ಐಪಿಎಲ್ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 7 ವಿಕೆಟ್ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಆರ್ಸಿಬಿ, ಕೆಕೆಆರ್ ವಿರುದ್ಧದ ಸೋಲಿನ ಸರಣಿಯನ್ನು ಕೊನೆಗೊಳಿಸಿದೆ. ಆರ್ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೆರವಾಯಿತು.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅನಾಯಾಸವಾಗಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಕಳೆದ ನಾಲ್ಕು ಮುಖಾಮುಖಿಯಲ್ಲೂ ಕೆಕೆಆರ್ ಎದುರು ಮುಗ್ಗರಿಸಿದ್ದ ಆರ್ಸಿಬಿ ತಂಡವು ಇದೀಗ ಕೆಕೆಆರ್ ತವರಿನ ಅಂಗಳದಲ್ಲೇ ಸೋಲಿನ ಕಹಿಯುಣಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೆಕೆಆರ್ ಎದುರು 7 ವಿಕೆಟ್ ಗೆಲುವು ಸಾಧಿಸುತ್ತಿದ್ದಂತೆಯೇ ಆರ್ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಸಾವಿರ ಮೈಲು ದೂರದಲ್ಲಿರುವ ಆರ್ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. "ಕೆಕೆಆರ್ ಎದುರು ಅತ್ಯದ್ಭುತ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗಳು. ಕಾಮೆಂಟೇಟರ್ಗಳು ಕೊನೆಗೂ ಆರ್ಸಿಬಿ ಒಳ್ಳೆಯ ಬೌಲಿಂಗ್ ಪಡೆ ಹೊಂದಿದೆ ಎಂದು ಹೇಳಿದ್ದನ್ನು ಕೇಳಿ ಖುಷಿಯಾಯಿತು. ಇನ್ನು ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಹೇಳುವುದೇನು ಬೇಡ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ಎರಡು IPL ತಂಡಗಳು ಭಾರತ-ಪಾಕಿಸ್ತಾನ ಇದ್ದಂಗೆ ಎಂದ ಹರ್ಭಜನ್ ಸಿಂಗ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಆರಂಭಿಕ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಟೂರ್ನಿಗೆ ಆರ್ಸಿಬಿ ರಾಯಲ್ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ, ಆರಂಭಿಕ ಆಘಾತದ ಹೊರತಾಗಿಯೂ ಕೊನೆಯಲ್ಲಿ ಮುಗ್ಗಿರಿಸಿ 8 ವಿಕೆಟ್ಗೆ 174 ರನ್ ಕಲೆಹಾಕಿತು. ಈಡನ್ ಗಾರ್ಡನ್ನಲ್ಲಿ ಆರ್ಸಿಬಿಗೆ ಸಿಕ್ಕ ಮೊತ್ತ ದೊಡ್ಡದೇನೂ ಆಗಿರಲಿಲ್ಲ. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಗುರಿಯನ್ನು ಮತ್ತಷ್ಟು ಸುಲಭವಾಗಿಸಿತು. ತಂಡ 16.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: ಬ್ಯಾಟ್ ವಿಕೆಟ್ಗೆ ಬಡಿದರೂ ಸುನಿಲ್ ನರೈನ್ ಅಂಪೈರ್ ಔಟ್ ಎಂದು ಯಾಕೆ ಘೋಷಿಸಲಿಲ್ಲ? ಅಷ್ಟಕ್ಕೂ ರೂಲ್ಸ್ ಏನು?
ಸೋಲಿನ ಸರಪಳಿ ಕಳಚಿದ ಆರ್ಸಿಬಿ
ಕೆಕೆಆರ್ ವಿರುದ್ಧ ಆರ್ಸಿಬಿ ಕಳೆದೆರಡು ಆವೃತ್ತಿಗಳ ಒಟ್ಟು 4 ಪಂದ್ಯಗಳಲ್ಲೂ ಸೋಲನುಭವಿಸಿತ್ತು. ಅಲ್ಲದೆ, ಕೋಲ್ಕತಾದಲ್ಲಿ ಕೆಕೆಆರ್ ವಿರುದ್ಧ 2019ರ ಬಳಿಕ ಗೆದ್ದಿರಲಿಲ್ಲ. ಶನಿವಾರದ ಗೆಲುವಿನೊಂದಿಗೆ ಆರ್ಸಿಬಿ ಸೋಲಿನ ಸರಪಳಿ ಕಳಚಿಕೊಂಡಿತು.
