ಟಿ20 ವಿಶ್ವಕಪ್‌ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯಕ್ಕೂ ಮುನ್ನ, ಸ್ಟಾರ್ ಫಿನಿಶರ್ ರಿಂಕು ಸಿಂಗ್ ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ತವರಿಗೆ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಅವರ ಅನುಪಸ್ಥಿತಿಯು ತಂಡಕ್ಕೆ ಹಿನ್ನಡೆಯಾಗಿದೆ.

ಚೆನ್ನೈ: ಟಿ20 ವಿಶ್ವಕಪ್‌ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಫಿನಿಶರ್ ರಿಂಕು ಸಿಂಗ್, ಕುಟುಂಬದಲ್ಲಿ ಎದುರಾದ ತುರ್ತು ಪರಿಸ್ಥಿತಿಯಿಂದಾಗಿ ತವರಿಗೆ ವಾಪಸಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ 'ಮಾಡು ಇಲ್ಲವೇ ಮಡಿ' ಪಂದ್ಯಕ್ಕೂ ಸ್ವಲ್ಪ ಮುನ್ನವೇ ರಿಂಕು ತಂಡವನ್ನು ತೊರೆದಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರ ನಡೆಯಬೇಕಿದ್ದ ಭಾರತ-ಜಿಂಬಾಬ್ವೆ ಪಂದ್ಯದ ಅಭ್ಯಾಸದಲ್ಲಿ ರಿಂಕು ಸಿಂಗ್ ಭಾಗವಹಿಸಿರಲಿಲ್ಲ. ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಅವರ ತಂದೆ ಖಾನ್‌ಚಂದ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ನೋಡಲು ರಿಂಕು ತವರಿಗೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

Scroll to load tweet…

ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ರೆಡಿಯಾಗಿರುವ ಟೀಂ ಇಂಡಿಯಾ

ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲು ಕಂಡಿತ್ತು. ಹೀಗಾಗಿ, ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಹಂತದಲ್ಲಿ ಮತ್ತೊಂದು ಸೋಲು ಕಂಡರೆ, ಭಾರತ ವಿಶ್ವಕಪ್‌ನಿಂದಲೇ ಹೊರಬೀಳಲಿದೆ. ರಿಂಕು ಸಿಂಗ್ ಅನುಪಸ್ಥಿತಿಯಲ್ಲಿ, ಸಂಜು ಸ್ಯಾಮ್ಸನ್ ಪ್ಲೇಯಿಂಗ್ ಇಲೆವೆನ್‌ಗೆ ಮರಳುವ ಸಾಧ್ಯತೆ ಇದೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ತಮ್ಮ ಎಂದಿನ ಫಾರ್ಮ್‌ನಲ್ಲಿ ಇರಲಿಲ್ಲ. ಆಡಿದ ಐದು ಪಂದ್ಯಗಳಲ್ಲಿ ಅವರು ಕೇವಲ 24 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಕ್ಕಾಗಿ ಅವರು 29 ಎಸೆತಗಳನ್ನು ಎದುರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 188 ರನ್‌ಗಳ ಗುರಿ ಬೆನ್ನಟ್ಟುವಾಗ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ರಿಂಕು, ಕೇಶವ್ ಮಹಾರಾಜ್ ಅವರ ಬೌಲಿಂಗ್‌ನಲ್ಲಿ ಖಾತೆ ತೆರೆಯದೆ ಔಟಾಗಿದ್ದರು.

ಇನ್ನು ತಿಲಕ್ ವರ್ಮಾ ಕೂಡಾ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಲೇ ಬಂದಿದ್ದಾರೆ. ಹೀಗಾಗಿ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಭಾರತ ತಂಡದ ಅಡುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್ ಹಾಗೂ ತಿಲಕ್ ವರ್ಮಾ ಬದಲಿಗೆ ಸಂಜು ಸ್ಯಾಮ್ಸನ್ ಪ್ಲೇಯಿಂಗ್ ಇಲವೆನ್‌ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಇನ್ನೆರಡು ಪಂದ್ಯದಲ್ಲಿ ಗೆದ್ರೂ ಭಾರತ ಸೆಮಿಗೆ ಪ್ರವೇಶಿಸುವುದು ಖಚಿತವಿಲ್ಲ!

ನವದೆಹಲಿ: ಟಿ20 ವಿಶ್ವಕಪ್‌ನ ಸೂಪರ್‌-8 ಹಂತದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿರುವ ಭಾರತ ತನ್ನ ಸೆಮಿಫೈನಲ್‌ ಹಾದಿಯನ್ನು ಕಠಿಣಗೊಳಿಸಿದೆ. ನೆಟ್‌ ರನ್‌ರೇಟ್‌(-3.800) ಕೂಡಾ ಪಾತಾಳಕ್ಕೆ ಕುಸಿದಿರುವ ಕಾರಣ ಭಾರತ ಇನ್ನುಳಿದ 2 ಪಂದ್ಯ(ವಿಂಡೀಸ್‌, ಜಿಂಬಾಬ್ವೆ ವಿರುದ್ಧ) ಗೆದ್ದರೂ ಸೆಮಿಫೈನಲ್‌ ತಲುಪುವುದು ಖಚಿತವಿಲ್ಲ.

‘ಎ’ ಗುಂಪಿನಲ್ಲಿ 4 ತಂಡಗಳಿವೆ. ಇದರಲ್ಲಿ ಸೆಮಿಫೈನಲ್‌ಗೇರುವುದು ಅಗ್ರ-2 ತಂಡಗಳು. ಭಾರತ ಉಳಿದ 2 ಪಂದ್ಯ ಗೆದ್ದರೆ 4 ಅಂಕಗಳಾಗುತ್ತದೆ. ಅತ್ತ ದ.ಆಫ್ರಿಕಾ ತನ್ನ ಕೊನೆ 2 ಪಂದ್ಯಗಳಲ್ಲಿ ವಿಂಡೀಸ್‌ ಹಾಗೂ ಜಿಂಬಾಬ್ವೆಯನ್ನು ಸೋಲಿಸಿದರೆ, ಆಗ ದ.ಆಫ್ರಿಕಾ(6 ಅಂಕ), ಭಾರತ(4 ಅಂಕ) ಸುಲಭದಲ್ಲಿ ಸೆಮಿಫೈನಲ್‌ ತಲುಪಲಿವೆ. ಆದರೆ ದ.ಆಫ್ರಿಕಾ 1 ಪಂದ್ಯದಲ್ಲಿ ಸೋತರೂ ಭಾರತದ ಭವಿಷ್ಯ ನೆಟ್‌ ರನ್‌ರೇಟ್‌ನಲ್ಲಿ ನಿರ್ಧಾರವಾಗಲಿದೆ.

ಜಿಂಬಾಬ್ವೆ ವಿರುದ್ಧ ಗೆದ್ದಿದ್ದರಿಂದ ವೆಸ್ಟ್‌ಇಂಡೀಸ್‌ಗೆ 2 ಅಂಕ ಸಿಕ್ಕಿದೆ. ವಿಂಡೀಸ್‌ ಇನ್ನು ಭಾರತ ವಿರುದ್ಧ ಸೋತು, ದ.ಆಫ್ರಿಕಾ ವಿರುದ್ಧ ಗೆದ್ದರೆ ಲೆಕ್ಕಾಚಾರ ಉಲ್ಟಾ ಆಗಲಿದೆ. ಆಗ ಭಾರತ, ದ.ಆಫ್ರಿಕಾ, ವಿಂಡೀಸ್‌ ತಂಡಗಳ ಅಂಕ ತಲಾ 4 ಆಗಲಿದ್ದು, ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ತಂಡ ಸೆಮೀಸ್‌ ತಲುಪಲಿವೆ. ಈ ಲೆಕ್ಕಚಾರ ಭಾರತ 2ರಲ್ಲಿ ಗೆದ್ದರೆ ಮಾತ್ರ. 2ರ ಪೈಕಿ ಒಂದರಲ್ಲಿ ಸೋತರೂ ಭಾರತ ಹೊರಬೀಳುವುದು ಖಚಿತ.