ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ, 3ನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜರು ಹಾಗೂ ಸಿನಿಮಾ ತಾರೆಯರು ಸೇರಿದಂತೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ 96 ರನ್‌ಗಳಿಂದ ಗೆದ್ದು 3ನೇ ಬಾರಿ ಐಸಿಸಿ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕ್ರಿಕೆಟ್‌ ದಿಗ್ಗಜರು, ಹಾಲಿ-ಮಾಜಿ ಕ್ರಿಕೆಟಿಗರು, ಸಿನಿಮಾ ತಾರೆಗಳು, ರಾಜಕೀಯ ನಾಯಕರು ಸೇರಿದಂತೆ ಹಲವರು ತಂಡದ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘ಚಾಂಪಿಯನ್ಸ್! ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ತಂಡದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಟೀಂ ಇಂಡಿಯಾ ಟೂರ್ನಿಯುದ್ದಕ್ಕೂ ಅತ್ಯುತ್ತಮ ಧೈರ್ಯ ಪ್ರದರ್ಶಿಸಿದೆ. ಈ ಗೆಲುವು ಪ್ರತಿಯೊಬ್ಬ ಭಾರತೀಯ ಸಂತಸ ಮತ್ತು ಹೆಮ್ಮೆ ಪಡುವಂತೆ ಮಾಡಿದೆ. ಅಭಿನಂದನೆಗಳು’ ಎಂದಿದ್ದಾರೆ.

Scroll to load tweet…

ಬುಮ್ರಾ, ಸಂಜು ಪ್ರದರ್ಶನ ಶ್ಲಾಘಿಸಿದ ರಾಹುಲ್ ಗಾಂಧಿ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, ವಿಶೇಷವಾಗಿ ಸಂಜು ಸ್ಯಾಮ್ಸನ್, ಬುಮ್ರಾ ಅವರನ್ನು ಶ್ಲಾಘಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ‘ವಿಶ್ವ ವಿಜೇತ ಭಾರತೀಯ ತಂಡಕ್ಕೆ ಅಭಿನಂದನೆಗಳು. ತವರು ಪ್ರೇಕ್ಷಕರ ಬೆಂಬಲ, ಆಟಗಾರರ ಶ್ರಮ ಮತ್ತು ಕೋಟ್ಯಂತರ ಭಾರತೀಯರ ಹಾರೈಕೆ ವಿಶ್ವಕಪ್ ಕಿರೀಟವಾಗಿ ನಮ್ಮವರ ಮುಡಿ ಸೇರಿದೆ. ಕ್ರಿಕೆಟ್‌ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಮತ್ತೆ ಮುಗಿಲೆತ್ತರದಲ್ಲಿ ರಾರಾಜಿಸುತ್ತಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Scroll to load tweet…

ವಿರಾಟ್ ಕೊಹ್ಲಿ ಮೆಚ್ಚುಗೆ:

ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಎಕ್ಸ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದು, ‘ಚಾಂಪಿಯನ್ಸ್‌. ಅಹಮದಾಬಾದ್‌ನಲ್ಲಿ ಭಾರತಕ್ಕೆ ಅದ್ಭುತ ಗೆಲುವು. ಟೂರ್ನಿಯುದ್ದಕ್ಕೂ ನಮ್ಮ ತಂಡದ ಸ್ಫೋಟಕ ಆಟಕ್ಕೆ ಸರಿಯಾಟಿ ಯಾರೂ ಇರಲಿಲ್ಲ. ಕಠಿಣ ಸಂದರ್ಭದಲ್ಲೂ ಅಮೋಘ ಆಟವಾಡಿ ವಿಶ್ವ ಚಾಂಪಿಯನ್‌ ಎನಿಸಿಕೊಂಡ ಭಾರತಕ್ಕೆ ಅಭಿನಂದನೆಗಳು. ಜೈ ಹಿಂದ್‌’ ಎಂದು ಬರೆದುಕೊಂಡಿದ್ದಾರೆ. ಸಚಿನ್‌ ತೆಂಡುಲ್ಕರ್‌ ಸೇರಿ ಹಲವು ಆಟಗಾರರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Scroll to load tweet…

ಉಳಿದಂತೆ ಬಾಲಿವುಡ್‌ ತಾರೆಗಳಾದ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಪ್ರಿಯಾಂಕಾ ಚೋಪ್ರಾ, ಅಲ್ಲು ಅರ್ಜುನ್‌, ಆಲಿಯಾ ಭಟ್‌, ಅನುಷ್ಕಾ ಶರ್ಮಾ, ರಶ್ಮಿಕಾ ಮಂದಣ್ಣ, ಅಜಯ್‌ ದೇವಗನ್‌, ವಿಕಿ ಕೌಶಲ್‌, ಶಾಹಿದ್‌ ಕಪೂರ್‌ ಸೇರಿ ಪ್ರಮುಖರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.