ಐಪಿಎಲ್ ಆಟಗಾರರ ವರ್ಗಾವಣೆ ಚರ್ಚೆಗಳ ನಡುವೆ, ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರುವ ವದಂತಿಗಳು ಹೆಚ್ಚಾಗಿವೆ. ಸಿಎಸ್‌ಕೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷ ಸುಳಿವು ನೀಡುವ ವಿಡಿಯೋ ಪೋಸ್ಟ್ ಮಾಡಿದೆ.

ಚೆನ್ನೈ: ಐಪಿಎಲ್ ಮಿನಿ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಮತ್ತು ಕೈಬಿಡುವ ಆಟಗಾರರ ಬಗ್ಗೆ ಮಾಹಿತಿ ನೀಡುವ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರುತ್ತಾರಾ ಎಂಬ ಬಗ್ಗೆ ಇನ್ನೂ ಸಸ್ಪೆನ್ಸ್ ಮುಂದುವರಿದಿದೆ. ಈ ನಡುವೆ, ಐಪಿಎಲ್ ಆಟಗಾರರ ವರ್ಗಾವಣೆ ಚರ್ಚೆಗಳು ಜೋರಾಗಿರುವಾಗಲೇ, ಚೆನ್ನೈ ಸೂಪರ್ ಕಿಂಗ್ಸ್ ಸಂಜು ಹೆಸರನ್ನು ನೇರವಾಗಿ ಹೇಳದೆ ಪರೋಕ್ಷ ಸುಳಿವು ನೀಡಿದೆ. ಈ ಹಿಂದೆ ಸಂಜು ಚೆನ್ನೈಗೆ ಬರುತ್ತಾರಾ ಎಂಬ ಪ್ರಶ್ನೆಗೆ, 'ಸಾಧ್ಯವಿಲ್ಲ... ಸಾಧ್ಯವಿಲ್ಲ' ಎಂದೇ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಸಂಜು ಸ್ಯಾಮ್ಸನ್

ಆದರೆ, ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋ ಒಂದು ಈಗ ಅಭಿಮಾನಿಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ತಂಡದ ಅದೃಷ್ಟದ ಸಂಕೇತವಾದ ಲಿಯೋಗೆ ಬರುವ ಫೋನ್ ಕರೆಯೊಂದಿಗೆ ವಿಡಿಯೋ ಆರಂಭವಾಗುತ್ತದೆ. ಫೋನ್ ಎತ್ತಿದ ಲಿಯೋಗೆ ರಜನಿಕಾಂತ್ ಅವರ 'ವೆಟ್ಟೈಯನ್' ಚಿತ್ರದ 'ಸೇಟನ್ ವಂದಲ್ಲೆ, ಸೇಟ್ಟೈ ಸೆರಿಯಾ ವಂದಲ್ಲೆ' ಎಂಬ ಹಾಡು ಕೇಳಿಸುತ್ತದೆ. ಇದರಿಂದ ಗೊಂದಲಕ್ಕೊಳಗಾದ ಲಿಯೋ, ನೇರವಾಗಿ ಸಿಇಒ ಕಾಶಿ ವಿಶ್ವನಾಥನ್ ಅವರ ರೂಮಿಗೆ ಹೋಗಿ ವಿಚಾರಿಸುತ್ತದೆ. ಏನಿದು ಎಂದು ಕೇಳುವ ಕಾಶಿ ವಿಶ್ವನಾಥನ್‌ಗೆ ಲಿಯೋ ವಿಷಯ ತಿಳಿಸಿದಾಗ, 'ಟ್ರೇಡ್ ವದಂತಿಗಳಲ್ಲವೇ, ಒಂದು ನಿಮಿಷ' ಎಂದು ಹೇಳಿ ಫೋನ್ ತೆಗೆದು, ಐಪಿಎಲ್ ಹರಾಜಿಗೂ ಮುನ್ನ ತಂಡದ ಸಿಇಒ ಆದ ತನ್ನನ್ನೇ ಪಂಜಾಬ್ ಕಿಂಗ್ಸ್‌ಗೆ ನೀಡಿ ಪ್ರೀತಿ ಜಿಂಟಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಸುದ್ದಿಯನ್ನು ಫೋನ್‌ನಲ್ಲಿ ತೋರಿಸುತ್ತಾರೆ.

ಸುಳಿವು ಬಿಟ್ಟುಕೊಟ್ಟ ಸಿಎಸ್‌ಕೆ ಫ್ರಾಂಚೈಸಿ

Scroll to load tweet…

ನಂತರ ಒಂದು ಶಾಸನಬದ್ಧ ಎಚ್ಚರಿಕೆಯನ್ನೂ ನೀಡಲಾಗುತ್ತದೆ, 'ಟ್ರೇಡ್ ವದಂತಿಗಳನ್ನು ಓದುವುದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ, ಮಾನಸಿಕ ಆರೋಗ್ಯಕ್ಕಾಗಿ ಅಧಿಕೃತ ಪ್ರಕಟಣೆ ಬರುವವರೆಗೆ ಕಾಯಿರಿ' ಎಂದು ಹೇಳಲಾಗುತ್ತದೆ. ಸಂಜು ಹೆಸರನ್ನು ನೇರವಾಗಿ ಹೇಳದಿದ್ದರೂ, 'ಸೇಟನ್ ವಂದಲ್ಲೆ' ಎಂಬ ಮಲಯಾಳಂ ಹಾಡು ಮತ್ತು ಕಾಶಿ ವಿಶ್ವನಾಥನ್ ಅವರ ಪ್ರತಿಕ್ರಿಯೆ ಸಂಜು ಅವರ ಆಗಮನದ ಬಗ್ಗೆಯೇ ಇದೆ ಎಂದು ಅಭಿಮಾನಿಗಳು ಡಿಕೋಡ್ ಮಾಡುತ್ತಿದ್ದಾರೆ. ಈ ತಿಂಗಳ 15ರೊಳಗೆ ತಂಡಗಳು ಉಳಿಸಿಕೊಳ್ಳುವ ಮತ್ತು ಕೈಬಿಡುವ ಆಟಗಾರರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಂಜು ಬಗ್ಗೆ ಚೆನ್ನೈ ಈ ಹಿಂದೆ ಆಸಕ್ತಿ ತೋರಿಸಿದ್ದರೂ, ಬದಲಾಗಿ ನೀಡಬೇಕಾದ ಆಟಗಾರರ ವಿಷಯದಲ್ಲಿ ರಾಜಸ್ಥಾನದ ನಿಲುವಿನಿಂದಾಗಿ ಈ ವರ್ಗಾವಣೆ ನಡೆದಿಲ್ಲ ಎಂದು ವರದಿಯಾಗಿದೆ.

ಇನ್ನೂ ಕೆಲವು ಮಾಧ್ಯಮಗಳ ವರದಿಯ ಪ್ರಕಾರ, ಸಂಜು ಸ್ಯಾಮ್ಸನ್ ಅವರನ್ನು ಕರೆತಂದು, ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಬಿಟ್ಟುಕೊಡಲು ಸಿಎಸ್‌ಕೆ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಯಾವ ಆಟಗಾರ ಯಾವ ತಂಡದ ಪಾಲಾಗುತ್ತಾರೆ ಎನ್ನುವುದಕ್ಕೆ ಇನ್ನೊಂದು ವಾರ ಕಾಯಲೇಬೇಕಾಗುತ್ತದೆ.