ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಕೊನೆಗೂ ನಿಟ್ಟುಸಿರು ಬಿಟ್ಟ ಆರೋಪಿ
ವಿರಾಟ್ ಕೊಹ್ಲಿ ಪುತ್ರಿಗೆ ಬೆದರಿಕೆಯೊಡ್ಡಿದ್ದ ಆರೋಪಿಗೆ ರಿಲೀಫ್
ಆರೋಪಿ ಮೇಲಿದ್ದ ಎಫ್ಐಆರ್, ಚಾರ್ಜ್ಶೀಟ್ ರದ್ದು
ಬಾಂಬೆ ಹೈಕೋರ್ಟ್ನಿಂದ ಮಹತ್ತರವಾದ ತೀರ್ಪು
ನವದೆಹಲಿ(ಏ.11): ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪುತ್ರಿ ವಮಿಕಾ ಮೇಲೆ ಅಸಭ್ಯವಾಗಿ ಅತ್ಯಾಚಾರದ ಬೆದರಿಕೆಯೊಡ್ಡಿದ ಆರೋಪಿಗೆ ಬಾಂಬೆ ಹೈಕೋರ್ಟ್ ರಿಲೀಫ್ ನೀಡಿದೆ. ಆರೋಪಿಯ ಮೇಲೆ ದಾಖಲಾಗಿದ್ದ ಚಾರ್ಜ್ಶೀಟ್ ಹಾಗೂ ಎಫ್ಐಆರ್ ಅನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ.
2021ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪಾಕಿಸ್ತಾನ ಎದುರು ಮುಗ್ಗರಿಸಿತ್ತು. ಇದರ ಬೆನ್ನಲ್ಲೇ ಆರೋಪಿಯು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪುತ್ರಿ ವಮಿಕಾ ಮೇಲೆ ಲೈಂಗಿಕ ಬೆದರಿಕೆ ಹಾಕಿದ್ದರು. ಈ ಸಂಬಂಧ ದಾಖಲಾಗಿದ್ದ ಎಫ್ಐಆರ್ ಹಾಗೂ ಚಾರ್ಜ್ಶೀಟ್ ಅನ್ನು ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿ ಗಡ್ಕರಿ ಹಾಗೂ ನ್ಯಾಯಮೂರ್ತಿ ಪಿ.ಡಿ. ನಾಯಕ್ ಅವರನ್ನೊಳಗೊಂಡ ನ್ಯಾಯಪೀಠವು ರದ್ದುಪಡಿಸಿದೆ.
ಆರೋಪಿಗೆ ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿಯೇ ಜಾಮೀನು ಮಂಜೂರಾಗಿದೆ. ಆರೋಪಿ ಪರ ಅಡ್ವೊಕೇಟ್ ಅಭಿಜೀತ್ ದೇಸಾಯಿ ಹಾಗೂ ಕರಣ್ ಗಜ್ರಾ ಕೋರ್ಟ್ನಲ್ಲಿ ಎಫ್ಐಆರ್ ಹಾಗೂ ಜಾರ್ಜ್ಶೀಟ್ ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ ಏನು..?:
2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸೋಲುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಮೇಲೆ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ 10 ತಿಂಗಳ ಮಗಳು ವಮಿಕಾ(Vamika) ಮೇಲೆ ರೇಪ್ ಬೆದರಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮುಂಬೈ ಪೂಲೀಸರು, ಅತ್ಯಾಚಾರ ಬೆದರಿಕೆ ಹಾಕಿದ ಕಿಡಿಗೇಡಿಯನ್ನು ಹೈದರಾಬಾದ್ನಲ್ಲಿ(Hyderabad) ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
IPL 2023 ಲಖನೌ ಎದುರು ರೋಚಕ ಪಂದ್ಯ ಸೋತ ಆರ್ಸಿಬಿ; ಅನುಷ್ಕಾ ಶರ್ಮಾ ರಿಯಾಕ್ಷನ್ ವೈರಲ್
23 ವರ್ಷದ ಹೈದರಾಬಾದ್ನ ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿ Arrest) ಎಂಬ ಕಿಡಿಗೇಡಿಯಿಂದ ಈ ಕೃತ್ಯ ನಡೆದಿತ್ತು. ಈತ ಟ್ವಿಟರ್ನಲ್ಲಿ ತನ್ನ ಹೆಸರನ್ನು ಬದಲಾಯಿಸಿದ್ದರು. ಉರ್ದುವಿನಲ್ಲಿ ಹೆಸರು ಬರೆದುಕೊಂಡಿರುವ ಈತ, ತಾನೊಬ್ಬ ಪಾಕಿಸ್ತಾನಿ ಎಂದು ಟ್ವಿಟರ್ನಲ್ಲಿ ಬಿಂಬಿಸಿಕೊಂಡಿದ್ದ. ಬಳಿಕ ಟೀಂ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವರ ವಿರುದ್ಧ ಸತತ ಟೀಕೆ, ನಿಂದನೆ ಮಾಡಿದ್ದ. ಇದೇ ವೇಳೆ ವಿರಾಟ್ ಕೊಹ್ಲಿ ಪುತ್ರಿ ಮೇಲೆ ರೇಪ್ ಬೆದರಿಕೆ ಕೂಡ ಹಾಕಿದ್ದ. ಆನಂತರ ಪೊಲೀಸರ ಅತಿಥಿಯಾಗಿದ್ದ.
ಬಂಧಿತ ಶ್ರೀನಿವಾಸ್ನನ್ನು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆದುಕೊಂಡು ಹೋಗಲಾಗಿತ್ತು. ಮೂಲತಃ ಸಾಫ್ಟ್ವೇರ್ ಎಂಜನಿಯರ್ ಆಗಿರುವ ಶ್ರಿನಿವಾಸ್, ಫುಡ್ ಡೆಲಿವರಿ ಆ್ಯಪ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿತ್ತು.