ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್‌ನ ಮುಂದುವರಿದ ಭಾಗದಂತೆ ಬ್ಯಾಟಿಂಗ್‌ ಮಾಡಿದ ಆಲ್ರೌಂಡರ್ ಸುನೀಲ್‌ ನಾರಾಯಣ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ಅನ್ನು ಚೆಂಡಾಡಿ ಕೇವಲ 39 ಎಸೆತಗಳಲ್ಲಿ 89 ರನ್‌ ಸಿಡಿಸಿದ್ದಾರೆ. ಅದರೊಂದಿಗೆ ಕೆಕೆಆರ್‌ ತಂಡ ಐಪಿಎಲ್‌ನಲ್ಲಿ 2ನೇ ಗರಿಷ್ಠ ರನ್‌ ದಾಖಲೆ ಮಾಡಿದೆ.

ವಿಶಾಖಪಟ್ಟಣ (ಏ.3): ಅತಿರಥ ಬ್ಯಾಟ್ಸ್‌ಮನ್‌ಗಳು ಟಿ20ಯಲ್ಲಿ ಬೆನ್ನುಬೆನ್ನಿಗೆ ಸಿಕ್ಸರ್‌ ಬಾರಿಸಲು ಹೆದರುವಾಗ, ಟೀಮ್‌ ಇಂಡಿಯಾದ ಅಗ್ರ ಬೌಲರ್‌ ಇಶಾಂತ್‌ ಶರ್ಮಗೆ ಸುನೀಲ್‌ ನಾರಾಯಣ್‌ ಒಂದೇ ಓವರ್‌ನಲ್ಲಿ 26 ರನ್‌ ಚಚ್ಚಿದ ಸುನೀಲ್‌ ನಾರಾಯಣ್‌ ಕೆಕೆಆರ್‌ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾಗಿದ್ದಾರೆ. ಸುನೀಲ್‌ ನಾರಾಯಣ್‌ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಹಾಗೂ ಸಿಕ್ಸರ್‌ಗಳಿದ್ದ 89 ರನ್‌ ಸಿಡಿಸಿದ್ದರಿಂದ ಕೆಕೆಆರ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 7 ವಿಕೆಟ್‌ಗೆ 272 ರನ್‌ ಪೇರಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೆಕೆಆರ್‌ ತಂಡ ಪಂದ್ಯದ ಮೊದಲ ಎಸೆತದಿಂದಲೇ ಡೆಲ್ಲಿಕ್ಯಾಪಿಟಲ್ಸ್‌ ಬೌಲಿಂಗ್‌ಅನ್ನು ದಂಡಿಸಲು ಆರಂಭ ಮಾಡಿತ್ತು. 19ನೇ ಓವರ್‌ ಮುಕ್ತಾಯದ ವೇಳೆ 5 ವಿಕೆಟ್‌ಗೆ 264 ರನ್‌ ಪೇರಿಸಿದ್ದ ಕೆಕೆಆರ್‌ ತಂಡಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ 277 ರನ್‌ಗಳನ್ನು ಮುರಿಯುವ ಎಲ್ಲಾ ಅವಕಾಶಗಳಿದ್ದವು. ಆದರೆ, ಕೊನೇ ಓವರ್‌ನಲ್ಲಿ ಬಿಗಿ ದಾಳಿ ನಡೆಸಿದ ಇಶಾಂತ್‌ ಶರ್ಮ, ಸ್ಫೋಟಕ ಆಟಗಾರ ಆಂಡ್ರೆ ರಸೆಲ್‌ ವಿಕೆಟ್‌ ಉರುಳಿಸಿ ಕೇವಲ 8 ರನ್‌ ನೀಡಿದ್ದರಿಂದ ಕೆಕೆಆರ್‌ ಐಪಿಎಲ್‌ನ 2ನೇ ಗರಿಷ್ಠ ರನ್‌ಗೆ ತೃಪ್ತಿಪಡುವಂತಾಯಿತು.

ಇದು ಟಿ20 ಇತಿಹಾಸದಲ್ಲಿ ತಂಡವೊಂದರ ಐದನೇ ಗರಿಷ್ಠ ಮೊತ್ತವಾಗಿದ್ದರೆ, ಐಪಿಎಲ್‌ನಲ್ಲಿ 2ನೇ ಗರಿಷ್ಠ ಮೊತ್ತ ಎನಿಸಿದೆ. ಇನ್ನು ಕೆಕೆಆರ್‌ ತಂಡ ತನ್ನ ಇನ್ನಿಂಗ್ಸ್‌ನಲ್ಲಿ 18 ಸಿಕ್ಸರ್‌ ಸಿಡಿಸಿತು. ಡೆಲ್ಲಿ ತಂಡದ ವಿರುದ್ಧ ಐಪಿಎಲ್‌ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಸಿಕ್ಸರ್‌ ದಾಖಲೆ ಇದಾಗಿದೆ. ಇದಕ್ಕೂ ಮುನ್ನ 2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಹಾಗೂ 2019ರಲ್ಲಿ ಈಡನ್‌ ಗಾರ್ಡನ್ಸ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 17 ಸಿಕ್ಸರ್‌ ಸಿಡಿಸಿದ್ದು ದಾಖಲೆ ಎನಿಸಿತ್ತು.

ಕೆಕೆಆರ್‌ ಪರವಾಗಿ ಆರಂಭಿಕ ಆಟಗಾರ ಪೀಟರ್‌ ಸಾಲ್ಟ್‌ (18ರನ್‌, 12 ಎಸೆತ, 4 ಬೌಂಡರಿ) ಸುನೀಲ್‌ ನಾರಾಯಣ್‌ ಮೊದಲ ವಿಕೆಟ್‌ಗೆ ಕೇವಲ 27 ಎಸೆತಗಳಲ್ಲಿ 60 ರನ್‌ ಪೇರಿಸಿತು. ಈ ಹಂತದಲ್ಲಿ ನೋಕಿಯೆ ಡೆಲ್ಲಿಗೆ ಮೊದಲ ಯಶಸ್ಸು ನೀಡಿದರು. ಪೀಟರ್‌ ಸಾಲ್ಟ್‌ ನಿರ್ಗಮನದ ಬಳಿಕ ಸುನೀಲ್‌ ನಾರಾಯಣ್‌ಗೆ ಜೊತೆಯಾದ ಅಂಗ್‌ಕ್ರಿಶ್‌ ರಘುವಂಶಿ (54ರನ್‌, 27 ಎಸೆತ, 5ಬೌಂಡರಿ, 3 ಸಿಕ್ಸರ್‌) ಕೇವಲ 48 ಎಸೆತಗಳಲ್ಲಿ 108 ರನ್‌ ಜೊತೆಯಾಟವಾಡಿದರು. ಸುನೀಲ್‌ ನಾರಾಯನ್‌ ಜೊತೆ ಪೈಪೋಟಿಗೆ ಬಿದ್ದಂತೆ ಬ್ಯಾಟಿಂಗ್‌ ನಡೆಸಿದ ರಘುವಂಶಿ, ಕೆಕೆಆರ್‌ ತಂಡದ ದೊಡ್ಡ ಮೊತ್ತಕ್ಕೆ ತಮ್ ಪಾಲು ನೀಡಿದರು. ಆದರೆ, 8 ರನ್‌ಗಳ ಅಂತರದಲ್ಲಿ ಇವರಿಬ್ಬರೂ ನಿರ್ಗಮನ ಕಂಡಾಗ ಕೆಕೆಆರ್‌ ಹಿನ್ನಡೆ ಕಂಡಿತ್ತು.

ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ನಾಯಕ ಶ್ರೇಯಸ್‌ ಅಯ್ಯರ್‌ 11 ಎಸೆತಗಳಲ್ಲಿ 18 ರನ್‌ ಬಾರಿಸಿ ಔಟಾದರೆ, ರಿಂಕು ಸಿಂಗ್‌ ಕೇವಲ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ ಇದ್ದ 26 ರನ್‌ ಸಿಡಿಸಿ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ಇನ್ನೊಂದೆಡೆ ಎಂದಿನ ಶೈಲಿಯ ಬ್ಯಾಟಿಂಗ್‌ ನಡೆಸಿದ ಆಂಡ್ರೆ ರಸೆಲ್‌ 19 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ ಇದ್ದ 41 ರನ್‌ ಬಾರಿಸಿ ಕೊನೆಯ ಓವರ್‌ನಲ್ಲಿ ಔಟಾದರು. ರಸೆಲ್‌ ಕೊನೆಯ ಓವರ್‌ ಸಂಪೂರ್ಣವಾಗಿ ಬ್ಯಾಟಿಂಗ್‌ ಮಾಡಿದ್ದರೆ, ಕೆಕೆಆರ್‌ಗೆ ದಾಖಲೆ ಮಾಡುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ, ಇಶಾಂತ್‌ ಶರ್ಮ ಇದಕ್ಕೆ ಅವಕಾಶ ನೀಡಲಿಲ್ಲ. 

RCB ಸೋಲಿನ ಬೆನ್ನಲ್ಲೇ ಸಿಕ್ಕಾಪಟ್ಟೆ ಟ್ರೋಲ್..! ಇದು RCB ಹಳೆ ಅಧ್ಯಾಯವೆಂದ ಫ್ಯಾನ್ಸ್