ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ದಕ್ಷಿಣ ಆಫ್ರಿಕಾದ ತಂತ್ರಗಾರಿಕೆಯ ವೈಫಲ್ಯವೇ ಕಾರಣ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ. ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತಿದ್ದರೆ, ಭಾರತ ತಂಡ ಟೂರ್ನಿಯಿಂದ ಹೊರಬೀಳುತ್ತಿತ್ತು ಎಂದು ವಾನ್ ಹೇಳಿದ್ದಾರೆ

ಲಂಡನ್: ಟಿ20 ವಿಶ್ವಕಪ್‌ನಲ್ಲಿ ಭಾರತ ಕಪ್ ಗೆದ್ದಿದ್ದು ದಕ್ಷಿಣ ಆಫ್ರಿಕಾ ಮಾಡಿದ ದಡ್ಡತನದಿಂದ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೊಸ ವಾದ ಮುಂದಿಟ್ಟಿದ್ದಾರೆ. ಟೂರ್ನಿಯಲ್ಲೇ ಬಲಿಷ್ಠ ತಂಡವಾಗಿದ್ದ ಭಾರತವನ್ನು ಮೊದಲೇ ಮನೆಗೆ ಕಳುಹಿಸಲು ಸಿಕ್ಕಿದ್ದ ಸುವರ್ಣಾವಕಾಶವನ್ನು ದಕ್ಷಿಣ ಆಫ್ರಿಕಾ ಕೈಚೆಲ್ಲಿತು ಎಂದು ವಾನ್ ಟೀಕಿಸಿದ್ದಾರೆ. ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತಿದ್ದರೆ, ಭಾರತ ಸೆಮಿಫೈನಲ್ ನೋಡದೆ ಹೊರನಡೆಯುತ್ತಿತ್ತು ಎಂದು ವಾನ್ ಹೇಳಿದ್ದಾರೆ. 'ಸ್ಟಿಕ್ ಟು ಕ್ರಿಕೆಟ್' ಪಾಡ್‌ಕಾಸ್ಟ್‌ನಲ್ಲಿ ವಾನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ಇಂಗ್ಲೆಂಡ್ ಮಾಜಿ ನಾಯಕ ವಾನ್

"ಈ ಟೂರ್ನಿಯಲ್ಲೇ ಅತ್ಯಂತ ದಡ್ಡ ತಂಡ ಯಾವುದು ಅಂತ ಕೇಳಿದ್ರೆ, ನಾನು ದಕ್ಷಿಣ ಆಫ್ರಿಕಾ ಅಂತ ಹೇಳ್ತೀನಿ. ಸೂಪರ್ 8ರಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದರೆ, ಭಾರತ ಟೂರ್ನಿಯಿಂದ ಹೊರಬೀಳುತ್ತಿತ್ತು. ಭಾರತದಂತಹ ಬಲಿಷ್ಠ ತಂಡವನ್ನು ತಡೆಯಲು ಇದ್ದ ಒಂದೇ ದಾರಿ ಅದಾಗಿತ್ತು. ಕಪ್ ಗೆಲ್ಲಬೇಕೆಂದರೆ, ಬುದ್ಧಿವಂತರು ಮೊದಲು ಬಲಿಷ್ಠ ತಂಡವನ್ನು ಟೂರ್ನಿಯಿಂದ ಹೊರಹಾಕುತ್ತಾರೆ," ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

ಸೂಪರ್ 8 ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಹೀಗಾಗಿ, ಭಾರತಕ್ಕೆ ಸೆಮಿಫೈನಲ್ ತಲುಪಲು ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ತಂಡವನ್ನು ಸೋಲಿಸಿದ್ದರಿಂದ ಭಾರತದ ಹಾದಿ ಸುಗಮವಾಯಿತು. ಬಳಿಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತವು ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಭಾರತವನ್ನು ಹೊರಹಾಕಲು ಸಿಕ್ಕಿದ್ದ ಆ ಅದ್ಭುತ ಅವಕಾಶವನ್ನು ದಕ್ಷಿಣ ಆಫ್ರಿಕಾ ಹಾಳುಮಾಡಿಕೊಂಡಿತು. ಇದೇ ಕಾರಣಕ್ಕೆ ಭಾರತ ತವರಿನಲ್ಲಿ ಸತತ ಎರಡನೇ ಬಾರಿಗೆ ಕಪ್ ಗೆದ್ದು ಇತಿಹಾಸ ಬರೆಯಿತು ಅಂತ ವಾನ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ವಿಂಡೀಸ್ ಎದುರು ಸೋತಿದ್ದರೇ?

ಒಂದು ವೇಳೆ ಸೂಪರ್-8 ಹಂತದಲ್ಲಿ ವೆಸ್ಟ್ ಇಂಡೀಸ್ ಎದುರು ದಕ್ಷಿಣ ಆಫ್ರಿಕಾ ತಂಡವು ಸಣ್ಣ ಅಂತರದಲ್ಲಿ ಸೋತಿದ್ದರೇ, ಆಗ ಭಾರತ ತಂಡವು ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ಎದುರು ಗೆದ್ದರೂ ಸೆಮೀಸ್‌ಗೇರಲು ಸಾಧ್ಯವಾಗುತ್ತಿರಲಿಲ್ಲ. ಈ ಅವಕಾಶ ಬಳಸಿಕೊಳ್ಳಲು ಹರಿಣಗಳ ಪಡೆ ವಿಫಲವಾಯಿತು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಭಾರತ, ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿತ್ತು. ಮತ್ತೊಂದೆಡೆ, ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೂ ಒಂದೂ ಪಂದ್ಯ ಸೋಲದ ದಕ್ಷಿಣ ಆಫ್ರಿಕಾ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಹೊರಬಿದ್ದಿತ್ತು. ಟೂರ್ನಿಯಲ್ಲಿ ಭಾರತದ ವಿರುದ್ಧ ಒಂದು ಗೆಲುವು ಸಾಧಿಸಿದ್ದರೂ, ಕಪ್ ಗೆಲ್ಲಲು ಆಗದೇ ಇದ್ದದ್ದು ದಕ್ಷಿಣ ಆಫ್ರಿಕಾದ ತಂತ್ರಗಾರಿಕೆಯ ವೈಫಲ್ಯ ಎಂದು ವಾನ್ ವಿಶ್ಲೇಷಿಸಿದ್ದಾರೆ.

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲೂ ದಕ್ಷಿಣ ಆಫ್ರಿಕಾ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಕೊನೆಯ ಓವರ್‌ನಲ್ಲಿ ವಿರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನೊಂದೆಡೆ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಬಲಿಷ್ಠ ತಂಡಗಳನ್ನೆಲ್ಲಾ ಮಣಿಸಿ ಅನಾಯಾಸವಾಗಿಯೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಕೊನೆಗೊಳಿಸಿತು.