ಟೀಂ ಇಂಡಿಯಾ ಕೋಚ್ ಆಗುವಂತೆ ಗೌತಮ್ ಗಂಭೀರ್ ಅವರನ್ನು ರೋಹಿತ್ ಶರ್ಮಾ ಆಹ್ವಾನಿಸಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಇಬ್ಬರ ನಡುವಿನ ಸಂಬಂಧ ಹಳಸಿದ್ದು, ಪರಸ್ಪರ ನಂಬಿಕೆ ಮುರಿದುಬಿದ್ದಿದೆ ಎಂದು ವರದಿಗಳು ಹೇಳುತ್ತಿವೆ. ರೋಹಿತ್ ಅವರ ನಿವೃತ್ತಿ ಚಿಂತನೆ ಮತ್ತು ಹೇಳಿಕೆಗಳು ಈ ಬಿರುಕಿಗೆ ಕಾರಣವಾಗಿವೆ.

Rohit Sharma-Gautam Gambhir Rift? PTI Report Explained: ಟೀಂ ಇಂಡಿಯಾದ ಏಕದಿನ ತಂಡದಿಂದ ರೋಹಿತ್ ಶರ್ಮಾ ನಿವೃತ್ತಿಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ನಡುವೆಯೇ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ನಡುವಿನ ಸಂಬಂಧದ ಬಗ್ಗೆ ಒಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಈ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ್ದರೂ, ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದರ ಬಗ್ಗೆ ವರದಿಗಳು ಬರುತ್ತಿವೆ.

ಗಂಭೀರ್‌ಗೆ ಆಫರ್ ಕೊಟ್ಟಿದ್ದ ರೋಹಿತ್ ಶರ್ಮಾ

ಐಪಿಎಲ್ 2024ರ ಸೀಸನ್ ವೇಳೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗೌತಮ್ ಗಂಭೀರ್ ಅವರನ್ನು ಭೇಟಿಯಾಗಿದ್ದ ರೋಹಿತ್ ಶರ್ಮಾ, ಟೀಂ ಇಂಡಿಯಾದ ಕೋಚ್ ಆಗುವಂತೆ ನೇರವಾಗಿ ಕೇಳಿಕೊಂಡಿದ್ದರು ಎಂದು ಪಿಟಿಐ ವರದಿ ಮಾಡಿದೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ನಡೆದ ಅಭ್ಯಾಸದ ಸಮಯದಲ್ಲಿ, 'ಗೌತಿ ಭಾಯ್, ಇಂಡಿಯನ್ ಟೀಮ್‌ಗೆ ಬನ್ನಿ' ಎಂದು ರೋಹಿತ್ ಗಂಭೀರ್‌ಗೆ ಹೇಳಿದ್ದರು. ಇದಕ್ಕೆ ಗಂಭೀರ್, 'ನೀನು ಕ್ಯಾಪ್ಟನ್ ಆಗಿ ಮುಂದುವರೆಯುವುದಾದರೆ, ನಾನು ಖಂಡಿತ ಬರುತ್ತೇನೆ' ಎಂದು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಆದರೆ, ನಂತರ ತಂಡದಲ್ಲಿ ನಡೆದ ಘಟನೆಗಳು ಅಷ್ಟು ಚೆನ್ನಾಗಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-3 ಅಂತರದ ಸೋಲಿನ ನಂತರ ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂದು ವರದಿಯಾಗಿವೆ. ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್‌ಗೂ ಮುನ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಕಳಪೆ ಫಾರ್ಮ್‌ನಿಂದಾಗಿ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯಲು ರೋಹಿತ್ ಬಯಸಿದ್ದರು. ಆದರೆ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಇದಕ್ಕೆ ಒಪ್ಪಲಿಲ್ಲ. ಇದು ಇಂಗ್ಲೆಂಡ್ ಪ್ರವಾಸದ ಆಯ್ಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿ ಅಜಿತ್ ಅಗರ್ಕರ್, ರೋಹಿತ್ ಶರ್ಮಾ ಅವರನ್ನು ತಡೆದಿದ್ದರು.

ಮುರಿದುಬಿದ್ದ ನಂಬಿಕೆ

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ರೋಹಿತ್ ಶರ್ಮಾ ಯೋಚಿಸಿದ್ದರು. ಆದರೆ, ನಂತರ ಬ್ರಾಡ್‌ಕಾಸ್ಟರ್‌ಗಳಿಗೆ ನೀಡಿದ ಸಂದರ್ಶನವೊಂದರಲ್ಲಿ, 'ನಾನು ಇಬ್ಬರು ಮಕ್ಕಳ ತಂದೆ, ನನಗೆ ಯಾವುದು ಸರಿ ಅಂತ ನನಗೆ ಚೆನ್ನಾಗಿ ಗೊತ್ತು' ಎಂದು ರೋಹಿತ್ ಹೇಳಿದ್ದು ಗಂಭೀರ್ ಮತ್ತು ಅಗರ್ಕರ್‌ಗೆ ಆಘಾತ ತಂದಿತ್ತು. ಈ ಘಟನೆಯ ನಂತರ ಇವರಿಬ್ಬರ ನಡುವಿನ ಪರಸ್ಪರ ನಂಬಿಕೆ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಪಿಟಿಐ ವರದಿ ಹೇಳಿದೆ.

ಇದಕ್ಕೂ ಮುನ್ನ ಲಾರ್ಡ್ಸ್‌ನಲ್ಲಿ ಗಂಭೀರ್ ಜೊತೆ ರೋಹಿತ್ ನಗುತ್ತಾ ಮಾತನಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಆದರೆ, ತಂಡದ ಒಳಗಿನ ವಾತಾವರಣ ಅದಕ್ಕೆ ತದ್ವಿರುದ್ಧವಾಗಿದೆ ಎಂಬುದನ್ನು ಈ ಹೊಸ ವರದಿಗಳು ಸೂಚಿಸುತ್ತಿವೆ.

ಇಂದು ಭಾರತ vs ಇಂಗ್ಲೆಂಡ್‌ 3ನೇ ಏಕದಿನ ಪಂದ್ಯ

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಹಾಗೂ ಕೊನೆ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಆರಂಭಿಕ 2 ಪಂದ್ಯಗಳ ಬಳಿಕ ಸರಣಿ 1-1 ಸಮಬಲಗೊಂಡಿದ್ದು, ಸರಣಿ ಗೆಲುವಿಗಾಗಿ ಉಭಯ ತಂಡಗಳು ಹೋರಾಡಲಿವೆ.

ಈ ಪಂದ್ಯದಲ್ಲಿ ಅಭಿಮಾನಿಗಳ ಚಿತ್ತ ರೋಹಿತ್‌ ಶರ್ಮಾ ಮೇಲಿರಲಿದೆ. ಬಿಸಿಸಿಐ ಸ್ಪಷ್ಟನೆ ಹೊರತಾಗಿಯೂ, ಅವರದ್ದು ಇದು ಕೊನೆ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪಂದ್ಯ ಮಹತ್ವ ಸೃಷ್ಟಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ