ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಪ್ರಸಿದ್ಧ್ ಕೃಷ್ಣ, ಕೃನಾಲ್ ಪಾಂಡ್ಯ ಡೆಬ್ಯೂ
ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕೃನಾಲ್ ಪಾಂಡ್ಯ ಹಾಗೂ ಪ್ರಸಿದ್ದ್ ಕೃಷ್ಣ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ವೇಳೆ ಭಾವನಾತ್ಮಕ ಸನ್ನೀವೇಷಕ್ಕೆ ಈ ಕ್ಷಣ ಸಾಕ್ಷಿಯಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪುಣೆ(ಮಾ.23): ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಕಾದಾಡಿದ ಬಳಿಕ ಇದೀಗ ಏಕದಿನ ಸರಣಿಯಾಡಲು ಕಣಕ್ಕಿಳಿದಿವೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆಗಿಟ್ಟಿಸಿಕೊಂಡಿತ್ತು. ಇದಾದ ಬಳಿಕ 5 ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಲ್ಲಿ ಜಯಿಸಿ ಮುಂಬರುವ ಟಿ20 ವಿಶ್ವಕಪ್ಗೆ ಭರ್ಜರಿ ತಯಾರಿ ನಡೆಸಿತ್ತು.
ಇದೀಗ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಕರ್ನಾಟಕದ ವೇಗದ ಅಸ್ತ್ರ ಪ್ರಸಿದ್ಧ್ ಕೃಷ್ಣ ಹಾಗೂ ಬರೋಡಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಪ್ರಸಿದ್ಧ್ ಕೃಷ್ಣ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ತೊಟ್ಟರೆ, ಕೃನಾಲ್ ಈಗಾಗಲೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದು, ಮೊದಲ ಬಾರಿಗೆ ಏಕದಿನ ಪಂದ್ಯವನ್ನಾಡುತ್ತಿದ್ದಾರೆ. ಇದೀಗ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಮೂಲಕ ಈ ಇಬ್ಬರು ಆಟಗಾರರು ಸ್ಮರಣೀಯವಾಗಿಸಿಕೊಂಡರು.
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ; ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ, ಕೃನಾಲ್
ಇತ್ತೀಚೆಗಷ್ಟೇ ಮುಕ್ತಾಯವಾದ 2020-21ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಈ ಇಬ್ಬರು ಆಟಗಾರರು ಟೀಂ ಇಂಡಿಯಾ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 7 ಪಂದ್ಯಗಳನ್ನಾಡಿ 14 ವಿಕೆಟ್ ಕಬಳಿಸಿದ್ದರೆ, ಕೃನಾಲ್ ಪಾಂಡ್ಯ ಬರೋಡ ಪರ ಕೇವಲ 5 ಇನಿಂಗ್ಸ್ಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಸಹಿತ 388 ರನ್ ಬಾರಿಸಿದ್ದರು.
2021ರ ಜನವರಿಯಲ್ಲಿ ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ತಂದೆ ಕೊನೆಯುಸಿರೆಳೆದಿದ್ದರು. ಹಾರ್ದಿಕ್ ಪಾಂಡ್ಯರಿಂದ ಏಕದಿನ ಕ್ರಿಕೆಟ್ ಕ್ಯಾಪ್ ಪಡೆದ ಕೃನಾಲ್ ಪಾಂಡ್ಯ ಒಂದು ಕ್ಷಣ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು. ಕೃನಾಲ್ ಹಾಗೂ ಪ್ರಸಿದ್ಧ್ ಪಾದಾರ್ಪಣೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.