ಪ್ರಧಾನಿ ಮೋದಿ ಜತೆ ಭೋಜನಾಕೂಟದಲ್ಲಿ ಪಾಲ್ಗೊಂಡ ಕನ್ನಡದ ದಿಗ್ಗಜ ಕ್ರಿಕೆಟಿಗರು..!
ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ
ರಾಜಭವನದಲ್ಲಿ ತಂಗಿರುವ ಮೋದಿಯಿಂದ ರಾಜ್ಯದ ತಾರಾ ಕ್ರಿಕೆಟಿಗರ ಭೇಟಿ
ಬೆಂಗಳೂರು(ಫೆ.13): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ 14ನೇ ಆವೃತ್ತಿಯ 'ಏರೋ ಇಂಡಿಯಾ-2023' ವೈಮಾನಿಕ ಪ್ರದರ್ಶನವನ್ನು ಪ್ರದರ್ಶನವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಗೆ ಭಾನುವಾರ ಸಂಜೆ ಬಂದಿಳಿದಿದ್ದಾರೆ. ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಮೋದಿ ಸಿನಿಮಾ, ಉಧ್ಯಮ ಹಾಗೂ ಕ್ರೀಡಾಕ್ಷೇತ್ರದ ಸಾಧಕರ ಜತೆ ಮಾತುಕತೆ ನಡೆಸಿ, ಭೋಜನ ನಡೆಸಿದ್ದು, ಕೆಲವು ಫೋಟೋಗಳು ವೈರಲ್ ಆಗಿವೆ.
ಹೌದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಗೂ ಅವರ ದಂಪತಿ, ಮಾಜಿ ವೇಗಿಗಳಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಹಾಗೂ ಪ್ರತಿಭಾನ್ವಿಯ ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಕೂಡಾ ಪ್ರಧಾನಿ ನರೇಂದ್ರ ಮೋದಿ ಜತೆ ರಾಜಭವನದಲ್ಲಿ ಸಮಾಲೋಚನೆ ನಡೆಸಿದರು.
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, 'ನಿನ್ನೆ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ತುಂಬಾ ಗೌರವದ ವಿಚಾರವಾಗಿದೆ. ಬೆಂಗಳೂರಿನಲ್ಲಿ ನನ್ನ ಸಹಕ್ರಿಕೆಟಿಗರೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಚಿರಕಾಲ ನೆನಪಿನಲ್ಲಿ ಉಳಿಯಲಿದೆ. ಧನ್ಯವಾದಗಳು ಎಂದು ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಹಾಗೂ ಪ್ರಧಾನಿ ಮೋದಿ ಜತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸುಮಾರು 20 ನಿಮಿಷಗಳ ಕಾಲ ನಡೆದ ಭೋಜನದ ಜತೆಗಿನ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ಭಾರತ ಸರ್ಕಾರವು ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳು ಹೇಗೆ ಪ್ರೋತ್ಸಾಹಿಸುತ್ತಿದೆ ಎನ್ನುವುದರ ಕುರಿತಂತೆ ಕ್ರಿಕೆಟಿಗರ ಬಳಿ ಮಾಹಿತಿ ಪಡೆದುಕೊಂಡರು.
ಇನ್ನು ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿ, " ಬೆಂಗಳೂರಿನಲ್ಲಿನ ರಾಜಭವನದಲ್ಲಿ ನಿನ್ನೆ ನಮ್ಮ ಸಹ ಕ್ರಿಕೆಟಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಸಂತೋಷವಾಯಿತು. ಅವರು ಕ್ರೀಡಾ ಮೂಲಭೂತ ಸೌಕರ್ಯ, ಒಲಿಂಪಿಕ್ಸ್ ಹಾಗೂ ಕ್ರೀಡಾ ಸಂಸ್ಕೃತಿಯ ಬಗ್ಗೆ ಅವರು ಮಾತುಕತೆ ನಡೆಸಿದರು ಎಂದು ವೆಂಕಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.