ಮಧ್ಯ ಪ್ರದೇಶ ವಿರದ್ಧ ಹಿನ್ನಡೆ; ಕರ್ನಾಟಕ ರಣಜಿ ಕ್ವಾರ್ಟರ್ ಫೈನಲ್ ಹಾದಿ ಕಠಿಣ!
ರಣಜಿ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಕರ್ನಾಟಕ ಮಹತ್ವದ ಘಟ್ಟದಲ್ಲಿ ಹಿನ್ನಡೆ ಅನುಭವಿಸಿದೆ. ಮಧ್ಯ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಹಿನ್ನಡೆ ಅನುಭವಿಸುವ ಮೂಲಕ ಕ್ವಾರ್ಟರ್ ಫೈನಲ್ ಹಾದಿ ಮುಳ್ಳಾಗಿಸಿದೆ.
ಶಿವಮೊಗ್ಗ(ಫೆ.08): 2019-20ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಕ್ವಾರ್ಟರ್ ಫೈನಲ್ ಹಾದಿ ಕಠಿಣಗೊಂಡಿದೆ. ಮಧ್ಯಪ್ರದೇಶ ವಿರುದ್ಧ ಶುಕ್ರವಾರ ಇಲ್ಲಿ ಮುಕ್ತಾಯವಾದ ‘ಬಿ’ ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಉಭಯ ತಂಡಗಳು ಜಿದ್ದಾಜಿದ್ದಿ ನಡೆಸಿದವು. ಆದರೆ ಮಧ್ಯಪ್ರದೇಶ ಕೇವಲ 5 ರನ್ ಮುನ್ನಡೆ ಪಡೆದು, 3 ಅಂಕ ಸಂಪಾದಿಸಿದರೆ, ಕರ್ನಾಟಕಕ್ಕೆ ಕೇವಲ 1 ಅಂಕ ದೊರೆಯಿತು.
ಇದನ್ನೂ ಓದಿ: RCB ತಂಡದಿಂದ ಹೊರಬಿದ್ದ ಬಳಿಕ ಅಬ್ಬರಿಸುತ್ತಿದ್ದಾರೆ ಸರ್ಫರಾಜ್..!.
7 ಪಂದ್ಯಗಳ ಬಳಿಕ 25 ಅಂಕಗಳನ್ನು ಹೊಂದಿರುವ ಕರ್ನಾಟಕ, ಎಲೈಟ್ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಗುಂಪು ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಆ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ರಾಜ್ಯ ತಂಡ ಸಿಲುಕಿದೆ. ‘ಎ’ ಹಾಗೂ ‘ಬಿ’ ಗುಂಪಿನಿಂದ ಅಗ್ರ 5 ತಂಡಗಳು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲಿವೆ. 24 ಅಂಕ ಹೊಂದಿರುವ ಪಂಜಾಬ್, 6ನೇ ಸ್ಥಾನದಲ್ಲಿದ್ದು ಕ್ವಾರ್ಟರ್ ಫೈನಲ್ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 20 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಉತ್ತರ ಪ್ರದೇಶ ಕೊನೆ ಪಂದ್ಯದಲ್ಲಿ ಬೋನಸ್ ಅಂಕದೊಂದಿಗೆ ಗೆದ್ದರೆ, ಆ ತಂಡಕ್ಕೂ ನಾಕೌಟ್ ಪ್ರವೇಶಿಸುವ ಅವಕಾಶವಿರಲಿದೆ.
ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕಕ್ಕೆ ಬೋನಸ್ ಗೆಲುವು!
ಕರ್ನಾಟಕಕ್ಕೆ ಕುಲ್ದೀಪ್ ಶಾಕ್!: 3ನೇ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದ್ದ ಮಧ್ಯಪ್ರದೇಶ, ಶುಕ್ರವಾರ ಬ್ಯಾಟಿಂಗ್ ಕುಸಿತ ಕಂಡಿತು. 381 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಮುನ್ನಡೆ ಬಿಟ್ಟುಕೊಡುವ ಹಂತ ತಲುಪಿತ್ತು. ಆದರೆ ಕೊನೆ ವಿಕೆಟ್ಗೆ ಕುಲ್ದೀಪ್ ಸೆನ್ ಜತೆ ಸೇರಿದ ಆದಿತ್ಯ ಶ್ರೀವಾಸ್ತವ, 50 ರನ್ ಜೊತೆಯಾಟವಾಡಿ ತಂಡಕ್ಕೆ ಮುನ್ನಡೆ ಒದಗಿಸಿದರು. ಕುಲ್ದೀಪ್ ಈ ಸಾಲಿನ ರಣಜಿ ಟ್ರೋಫಿಯ ಈ ಹಿಂದಿನ ಪಂದ್ಯಗಳಲ್ಲಿ ಒಂದೂ ರನ್ ಗಳಿಸಿರಲಿಲ್ಲ. ಆದರೆ 3 ಸಿಕ್ಸರ್ಗಳೊಂದಿಗೆ 19 ಎಸೆತಗಳಲ್ಲಿ ಅಜೇಯ 23 ರನ್ ಸಿಡಿಸಿ, ಕರ್ನಾಟಕಕ್ಕೆ ಆಘಾತ ನೀಡಿದರು. ಆದಿತ್ಯ 192 ರನ್ ಗಳಿಸಿ ಔಟಾಗುತ್ತಿದ್ದಂತೆ 431 ರನ್ಗಳಿಗೆ ಮಧ್ಯಪ್ರದೇಶದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಕೇವಲ 5 ರನ್ ಮುನ್ನಡೆ ಪಡೆದ ಮಧ್ಯಪ್ರದೇಶ 3 ಅಂಕ ಗಳಿಸಿತು.
2ನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ, ಆರ್.ಸಮಥ್ರ್ (12) ವಿಕೆಟ್ ಕಳೆದುಕೊಂಡಿತು. ದೇವದತ್ ಪಡಿಕ್ಕಲ್ (31) ಹಾಗೂ ರೋಹನ್ ಕದಂ (16) ಅಜೇಯರಾಗಿ ಉಳಿದರು. ಕರ್ನಾಟಕ 1 ವಿಕೆಟ್ಗೆ 62 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.
ಸ್ಕೋರ್: ಕರ್ನಾಟಕ 426 ಹಾಗೂ 62/1, ಮಧ್ಯಪ್ರದೇಶ 431 (ಆದಿತ್ಯ 192, ವೆಂಕಟೇಶ್ 86, ಮಿಥುನ್ 3-69)