'ಸಿಟಿಆರ್ ಮಸಾಲೆ ದೋಸೆ, ಬೆಂಗಳೂರು ಆಟೋ, ಅಣ್ಣಾವ್ರ ಹಾಡು..' ಮಿ.360 ಎಬಿಡಿ ಕನ್ನಡ ಪ್ರೇಮ!
ಎಬಿಡಿ.. ಎಬಿಡಿ.. ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಪಂದ್ಯದ ವೇಳೆ ಕೂಗನ್ನು ಬೆಂಗಳೂರು ಫ್ಯಾನ್ಸ್ಗಳು ಖಂಡಿತವಾಗಿ ಮಿಸ್ ಮಾಡಿಕೊಳ್ಳುತ್ತಾರೆ. ನಿಮಗೊಂದು ವಿಷಯ ಗೊತ್ತಾ, ಸ್ವತಃ ಎಬಿಡಿ ವಿಲಿಯರ್ಸ್ ಕೂಡ ಅಭಿಮಾನಿಗಳು 'ಎಬಿಡಿ..ಎಬಿಡಿ..' ಎಂದು ಕೂಗುವ ರೀತಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.
ಬೆಂಗಳೂರು (ಏ.19): ಕ್ರಿಕೆಟ್ ಎಂದರೆ ಕರ್ನಾಟದಲ್ಲಿ ಬೇರೆ ಪ್ಲೇಯರ್ಗಳಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೋ ಗೊತ್ತಿಲ್ಲ. ಆದರೆ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿಗೆ ಇರುವ ಅಭಿಮಾನದ ಮಟ್ಟವೇ ಬೇರೆ ರೀತಿಯದ್ದು. ಆರ್ಸಿಬಿಯಲ್ಲಿ ಈ ತ್ರಿವಳಿಗಳು ಆಡುವಾಗ ಇವರು ಕೊಟ್ಟ ಮನರಂಜನೆಯನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಸೌಮ್ಯ ಸ್ವಭಾವದ ಎಬಿ ಡಿವಿಲಿಯರ್ಸ್, ಮೈದಾನಕ್ಕೆ ಇಳಿದ ರಣಕಣಕ್ಕೆ ಇಳಿದವರಂತೆ ಮೈದಾನದ ಮೂಲೆಮೂಲೆಗೂ ಚೆಂಡನ್ನು ಬಾರಿಸುತ್ತಿದ್ದದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅದಕ್ಕಾಗಿ ಆರ್ಸಿಬಿ ಅಭಿಮಾನಿಗಳು ಅವರಿಗೆ ಕೊಟ್ಟ ಪ್ರೀತಿಯ ಹೆಸರು ಮಿ.360. ಇತ್ತೀಚೆಗೆ ಎಬಿಡಿ ಕ್ರಿಕೆಟ್ನಿಂದ ನಿವೃತ್ತಿಯಾದ ಆರ್ಸಿಬಿ ಅವರ ನಂ.17 ಜರ್ಸಿಯನ್ನು ನಿವೃತ್ತಿ ಮಾಡಿತ್ತು. ಡ್ಯಾನಿಷ್ ಸೇಠ್ ನಡೆಸಿಕೊಡುವ ಆರ್ಸಿಬಿ ಇನ್ಸೈಡರ್ ಶೋನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಆರ್ಸಿಬಿ ಮಾಜಿ ಬ್ಯಾಟ್ಸ್ ಮನ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಕರ್ನಾಟಕ, ಚಿನ್ನಸ್ವಾಮಿ ಹಾಗೂ ಬೆಂಗಳೂರಿನ ಕುರಿತಾಗಿ ತಮ್ಮ ಅಭಿಮಾನವನ್ನು ತೋರಿಸಿದರು. ಶೋನ ಕೊನೆಯಲ್ಲಿ ಡಾ.ರಾಜ್ಕುಮಾರ್ ಅಭಿನಯದ ಆಕಸ್ಮಿಕ ಚಿತ್ರದ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..' ಎನ್ನುವ ಹಾಡನ್ನೂ ಹಾಡಿದರು. ಈ ವಿಡಿಯೋ ಆರ್ಸಿಬಿ ಹ್ಯಾಂಡಲ್ನಲ್ಲಿ ಪ್ರಕಟವಾದ ಬೆನ್ನಲ್ಲಿಯೇ ಅಭಿಮಾನಿಗಳು, ಎಬಿಡಿಯಲ್ಲಿ ತಂಡದಲ್ಲಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಈ ಬಾರಿ ಎಬಿಡಿ ನಮಗೆ ಯಾವ ಹಾಡು ಹಾಡ್ತಾರೆ ಎಂದು ಕೇಳಿದ ಪ್ರಶ್ನೆಗೆ, 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಬದುಕಿದು ಜಟಕಾ ಬಂಡಿ, ಇದು ವಿಧಿಯೋಡಿಸುವಾ ಬಂಡಿ..' ಎಂದು ನಾಗ್ಸ್ ಜೊತೆಗೂಡಿ ಹಾಡಿದ್ದಾರೆ. ಈ ಹಾಡು ಯಾವ ಚಿತ್ರದ್ದು ಎನ್ನುವ ಪ್ರಶ್ನೆಗೆ, 'ಯಾರಿಗೆ ಗೊತ್ತಿಲ್ಲ. ಅಮೇಜಿಂಗ್ ಮೂವಿ ಆಕಸ್ಮಿಕ. ಡಾ.ರಾಜ್ ಕುಮಾರ್ ಅವರದ್ದು. ನನಗೆ ಬಹಳ ಇಷ್ಟ' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾಕಷ್ಟು ಸಮಯವನ್ನು ನೀವು ಕಳೆದಿದ್ದೀರಿ, ಹಾಗಾಗಿ ಬೆಂಗಳೂರು ಬಗ್ಗೆ ನಿಮಗೆ ಎಷ್ಟು ಗೊತ್ತು ಅನ್ನೋದರ ಬಗ್ಗೆಯೂ ಕುತೂಹಲವಿದೆ. ಬೆಂಗಳೂರಿನಲ್ಲಿ ನೀವು ಅತಿಯಾಗಿ ಇಷ್ಟ ಪಡುವ ವಿಚಾರ ಯಾವುದು ಎನ್ನುವ ಪ್ರಶ್ನೆಗೆ, 'ಇಲ್ಲಿ ಬಹಳ ಕೂಲ್ ಆಗಿರುವ ಬೆಳಗಿನ ಜಾವವನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಕಬ್ಬನ್ ಪಾರ್ಕ್ನಲ್ಲಿ ಲಾಂಗ್ ವಾಕ್ ಮಾಡೋದನ್ನು ಮಿಸ್ ಮಾಡಿಕೊಂಡಿದ್ದೇನೆ. ಕಬ್ಬನ್ ಪಾರ್ಕ್ ಬಹಳ ಸುಂದರವಾಗಿದೆ. ಅದರೊಂದಿಗೆ ಸಿಟಿಆರ್ನಲ್ಲಿ ಮಸಾಲೆ ದೋಸೆ ಬಹಳ ಇಷ್ಟ ನನಗೆ. ಅದನ್ನೂ ಕೂಡ ಮಿಸ್ ಮಾಡಿಕೊಂಡಿದ್ದೇನೆ. ಇನ್ನು ಮಲ್ಲೇಶ್ವರದ ಸಾಯಿರಾಮ್ ಚಾಟ್ಸ್ನಲ್ಲಿ ಮಸಾಲಪೂರಿ ತಿನ್ನೋದು ನನಗೆ ಇಷ್ಟ. ಅಲ್ಲಿ ಮಸಾಲಪೂರಿ ಬಹಳ ಚೆನ್ನಾಗಿರುತ್ತದೆ. ಅಲ್ಲಿನ ರಸ್ತೆಗಳ ಹೂಗಳ ಘಮ ಬಹಳ ಇಷ್ಟವಾಗುತ್ತದೆ. ಅದರೊಂದಿಗೆ ಜಯನಗರ ಕೂಲ್ ಜಾಯಿಂಟ್ನಲ್ಲಿ ಲೈಮ್ ಜ್ಯೂಸ್ ಕುಡಿಯೋದು ಬಹಳ ಇಷ್ಟ ಎಂದು ಬೆಂಗಳೂರಿನ ಬಗ್ಗೆ ಎಬಿಡಿ ಮಾತನಾಡಿದ್ದಾರೆ.
IPL 2023: ವಿರಾಟ್ ಕೊಹ್ಲಿ ಕೊಂಚ ಅಹಂಕಾರಿ ಎಂದುಕೊಂಡಿದ್ದೆ..! ಎಬಿಡಿ ಬಿಚ್ಚುಮಾತು ವೈರಲ್
ಬೆಂಗಳೂರಿನಲ್ಲಿ ಯಾವ ವ್ಯಕ್ತಿಗಳನ್ನು ನೀವು ಬಹಳವಾಗಿ ಮಿಸ್ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ, 'ಆಟೋಡ್ರೈವರ್ಗಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಚಿನ್ನಸ್ವಾಮಿ ಸ್ಡೇಡಿಯಂ ಸುತ್ತಮುತ್ತ ಹೋಗುವಾಗ ಆಟೋ ಡ್ರೈವರ್ಗಳು ಬಹಳ ನೆನಪಾಗ್ತಾರೆ. ಅವರಿಗೆ ಎಷ್ಟು ಎನರ್ಜಿ ಇದೆ. ಯಾವಾಗ ನೋಡಿದರೂ ಬಹಳ ಆತುರದಲ್ಲಿರುತ್ತಾರೆ. ನಾನೂ ಕೂಡ ಹಾಗೇ ಇರುತ್ತೇನೆ' ಎಂದು ಎಬಿಡಿ ಹೇಳಿದ್ದಾರೆ.
ಈ ಬಾರಿ IPL ಕಪ್ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್..! ಆರ್ಸಿಬಿ ಅಲ್ಲವೆಂದ ಎಬಿಡಿ
ಇನ್ನು ಕ್ರಿಕೆಟ್ ವಿಚಾರದಲ್ಲಿ ಮಾತನಾಡಿರುವ ಎಬಿಡಿ, ಹಾಗೇನಾದರೂ ಆರ್ಸಿಬಿ ತಂಡದ ನಂ.17 ಜರ್ಸಿಯನ್ನು ನೀವು ಯಾರಿಗಾದರೂ ನೀಡ್ತೀರಿ ಅಂದರೆ, ಅದು ಯಾರಿಗೆ ಎನ್ನುವ ಪ್ರಶ್ನೆಗೆ, ಮುಂಬೈ ಇಂಡಿಯನ್ಸ್ ತಂದ ಡವಾಲ್ಡ್ ಬ್ರೇವಿಸ್ ಹೆಸರನ್ನು ಎಬಿಡಿ ಹೇಳಿದರು. ಇನ್ನು ಆರ್ಸಿಬಿ ತಂಡದಲ್ಲಿ ರಜತ್ ಪಾಟೀದಾರ್ ಈ ಜರ್ಸಿಯನ್ನು ಹಾಕಿಕೊಳ್ಳಬಹುದು. ಆತ ಭವಿಷ್ಯದ ಸೂಪರ್ ಸ್ಟಾರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.