ಭಾರತದ ಕ್ರಿಕೆಟಿಗ ರಿಷಭ್ ಪಂತ್ 2024ರ ಲಾರೆಸ್ ಕ್ರೀಡಾ ಪ್ರಶಸ್ತಿಯ "ವರ್ಷದ ಶ್ರೇಷ್ಠ ಕಮ್‌ಬ್ಯಾಕ್" ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. 2022ರಲ್ಲಿ ಗಂಭೀರ ಅಪಘಾತಕ್ಕೀಡಾಗಿದ್ದ ಪಂತ್, ಚೇತರಿಸಿಕೊಂಡು 2024ರ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಈ ಹಿಂದೆ ಸಚಿನ್ ತೆಂಡೂಲ್ಕರ್ ಈ ಪ್ರಶಸ್ತಿ ಗೆದ್ದಿದ್ದರು. ಏಪ್ರಿಲ್ 21ರಂದು ಮ್ಯಾಡ್ರಿಡ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಸ್ತುತ ಪಂತ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿದ್ದಾರೆ. 

ನವದೆಹಲಿ: ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ, ಪ್ರತಿಷ್ಠಿತ ಲಾರೆಸ್‌ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ ಸ್ಥಾನ ಪಡೆದಿದ್ದಾರೆ. 2024ನೇ ಸಾಲಿನ ‘ವರ್ಷದ ಶ್ರೇಷ್ಠ ಕಮ್‌ಬ್ಯಾಕ್‌’ ಪ್ರಶಸ್ತಿ ವಿಭಾಗದಲ್ಲಿ ಪಂತ್‌ ಹೆಸರು ನಾಮ ನಿರ್ದೇಶನಗೊಂಡಿದೆ. 2022ರ ಡಿಸೆಂಬರ್‌ನಲ್ಲಿ ಪಂತ್‌ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

ಹಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಪಂತ್‌, ಆನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿ 2024ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಪ್ರಮುಖ ಪಾತ್ರವಹಿಸಿದ್ದರು. ಏಪ್ರಿಲ್ 21, 2025ರಂದು ಲಾರೆಸ್ ಸ್ಪೋರ್ಟ್ಸ್ ಅವಾರ್ಡ್‌ ಘೋಷಣೆಯಾಗಲಿದೆ. ಒಂದು ವೇಳೆ ರಿಷಭ್ ಪಂತ್‌ಗೆ ಪ್ರಶಸ್ತಿ ಒಲಿದರೆ, 2024ನೇ ಸಾಲಿನ ‘ವರ್ಷದ ಶ್ರೇಷ್ಠ ಕಮ್‌ಬ್ಯಾಕ್‌’ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.

Scroll to load tweet…

ಪಂತ್‌ ಜೊತೆ ಬ್ರೆಜಿಲ್‌ನ ಜಿಮ್ನಾಸ್ಟಿಕ್‌ ಪಟು ರೆಬೆಕಾ ಆ್ಯಂಡ್ರಾಡೆ, ಆಸ್ಟ್ರೇಲಿಯಾದ ಈಜುಪಟು ಆರಿಯಾರ್ನೆ ಟಿಟ್ಮಸ್‌, ಸ್ವಿಟ್ಜರ್‌ಲೆಂಡ್‌ನ ಸ್ಕೀ-ರೇಸರ್‌ ಲಾರಾ ಬೆಹ್ರಾಮಿ, ಅಮೆರಿಕದ ಈಜುಪಟು ಕಾಲಿಬ್‌ ಡ್ರೆಸ್ಸೆಲ್‌, ಸ್ಪೇನ್‌ನ ಮೋಟೋ ಜಿಪಿ ಚಾಲಕ ಮಾರ್ಕ್‌ ಮಾರ್ಕೆಝ್‌ ಸ್ಪರ್ಧೆಯಲ್ಲಿ ಇದ್ದಾರೆ. ಏ.21ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಪ್ರಶಸ್ತಿ ಘೋಷಣೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಚಿನ್ ಬಳಿಕ ನಾಮನಿರ್ದೇಶನಗೊಂಡ ಭಾರತೀಯ:

ಕ್ರಿಕೆಟ್ ದಂತಕಥೆಯಾಗಿ ಗುರುತಿಸಿಕೊಂಡಿರುವ ಸಚಿನ್ ತೆಂಡುಲ್ಕರ್ 2020ರ ಲಾರೆಸ್‌ ಪ್ರಶಸ್ತಿ ಜಯಿಸುವ ಮೂಲಕ ಗಮನ ಸೆಳೆದಿದ್ದರು. 2011ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ 2020ನೇ ಸಾಲಿನ ಲಾರೆಸ್‌ ಪ್ರಶಸ್ತಿ ಜಯಿಸಿದ್ದರು. ಇದೀಗ ಸಚಿನ್ ಬಳಿಕ ಲಾರೆಸ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಎರಡನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಂತ್ ಪಾತ್ರರಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡದ ಜತೆಗಿರುವ ರಿಷಭ್ ಪಂತ್:

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಸದ್ಯ ಐಸಿಇಸ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಜತೆಗಿದ್ದಾರೆ. ಆದರೆ ಗ್ರೂಪ್ ಹಂತದ ಮೂರು ಪಂದ್ಯಗಳಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇದೀಗ ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.