ಪಾಕ್ ಹೊಗಳಿ ಭಾರತಕ್ಕೆ ಟಾಂಗ್ ಕೊಟ್ಟ ಆಸೀಸ್ ಬ್ಯಾಟ್ಸ್ಮನ್ ಉಸ್ಮಾನ್ ಖವಾಜ..!
* ಪಾಕ್ ಪ್ರವಾಸದಿಂದ ಹಿಂದೆ ಸರಿದ ಬಗ್ಗೆ ಆಸೀಸ್ ಬ್ಯಾಟ್ಸ್ಮನ್ ಪ್ರತಿಕ್ರಿಯೆ
* ಭಾರತಕ್ಕೆ ಹೋಗುವುದಾದರೆ ಯಾರೂ ಇಲ್ಲ ಎನ್ನಲ್ಲ ಎಂದು ವ್ಯಂಗ್ಯವಾಡಿದ ಖವಾಜ
* ವಿದೇಶಿ ಆಟಗಾರರು ಪಾಕ್ ಪ್ರವಾಸಕ್ಕೆ ಹಿಂದೇಟು ಹಾಕುತ್ತಿರುವುದು ವಿಪರ್ಯಾಸ
ಕ್ಯಾನ್ಬೆರ್ರಾ(ಸೆ.25): ಪಾಕಿಸ್ತಾನ(Pakistan) ವಿರುದ್ಧ ಸರಣಿ ರದ್ದುಗೊಳಿಸಿರುವ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ಮೂಲದ ಆಸ್ಪ್ರೇಲಿಯಾ ಕ್ರಿಕೆಟಿಗ ಉಸ್ಮಾನ್ ಖವಾಜ(Usman Khawaja), ‘ಭಾರತಕ್ಕೆ ಹೋಗುವುದಾದರೆ ಯಾರೂ ಇಲ್ಲ ಎನ್ನಲ್ಲ’ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.
‘ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಹೇಳುವುದು ಆಟಗಾರರು, ಆಯೋಜಕರಿಗೆ ತುಂಬಾ ಸುಲಭ. ಯಾಕೆಂದರೆ ಅದು ಪಾಕಿಸ್ತಾನ. ಬಾಂಗ್ಲಾದೇಶದ ವಿಚಾರದಲ್ಲೂ ಇದು ಅನ್ವಯಿಸುತ್ತದೆ. ಆದರೆ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾದರೆ ಅವರಾರಯರೂ ಭಾರತಕ್ಕೆ ಹೋಗಲ್ಲ ಎಂದ ಹೇಳುವುದಿಲ್ಲ. ಇಲ್ಲಿ ಹಣ ಮಾತಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಪಾಕ್ನಲ್ಲಿ ಕ್ರಿಕೆಟ್ ಸುರಕ್ಷಿತವಾಗಿದೆ ಎಂದು ಅವರು ನಿರೂಪಿಸುತ್ತಲೇ ಬರುತ್ತಿದ್ದಾರೆ. ಆದರೂ ಯಾಕೆ ಅಲ್ಲಿಂದ ಹಿಂದಿರುಗಬೇಕೆಂಬುದಕ್ಕೆ ಕಾರಣವೇ ಇಲ್ಲ’ ಎಂದಿದ್ದಾರೆ.
Pak vs NZ ಕಿವೀಸ್ ಸರಣಿ ರದ್ದಾಗಲು ಭಾರತ ಕಾರಣ: ಪಾಕ್ ಹೊಸ ಕ್ಯಾತೆ
ಪಾಕಿಸ್ತಾನದಲ್ಲಿ ಆಟಗಾರರಿಗೆ ಬಿಗಿ ಭದ್ರತೆ ಹೀಗಿದ್ದೂ ವಿದೇಶಿ ಆಟಗಾರರು ಪಾಕ್ ಪ್ರವಾಸಕ್ಕೆ ಹಿಂದೇಟು ಹಾಕುತ್ತಿರುವುದು ವಿಪರ್ಯಾಸವೆಂದು ಉಸ್ಮಾನ್ ಖವಾಜ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರವಷ್ಟೇ ಸೀಮಿತ ಓವರ್ಗಳ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದಿದ್ದ ನ್ಯೂಜಿಲೆಂಡ್ ತಂಡವು(New Zealand Cricket Team) ಕೊನೆಯ ಕ್ಷಣದಲ್ಲಿ ಮೈದಾನಕ್ಕಿಳಿಯಲು ಹಿಂದೆ ಸರಿದಿತ್ತು. ಸೀಮಿತ ಓವರ್ಗಳ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಕಿವೀಸ್ ತಂಡ ಭದ್ರತೆಯ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಹಿಳಾ ಹಾಗೂ ಪುರುಷ ತಂಡಗಳು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದೆ.
ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಮೀಜ್ ರಾಜಾ(Ramiz Raja) ತಮ್ಮ ಬೇಸರ ಹೊರಹಾಕಿದ್ದರು. ಮುಂಬರುವ ಟಿ20 ವಿಶ್ವಕಪ್() ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿ ತಕ್ಕ ಉತ್ತರ ಕೊಡಲಿದ್ದೇವೆ ಎಂದು ಹೇಳಿದ್ದಾರೆ. ಇದುವರೆಗೆ ಭಾರತ ಮಾತ್ರ ನಮಗೆ ವೈರಿಯಾಗಿತ್ತು. ಇನ್ನು ಮುಂದೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡ ಕೂಡಾ ನಮ್ಮ ವೈರಿ ಎಂದಿದ್ದರು.
ಇನ್ನು ಪಾಕಿಸ್ತಾನದಲ್ಲಿ ಸರಣಿ ರದ್ದಾಗಲು ಭಾರತವೇ ಕಾರಣ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಆರೋಪಿಸಿದ್ದಾರೆ