ ಪಂದ್ಯದ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡಿದ್ದರು. 'ಶುಭ್‌ಮಾನ್ ಗಿಲ್ ಮತ್ತು ಅವರ ಸಹೋದರಿಗಾಗಿ ಇಂದು ಮಾಡಿರುವ ಟ್ವೀಟ್‌ಗಳನ್ನು ನೋಡಿ. ಈ ಕಾರಣಕ್ಕಾಗಿಯೇ ನಾನು ಕೊಹ್ಲಿಯನ್ನು ದ್ವೇಷಿಸುತ್ತಿದ್ದೆ. ವಮಿಕಾಗೆ ಅತ್ಯಾಚಾರ ಬೆದರಿಕೆ ನೀಡಿದ "ಐಐಟಿ ಪದವೀಧರ" ನನ್ನು ಅನುಷ್ಕಾ ಕ್ಷಮಿಸಿದ್ದಾರೆ. ಈ ಹುಡುಗರಲ್ಲಿ ಕೆಲವರು ಕಂಬಿಗಳ ಹಿಂದೆ ಇರಬೇಕು ಮತ್ತು ವೃತ್ತಿಜೀವನವನ್ನು ನಾಶಪಡಿಸಬೇಕು. ಇದನ್ನೆಲ್ಲ ನಿಲ್ಲಿಸಲು ಅವರನ್ನೇ ಉದಾಹರಣೆಯಾಗಿ ಮಾಡಬೇಕಿತ್ತು' ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಬಹುತೇಕ ಟ್ವಿಟರ್‌ ಖಾತೆಯಲ್ಲಿ ಗಿಲ್‌ ಸಹೋದರಿಯನ್ನು ತೃತೀಯ ಲಿಂಗಿ ಎಂದು ಕರೆದಿದ್ದಾರೆ.

'ಕೊಹ್ಲಿಯ ಕೆಲವೊಂದು ಕೆಟ್ಟ ಅಭಿಮಾನಿಗಳು ಶುಬ್‌ಮನ್‌ ಗಿಲ್‌ ಮತ್ತು ಆತನ ಕುಟುಂಬವನ್ನು (ಅದರಲ್ಲೂ ಪ್ರಮುಖವಾಗಿ ಅಕೆಯ ಸಹೋದರಿ) ನಿಂದಿಸುತ್ತಿದ್ದಾರೆ. ಈ ವಿಷಕಾರಿ ಹಾಗೂ ಕೆಟ್ಟ ಶಕ್ತಿಯ ಫ್ಯಾನ್‌ಗಳು ಕೊಹ್ಲಿಯ ಮರ್ಯಾದೆಯನ್ನು ಹಾಳು ಮಾಡುತ್ತಿದ್ದಾರೆ. ಗಿಲ್‌ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್‌ಸ್ಟಾರ್‌' ಎಂದು ಇನ್ನೊಬ್ಬರು ಬರೆದಿದ್ದಾರೆ.

ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಗಿಲ್

"ನಾನು ಉತ್ತಮ ಫಾರ್ಮ್‌ನಲ್ಲಿದ್ದೇನೆ. ಉತ್ತಮ ಆರಂಭವನ್ನು ಪಡೆದುಕೊಂಡು ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುತ್ತಿದ್ದೇನೆ. ಐಪಿಎಲ್‌ನ ಮೊದಲ ಅವಧಿಯ ಆಟದಲ್ಲಿ ಇಂಥ ದೊಡ್ಡ ಇನ್ನಿಂಗ್ಸ್‌ಗಳನ್ನು ನಾನು ಮಿಸ್‌ ಮಾಡಿಕೊಂಡಿದ್ದೆ. 40 ಹಾಗೂ 50 ರನ್‌ಗಳನ್ನು ಗಳಿಸುತ್ತಿದ್ದರೂ ದೊಡ್ಡ ಮೊತ್ತ ಪೇರಿಸುತ್ತಿರಲಿಲ್ಲ. ಆದರೆ, ಐಪಿಎಲ್‌ನ ಕೊನೆಯಲ್ಲಿ ಇದನ್ನು ಸಾಧಿಸಲು ಯಶಸ್ವಿಯಾಗದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಕೆಲವು ಶಾಟ್‌ಗಳು ಆಡುತ್ತಲೇ ಇರಬೇಕಾಗುತ್ತದೆ. ಪ್ರತಿ ಬಾರಿ ಆಡುವ ಘನ ಉದ್ದೇಶ ನಮ್ಮಲ್ಲಿ ಇರಬೇಕಾಗುತ್ತದೆ. ಚೆಂಡು ಒದ್ದೆಯಾಗಿದ್ದರಿಂದ ಬ್ಯಾಟಿಂಗ್‌ ಮಾಡಲು ಸುಲಭವಾಗಿತ್ತು. ಚೆಂಡಿನಲ್ಲಿ ತೇವಾಂಶ ಇದ್ದ ಕಾರಣ ಸ್ಪಿನ್ನರ್‌ಗಳು ಬೌಲಿಂಗ್‌ ಮಾಡೋದು ಸುಲಭವಾಗಿರಲಿಲ್ಲ ಎಂದು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಗಿಲ್‌ ಹೇಳಿದ್ದಾರೆ.

'ಮುಂದಿನ ತಲೆಮಾರು ಆಳು': ಶತಕ ಸಿಡಿಸಿದ ಶುಭ್‌ಮನ್‌ ಗಿಲ್‌ಗೆ ವಿಶೇಷ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!