ಐಪಿಎಲ್ 2026ರ ಪಂದ್ಯದಲ್ಲಿ, ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಸುಧಾರಿತ ಬೌಲಿಂಗ್‌ನಿಂದ ಆರ್‌ಸಿಬಿ ಸಮತೋಲನದಿಂದ ಕೂಡಿದ್ದರೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆ ಬೌಲಿಂಗ್ ಸಮಸ್ಯೆಯಿಂದ ಬಳಲುತ್ತಿದೆ.

ಬೆಂಗಳೂರು: 2026ರ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಆರ್‌ಸಿಬಿ, ಈ ಆವೃತ್ತಿಯಲ್ಲಿ ಸತತ 2ನೇ ಗೆಲುವಿನ ವಿಶ್ವಾಸದಲ್ಲಿದೆ. ಸತತ 2 ಸೋಲು ಅನುಭವಿಸಿ ಭಾರೀ ಒತ್ತಡದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಭಾನುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿರುವ ಆರ್‌ಸಿಬಿ, ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಲು ಕಾತರಲ್ಲಿದೆ.

ಸಿಎಸ್‌ಕೆಗೆ ಹೋಲಿಸಿದರೆ, ಆರ್‌ಸಿಬಿ ಸಮತೋಲನದಿಂದ ಕೂಡಿದ್ದು ಗೆಲುವಿನ ಫೇವರಿಟ್‌ ಎನಿಸಿದೆ. ತಂಡದ ಅಗ್ರ ಕ್ರಮಾಂಕ ಬಲಿಷ್ಠವಾಗಿದೆ. ವಿರಾಟ್‌ ಕೊಹ್ಲಿ ಎಂದಿನ ಲಯದಲ್ಲಿದ್ದಾರೆ. ದೇವದತ್‌ ಪಡಿಕ್ಕಲ್‌ ಮೊದಲ ಪಂದ್ಯದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ರಜತ್‌ ಪಾಟೀದಾರ್‌ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಫಾರ್ಮ್‌ ಕಾಯ್ದುಕೊಂಡಿದ್ದಾರೆ.

ಆರ್‌ಸಿಬಿಯ ಬ್ಯಾಟಿಂಗ್‌ ಯಾವಾಗಲೂ ಬಲಿಷ್ಠವಾಗೇ ಇರಲಿದೆ. ಆದರೆ ಬೌಲಿಂಗ್‌ನಲ್ಲಿ ತಂಡ ಸಾಕಷ್ಟು ಸುಧಾರಿಸಿದ್ದು, ತಂಡದ ಯಶಸ್ಸಿಗೆ ಇದೇ ಪ್ರಮುಖ ಕಾರಣ. ಈ ಪಂದ್ಯದಲ್ಲೂ ಜೋಶ್‌ ಹೇಜಲ್‌ವುಡ್‌ ಆಡುವುದು ಅನುಮಾನ. ಆದರೆ ಮೊದಲ ಪಂದ್ಯದಲ್ಲಿ ಜೇಕಬ್‌ ಡಫಿ ತೋರಿದ ಪ್ರದರ್ಶನ, ಸಹಜವಾಗಿಯೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಲಿದೆ. ಹೇಜಲ್‌ವುಡ್‌ ಫಿಟ್‌ ಆಗಿ ಆಯ್ಕೆಗೆ ಲಭ್ಯವಾದ ಬಳಿಕ ಆರ್‌ಸಿಬಿ ಬೌಲಿಂಗ್‌ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಈ ಪಂದ್ಯದಲ್ಲಿ ಬಲಗೈ ವೇಗಿ ಅಭಿನಂದನ್‌ ಸಿಂಗ್‌ ಬದಲು ಎಡಗೈ ವೇಗಿ ಮಂಗೇಶ್‌ ಯಾದವ್‌ಗೆ ಜಾಗ ಸಿಗಬಹುದು.

ಸ್ಪಿನ್ನರ್‌ಗಳಾದ ಸುಯಶ್‌ ಶರ್ಮಾ ಹಾಗೂ ಕೃನಾಲ್‌ ಪಾಂಡ್ಯಗೆ ಸಿಎಸ್‌ಕೆಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶಿವಂ ದುಬೆ, ಆಯುಷ್‌ ಮ್ಹಾತ್ರೆ ಹಾಗೂ ಸರ್ಫರಾಜ್‌ ಖಾನ್‌ರನ್ನು ನಿಯಂತ್ರಿಸುವ ಸವಾಲು ಎದುರಾಗಲಿದೆ.

ಚೆನ್ನೈಗೆ ಬೌಲಿಂಗ್‌ ಸಮಸ್ಯೆ:

ಚೆನ್ನೈನ ಬ್ಯಾಟಿಂಗ್‌ ತಕ್ಕಮಟ್ಟಿಗೆ ಇದ್ದರೂ, ಗುಣಮಟ್ಟದ ಬೌಲರ್‌ಗಳ ತೀವ್ರ ಸಮಸ್ಯೆ ಇದೆ. ಕಳೆದೆರಡು ಪಂದ್ಯಗಳಲ್ಲಿ ಸಿಎಸ್‌ಕೆ ಬೌಲರ್‌ಗಳು 30.5 ಓವರಲ್ಲಿ ಕೇವಲ 7 ವಿಕೆಟ್‌ ಕಿತ್ತು 338 ರನ್ ಚಚ್ಚಿಸಿಕೊಂಡಿದ್ದಾರೆ. ಸಣ್ಣ ಬೌಂಡರಿಗಳನ್ನು ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ದೈತ್ಯ ಬ್ಯಾಟರ್‌ಗಳನ್ನು ನಿಯಂತ್ರಿಸಬೇಕಿದ್ದರೆ, ಸಿಎಸ್‌ಕೆ ಬೌಲರ್‌ಗಳಿಂದ ಅಸಾಧಾರಣ ಪ್ರದರ್ಶನ ಮೂಡಿಬರಲೇ ಬೇಕು.

ಕ್ಲಿಕ್‌ ಆಗ್ತಾರಾ ಸಂಜು ಸ್ಯಾಮ್ಸನ್‌?:

ಟಿ20 ವಿಶ್ವಕಪ್‌ ಹೀರೋ ಸಂಜು ಸ್ಯಾಮ್ಸನ್‌, ಈ ಐಪಿಎಲ್‌ನಲ್ಲಿ ಇನ್ನೂ ತಮ್ಮ ನೈಜ ಆಟ ತೋರಿಲ್ಲ. ಮೊದಲ ಪಂದ್ಯದಲ್ಲಿ 6 ಮತ್ತು 2ನೇ ಪಂದ್ಯದಲ್ಲಿ 7 ರನ್‌ಗೆ ಔಟಾಗಿ ಸಿಎಸ್‌ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಲಯ ಕಂಡುಕೊಂಡು, ಚೆನ್ನೈಗೆ ಮೊದಲ ಜಯ ತಂದುಕೊಡಲು ಇದಕ್ಕಿಂತ ಉತ್ತಮ ವೇದಿಕೆ ಸಿಗುವುದಿಲ್ಲ.

ಒಟ್ಟು ಮುಖಾಮುಖಿ: 35

ಆರ್‌ಸಿಬಿ: 13

ಚೆನ್ನೈ: 21

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ಪಡಿಕ್ಕಲ್‌, ಪಾಟೀದಾರ್‌ (ನಾಯಕ), ಡೇವಿಡ್‌, ಜಿತೇಶ್‌, ಶೆಫರ್ಡ್‌, ಕೃನಾಲ್‌, ಭುವನೇಶ್ವರ್‌, ಅಭಿನಂದನ್‌/ಮಂಗೇಶ್‌, ಸುಯಶ್‌, ಡಫಿ.

ಚೆನ್ನೈ: ಸ್ಯಾಮ್ಸನ್‌, ಗಾಯಕ್ವಾಡ್‌ (ನಾಯಕ), ಆಯುಷ್‌ ಮ್ಹಾತ್ರೆ, ಶಿವಂ ದುಬೆ, ಕಾರ್ತಿಕ್‌, ಸರ್ಫರಾಜ್‌, ಪ್ರಶಾಂತ್‌, ನೂರ್‌ ಅಹ್ಮದ್‌, ಕಾಂಬೋಜ್‌, ಹೆನ್ರಿ, ಖಲೀಲ್‌, ಚಹರ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳ ಸ್ವರ್ಗ. ಇಲ್ಲಿ 220-230 ರನ್‌ ಗಳಿಸಿದರೂ ಅದು ಸುರಕ್ಷಿತವಲ್ಲ. ಇಲ್ಲಿ ನಡೆದ ಕೊನೆ 6 ಪಂದ್ಯಗಳ ಪೈಕಿ 3ರಲ್ಲಿ 200+ ರನ್‌ ಯಶಸ್ವಿಯಾಗಿ ಚೇಸ್‌ ಆಗಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡುವುದು ಖಚಿತ. ರನ್‌ ಹೊಳೆ ನಿರೀಕ್ಷಿಸಬಹುದು.

ಚೆನ್ನೈ ವಿರುದ್ಧ ಸತತ 4ನೇ ಗೆಲುವಿನ ಗುರಿ

ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಕೊನೆ 3 ಪಂದ್ಯದಲ್ಲೂ ಗೆದ್ದಿದ್ದು, ಸತತ 4ನೇ ಗೆಲುವಿನ ವಿಶ್ವಾಸದಲ್ಲಿದೆ. ಒಟ್ಟಾರೆ ಚೆನ್ನೈ ವಿರುದ್ಧ ಕೊನೆ 6 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. ಕೆಲ ವರ್ಷಗಳಿಂದ ಆರ್‌ಸಿಬಿಗೆ ಪ್ರಬಲ ಪೈಪೋಟಿ ನೀಡಲು ಸಿಎಸ್‌ಕೆ ವಿಫಲವಾಗುತ್ತಿದ್ದು, ಈ ಬಾರಿಯಾದರೂ ಗೆಲ್ಲಲಿದೆಯೇ ಎಂಬುದನ್ನು ಕಾದು ನೋಡಬೇಕು.