ಐಪಿಎಲ್ 2026ರ ಪ್ಲೇ ಆಫ್‌ಗೆ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ಆಘಾತ ಎದುರಾಗಿದೆ. ತಂಡದ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಫಿಲ್ ಸಾಲ್ಟ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಮೊದಲ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದೆ. ಇದೀಗ ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ತಂಡವು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಜೇಕಬ್ ಬೆಥೆಲ್, ಗಾಯದ ಸಮಸ್ಯೆಯಿಂದ ತವರಿಗೆ ವಾಪಾಸ್ಸಾಗಿದ್ದಾರೆ.

Add Asianetnews Kannada as a Preferred SourcegooglePreferred

ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದ ಬೆಥೆಲ್

ಹೌದು, ಕಳೆದ ಮೇ 17ರಂದು ನಡೆದ ಪಂಜಾಬ್ ಕಿಂಗ್ಸ್‌ ಎದುರಿನ ಪಂದ್ಯದ ವೇಳೆಯಲ್ಲಿ ಜೇಕಬ್ ಬೆಥೆಲ್ ಎಡಗೈ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದರು. ಗಾಯದ ಪ್ರಮಾಣ ತೀವ್ರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು ಬೆಥೆಲ್ ಇದೀಗ ಇಂಗ್ಲೆಂಡ್‌ಗೆ ವಾಪಾಸ್ಸಾಗಿದ್ದು, ಈ ಸೀಸನ್ ಐಪಿಎಲ್ ಟೂರ್ನಿಯ ಪ್ಲೇ ಆಫ್‌ ಪಂದ್ಯಗಳಿಗೆ ಬೆಥೆಲ್ ಅಲಭ್ಯರಾಗಿದ್ದಾರೆ. ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಪರ ಆರಂಭಿಕನಾಗಿ ಏಳು ಪಂದ್ಯಗಳನ್ನಾಡಿದ್ದ ಬೆಥೆಲ್, 96 ರನ್ ಸಿಡಿಸಿದ್ದರು.

ಇದೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡಾ ಬೆಥೆಲ್ ತವರಿಗೆ ವಾಪಾಸ್ಸಾಗಿರುವುದನ್ನು ಖಚಿತಪಡಿಸಿದ್ದು, ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ವೈದ್ಯಕೀಯ ಸಿಬ್ಬಂದಿ ಬೆಥೆಲ್ ಅವರ ಗಾಯದ ಬಗ್ಗೆ ನಿಗಾ ವಹಿಸಿದೆ ಎಂದು ತಿಳಿಸಿದೆ. ಬೆಥೆಲ್ ಇದೇ ಜೂನ್ 04ರಿಂದ ಲಾರ್ಡ್ಸ್‌ನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ಗೆ ಸಂಪೂರ್ಣ ಫಿಟ್ ಆಗುತ್ತಾರೆಯೇ ಇಲ್ಲವೇ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Scroll to load tweet…

ಜೇಕಬ್ ಬೆಥೆಲ್ ಆರ್‌ಸಿಬಿ ಆಡಿದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಕೊನೆಯ ಐಪಿಎಲ್ ಲೀಗ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಬೆಥೆಲ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಜತೆ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿದು ಬೆಂಗಳೂರು ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದರು. ಆರೆಂಜ್ ಆರ್ಮಿ ಎದುರು ವೆಂಕಟೇಶ್ ಅಯ್ಯರ್ ಕೇವಲ 19 ಎಸೆತಗಳಲ್ಲಿ ಚುರುಕಿನ 44 ರನ್ ಸಿಡಿಸಿ ಗಮನ ಸೆಳೆದಿದ್ದರು. ಇದೀಗ ಗಾಯದ ಸಮಸ್ಯೆಯಿಂದಾಗಿ ಕಳೆದೊಂದು ತಿಂಗಳಿನಿಂದ ಹೊರಗುಳಿದಿದ್ದ ಫಿಲ್ ಸಾಲ್ಟ್ ಸಂಪೂರ್ಣ ಫಿಟ್ ಆಗಿ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ. ಹೀಗಾಗಿ ಬೆಥೆಲ್ ಬದಲಿಗೆ ಮತ್ತೆ ಫಿಲ್ ಸಾಲ್ಟ್, ಐಪಿಎಲ್‌ ಪ್ಲೇ ಆಫ್ ಪಂದ್ಯಗಳಲ್ಲಿ ಆರ್‌ಸಿಬಿ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ವೆಂಕಟೇಶ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್?

ಇನ್ನು ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಆರ್‌ಸಿಬಿ ಆರಂಭಿಕರಾಗಿ ಕಣಕ್ಕಿಳಿದರೆ, ಬೆಂಗಳೂರು ಟೀಮ್ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 19ನೇ ಆವೃತ್ತಿಯ ಐಪಿಎಲ್ ಟೂರ್ನಿಯುದ್ದಕ್ಕೂ ಜಿತೇಶ್ ಶರ್ಮಾ ಬ್ಯಾಟರ್‌ ಆಗಿ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಸಾಲ್ಟ್‌ಗೆ ಆರಂಭಿಕ ಬ್ಯಾಟರ್‌ ಹಾಗೂ ವಿಕೆಟ್ ಜವಾಬ್ದಾರಿ ನೀಡಿ, ಜಿತೇಶ್ ಶರ್ಮಾ ಬದಲಿಗೆ ವೆಂಕಟೇಶ್ ಅಯ್ಯರ್‌ಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಣೆಹಾಕುವ ನಿರೀಕ್ಷೆಯಿದೆ.