Asianet Suvarna News Asianet Suvarna News

ಟಿ20 ಕಮ್‌ಬ್ಯಾಕ್‌: ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾಗೆ ಅಗ್ನಿಪರೀಕ್ಷೆ

35 ವರ್ಷದ ಕೊಹ್ಲಿ, 36ರ ರೋಹಿತ್ 2022ರ ಟಿ20 ವಿಶ್ವಕಪ್‌ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ನೇರವಾಗಿ ಆಯ್ಕೆ ಮಾಡುವ ಬದಲು ಆಫ್ಘನ್‌ ಸರಣಿಯಲ್ಲಿ ಆಡಿಸಲಾಗುತ್ತಿದೆ.

Rohit Sharma Virat Kohli comeback to T20I real test for both players kvn
Author
First Published Jan 10, 2024, 10:41 AM IST

ನವದೆಹಲಿ(ಜ.10): ತೂಗುಯ್ಯಾಲೆಯಲ್ಲಿದ್ದ ಹಿರಿಯ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಬದುಕನ್ನು ಬಿಸಿಸಿಐ ಹಿರಿತನ, ಅನುಭವದ ಆಧಾರದಲ್ಲಿ ರಕ್ಷಿಸಿ, ಮತ್ತೆ ಟೀಂ ಇಂಡಿಯಾದ ಬಾಗಿಲು ತೆರೆದು ಕೊಟ್ಟಿದೆ. ಗುರುವಾರದಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಇಬ್ಬರನ್ನೂ ಆಯ್ಕೆ ಮಾಡಿದೆ. ಆದರೆ ಇಬ್ಬರೂ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿ ಆಟವಾಡುತ್ತಾರಾ ಎಂಬ ಕುತೂಹಲ ಸದ್ಯ ಎಲ್ಲರಲ್ಲಿದೆ.

35 ವರ್ಷದ ಕೊಹ್ಲಿ, 36ರ ರೋಹಿತ್ 2022ರ ಟಿ20 ವಿಶ್ವಕಪ್‌ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ನೇರವಾಗಿ ಆಯ್ಕೆ ಮಾಡುವ ಬದಲು ಆಫ್ಘನ್‌ ಸರಣಿಯಲ್ಲಿ ಆಡಿಸಲಾಗುತ್ತಿದೆ. ಅಂದರೆ ಟಿ20 ವಿಶ್ವಕಪ್‌ನಲ್ಲೂ ಅವರು ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ ಇಬ್ಬರೂ ಟೆಸ್ಟ್‌, ಏಕದಿನದಲ್ಲಿ ಮಿಂಚಿದ ಹಾಗೆ ಕಳೆದೆರಡು ವರ್ಷಗಳಲ್ಲಿ ಟಿ20ಯಲ್ಲಿ ಅಬ್ಬರಿಸಿಲ್ಲ.

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ 10ನೇ ಸೋಲಿನ ಶಾಕ್‌!

ಕೊಹ್ಲಿಯ ಕಳೆದ 4 ಐಪಿಎಲ್‌ ಆವೃತ್ತಿಗಳ ಸ್ಟ್ರೈಕ್‌ರೇಟ್‌ ಕ್ರಮವಾಗಿ 121.35, 119.46, 115.99 ಮತ್ತು 139.82 ಇದೆ. ಅತ್ತ ರೋಹಿತ್‌ 2013ರಿಂದ ಯಾವ ಐಪಿಎಲ್‌ ಆವೃತ್ತಿಯಲ್ಲೂ 400ರ ಗಡಿ ದಾಟಿಲ್ಲ. ಸ್ಟ್ರೈಕ್‌ರೇಟ್‌ ಕೂಡಾ 125ರ ಆಸುಪಾಸಿನಲ್ಲಿದೆ. ಮತ್ತೊಂದೆಡೆ ಮಧ್ಯ ಓವರ್‌, ಸ್ಪಿನ್ನರ್‌ಗಳ ಎದುರು ಇಬ್ಬರದ್ದೂ ಸಾಧಾರಣ ಆಟ. ಹೀಗಾಗಿ ಅಫ್ಘಾನಿಸ್ತಾನ ಸರಣಿಯಲ್ಲಿ ಕೊಹ್ಲಿ, ರೋಹಿತ್‌ಗೆ ತಮ್ಮ ಬ್ಯಾಟಿಂಗ್‌ ಸ್ಟ್ರೈಕ್‌ ರೇಟ್‌ ಹೆಚ್ಚಿಸುವತ್ತ ಗಮನ ಹರಿಸುವ ಹೊಣೆಗಾರಿಕೆಯಿದೆ. ಒಂದು ವೇಳೆ ವಿಫಲರಾದರೆ ಅಥವಾ ನಿಧಾನ ಆಟವಾಡಿದರೆ ಟಿ20 ವಿಶ್ವಕಪ್‌ ತಂಡದ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು.

ಯುವ ಪ್ರತಿಭೆಗಳ ಜೊತೆ ಪೈಪೋಟಿ

ಟೀಂ ಇಂಡಿಯಾದಲ್ಲಿ ಪ್ರತಿಭೆಗಳಿಗೇನೂ ಕಮ್ಮಿಯಿಲ್ಲ. ಯುವ ಪ್ರತಿಭಾವಂತರ ದಂಡೇ ಅವಕಾಶಕ್ಕಾಗಿ ಕಾಯುತ್ತಿದೆ. ಈ ನಡುವೆ ಸ್ಫೋಟಕ ಯುವ ಬ್ಯಾಟರ್‌ಗಳನ್ನು ಬದಿಗಿಟ್ಟು ಮತ್ತೆ ಕೊಹ್ಲಿ, ರೋಹಿತ್‌ಗೆ ಅವಕಾಶ ನೀಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಕಳೆದೆರಡು ಟಿ20 ವಿಶ್ವಕಪ್‌ನಲ್ಲೂ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿದ್ದು ಆರಂಭಿಕ ಮೂವರು ಬ್ಯಾಟರ್‌ಗಳ ನಿಧಾನ ಆಟ. ಆ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕಿದ್ದ ಬಿಸಿಸಿಐ, ಸ್ಫೋಟಕ ಯುವ ಆಟಗಾರರನ್ನು ಕೈಬಿಟ್ಟು ಮತ್ತೆ ಹಿರಿಯರಿಗೆ ಮಣೆ ಹಾಕುವ ತಯಾರಿಯಲ್ಲಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ರೋಹಿತ್-ಕೊಹ್ಲಿ ಭಾರತ T20 ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದೇಗೆ..?

ರಣಜಿ: ಕರ್ನಾಟಕ ತಂಡಕ್ಕೆ ವೇಗಿ ಪ್ರಸಿದ್ಧ್‌ ಸೇರ್ಪಡೆ

ಬೆಂಗಳೂರು: ಜ.12ರಿಂದ ಅಹಮದಾಬಾದ್‌ನಲ್ಲಿ ಆರಂಭಗೊಳ್ಳಲಿರುವ ಗುಜರಾತ್‌ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ವೇಗಿ ಪ್ರಸಿದ್ಧ್‌ ಕೃಷ್ಣ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ದ.ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಪ್ರಸಿದ್ಧ್‌ ಮೊದಲ ರಣಜಿ ಪಂದ್ಯಕ್ಕೆ ತಂಡದಲ್ಲಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗದ ಕಾರಣ ರಾಜ್ಯ ತಂಡಕ್ಕೆ ಮರಳಿದ್ದಾರೆ. ಮಯಾಂಕ್‌ ತಂಡ ಮುನ್ನಡೆಸಲಿದ್ದು, ನಿಕಿನ್‌ ಜೋಸ್‌ ಉಪನಾಯಕತ್ವ ವಹಿಸಲಿದ್ದಾರೆ.
 

Follow Us:
Download App:
  • android
  • ios