ಟೀಂ ಇಂಡಿಯಾ ಪರ ರಾಂಚಿ ಟೆಸ್ಟ್ ಮೂಲಕ ಪಾದಾರ್ಪಣೆ ಮಾಡಿದ ಆಕಾಶ್ ದೀಪ್, ಇಂಗ್ಲೆಂಡ್ ಅಗ್ರಕ್ರಮಾಂಕದ ಮೂವರು ಬಲಾಢ್ಯ ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಆಕಾಶ್ ದೀಪ್ 19 ಓವರ್ ಬೌಲಿಂಗ್ ಮಾಡಿ ಕೇವಲ 83 ರನ್ ನೀಡಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. 

ರಾಂಚಿ(ಫೆ.24): ತಂದೆಯ ವಿರೋಧ, ಕುಟುಂಬದ ಆರ್ಥಿಕ ಸಂಕಷ್ಟ, ನೆರೆಹೊರೆಯವರ ತೆಗಳಿಕೆಯ ಮಾತುಗಳನ್ನೆಲ್ಲಾ ಎದುರಿಸಿ ನಿಂತ ಬಿಹಾರದ ರೋಹ್ಟಸ್‌ ಜಿಲ್ಲೆಯ ಬಡ್ಡಿ ಗ್ರಾಮದ ಆಕಾಶ್‌ ದೀಪ್‌, ಸದ್ಯ ಭಾರತದ ಪರ ಆಡುವ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಆಕಾಶ್‌, ತಮ್ಮ ಬದುಕಿನುದ್ದಕ್ಕೂ ಹಲವು ಸಂಕಷ್ಟಗಳನ್ನು ಎದುರಿದ್ದಾರೆ. ಆಕಾಶ್‌ರ ತಂದೆಗೆ ಆಕಾಶ್‌ನನ್ನು ಸರ್ಕಾರಿ ಅಧಿಕಾರಿಯಾಗಿ ನೋಡಬೇಕೆಂಬ ಆಸೆ. ಆದರೆ ಆಕಾಶ್‌ಗೆ ಕ್ರಿಕೆಟ್‌ನಲ್ಲಿ ಸಾಧನೆ ಮಾಡುವ ಹಂಬಲ. ಇದಕ್ಕೆ ಬೆಂಬಲವಾಗಿ ನಿಂತಿದ್ದು ಆಕಾಶ್‌ರ ಅಮ್ಮ. ತಂದೆಯ ವಿರೋಧದ ನಡುವೆಯೂ ಕ್ರಿಕೆಟ್‌ ಆಡಲು ಶುರು ಮಾಡಿದ ಆಕಾಶ್‌ಗೆ ಆರಂಭದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಾರೆ.

ಆಕಾಶ್ ದೀಪ್ 2010ರಲ್ಲಿ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಕೆಲಸ ಹುಡುಕಿಕೊಂಡು ಹೋಗಿದ್ದರು. ಕೆಲಸ ಮಾಡುತ್ತಲೇ ಸಮಯ ಸಿಕ್ಕಾಗಲೆಲ್ಲಾ ಕ್ರಿಕೆಟ್‌ ಆಡಿ ತಮ್ಮ ಕನಸಿನ ಬೆನ್ನು ಹತ್ತುತ್ತಾರೆ. ಆದರೆ 2015ರಲ್ಲಿ ಕೆಲವೇ ತಿಂಗಳ ಅಂತರದಲ್ಲಿ ತಂದೆ ಹಾಗೂ ಅಣ್ಣನನ್ನು ಕಳೆದುಕೊಂಡ ಆಕಾಶ್‌, ಇಡೀ ಕುಟುಂಬದ ಹೊಣೆ ಹೊರುತ್ತಾರೆ. ಇದಕ್ಕಾಗಿ 3 ವರ್ಷ ಕ್ರಿಕೆಟ್‌ ತೊರೆಯಬೇಕಾಗುತ್ತದೆ. ಆದರೆ ಕ್ರಿಕೆಟ್‌ ಆಸೆ ಬಿಡದ ಅವರು ಮತ್ತೆ ದುರ್ಗಾಪುರದ ಸ್ಥಳೀಯ ಕ್ಲಬ್‌ ಪರ ಆಡಿ ಮಿಂಚುತ್ತಾರೆ. ಬಳಿಕ ಬೆಂಗಾಳ್‌ ಅಂಡರ್‌-23 ಆಡಿದ ಅವರು, ರಣಜಿ ತಂಡಕ್ಕೂ ಸೇರ್ಪಡೆಗೊಳ್ಳುತ್ತಾರೆ. 2022ರಲ್ಲಿ ಐಪಿಎಲ್‌ನ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆದ ಅವರು ಈಗ ಭಾರತ ತಂಡದ ಪರ ಆಡುವ ಅವಕಾಶ ಪಡೆದಿದ್ದಾರೆ.

Ranchi Test: ಜಡ್ಡುಗೆ 4 ವಿಕೆಟ್‌, ಇಂಗ್ಲೆಂಡ್ ಆಲೌಟ್ @353

Scroll to load tweet…

ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ, ಮೊದಲ ಟೆಸ್ಟ್‌ನಲ್ಲೇ ಪ್ರಮುಖ ಮೂರು ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್, "ಟೆಸ್ಟ್ ಕ್ಯಾಪ್ ಪಡೆದುಕೊಂಡಿದ್ದು, ಒಂದು ರೀತಿ ನನಗೆ ಭಾವನಾತ್ಮಕ ಕ್ಷಣ. ಒಂದು ವರ್ಷದಲ್ಲೇ ನಾನು ನನ್ನ ತಂದೆ ಹಾಗೂ ಸಹೋದರನನ್ನು ಕಳೆದುಕೊಂಡೆ. ನನ ಕ್ರಿಕೆಟ್ ಪಯಣ ಸಾಕಷ್ಟು ಕಠಿಣವಾಗಿತ್ತು. ನನ್ನ ಇಲ್ಲಿಯವರೆಗಿನ ಪಯಣದ ಹಿಂದೆ ನನ್ನ ಕುಟುಂಬದ ಪಾತ್ರ ದೊಡ್ಡದಿದೆ" ಎಂದು ಹೇಳಿದ್ದಾರೆ.

Scroll to load tweet…

"ಬಿಹಾರದಲ್ಲಿ ಕ್ರಿಕೆಟ್ ಆಡುವುದೇ ಒಂದು ರೀತಿ ಅಪರಾಧ ಎನ್ನುವಂತ ವಾತಾವರಣವಿದೆ. ನನ್ನ ಸ್ನೇಹಿತರ ಪೋಷಕರು ತಮ್ಮ ಮಕ್ಕಳಿಗೆ ಆಕಾಶ್‌ ಜತೆ ಸೇರಬೇಡ ಎಂದೆಲ್ಲ ಎಚ್ಚರಿಕೆ ನೀಡಿದ್ದೂ ಇದೆ. ಯಾಕೆಂದರೆ ನಾನು ಓದಿಗಿಂತ ಹೆಚ್ಚಾಗಿ ಕ್ರಿಕೆಟ್ ಕಡೆ ಗಮನ ನೀಡುತ್ತೇನೆ ಎಂದು ಸ್ನೇಹಿತರ ಪೋಷಕರ ಅಭಿಪ್ರಾಯವಾಗಿತ್ತು. ಈ ಕಾರಣಕ್ಕಾಗಿಯೇ ನಾನು ಗುಟ್ಟಾಗಿ ಕ್ರಿಕೆಟ್ ಆಡುತ್ತಿದ್ದೆ" ಎಂದು ಆಕಾಶ್ ದೀಪ್ ಹೇಳಿದ್ದಾರೆ.

Ranchi Test: ಹಳಿ ತಪ್ಪಿದ ಇಂಗ್ಲೆಂಡ್‌ಗೆ ಜೋ ರೂಟ್‌ ಆಸರೆ

ಟೀಂ ಇಂಡಿಯಾ ಪರ ರಾಂಚಿ ಟೆಸ್ಟ್ ಮೂಲಕ ಪಾದಾರ್ಪಣೆ ಮಾಡಿದ ಆಕಾಶ್ ದೀಪ್, ಇಂಗ್ಲೆಂಡ್ ಅಗ್ರಕ್ರಮಾಂಕದ ಮೂವರು ಬಲಾಢ್ಯ ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಆಕಾಶ್ ದೀಪ್ 19 ಓವರ್ ಬೌಲಿಂಗ್ ಮಾಡಿ ಕೇವಲ 83 ರನ್ ನೀಡಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.