ಐಪಿಎಲ್ 2021: ಮುಂದಿನ ಪಂದ್ಯದಲ್ಲಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್ಸಿಬಿ
ಕೋವಿಡ್ ವಾರಿಯರ್ಸ್ಗಳಿಗೆ ಗೌರವ ಸೂಚಕವಾಗಿ ಆರ್ಸಿಬಿ ತನ್ನ ಮುಂದಿನ ಒಂದು ಪಂದ್ಯದಲ್ಲಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.02): ಇಡೀ ದೇಶ ಕೋವಿಡ್ 19 ವಿರುದ್ದ ನಿರಂತರವಾಗಿ ಹೋರಾಡುತ್ತಿದೆ. ಇದೀಗ ಕೋವಿಡ್ ವಿರುದ್ದ ಹೋರಾಡುತ್ತಿರುವ
ಕೊರೋನಾ ವಾರಿಯರ್ಸ್ಗೆ ಬೆಂಬಲ ಸೂಚಕವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂಬರುವ ಒಂದು ಪಂದ್ಯದಲ್ಲಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಕಳೆದೊಂದು ವರ್ಷದಿಂದ ಕೊರೋನಾ ವಾರಿಯರ್ಸ್ಗಳು ಪಿಪಿಇ ಕಿಟ್ ಧರಿಸಿ ಕೋವಿಡ್ ಹೆಮ್ಮಾರಿಯ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಇದೇ ವೇಳೆ ಭಾರತದ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಆರ್ಥಿಕ ನೆರವು ನೀಡಲು ಆರ್ಸಿಬಿ ಮುಂದಾಗಿದೆ.
ಇದರ ಭಾಗವಾಗಿ ಆರ್ಸಿಬಿ ಬ್ಲೂ ಜೆರ್ಸಿಯನ್ನು ಆಟಗಾರರ ಆಟೋಗ್ರಾಫ್ನೊಂದಿಗೆ ಹರಾಜಿಗಿಡಲಿದ್ದು, ಆ ಹರಾಜಿನಲ್ಲಿ ಸಂಗ್ರಹವಾದ ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ನೀಡಲು ಬೆಂಗಳೂರು ಮೂಲದ ಫ್ರಾಂಚೈಸಿ ನಿರ್ಧರಿಸಿದೆ. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ದೇಶದ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಕೋವಿಡ್ ಲಸಿಕೆ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.
ಪಾಂಡ್ಯ ಕುಟುಂಬದಿಂದ 200 ಆಕ್ಸಿಜನ್ ಕಾನ್ಸಟ್ರೇಟರ್ಸ್; ನೆರವು ಘೋಷಿಸಿದ ಹಾರ್ದಿಕ್
ಈಗಾಗಲೇ ಕೋವಿಡ್ ವಿರುದ್ದದ ಹೋರಾಟಕ್ಕೆ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಪ್ಯಾಟ್ ಕಮಿನ್ಸ್, ಬ್ರೆಟ್ ಲೀ ಮೊದಲಿಗೆ ಭಾರತದ ಸಂಕಷ್ಟಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಉಳಿದವರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದರು. ಇದಾದ ಬಳಿಕ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 7.5 ಕೋಟಿ ರುಪಾಯಿ ದೇಣಿಗೆ ನೀಡಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆಕ್ಸಿಜನ್ ಖರೀದಿಗೆ ಒಂದು ಕೋಟಿ ರುಪಾಯಿ ನೀಡಿದ್ದರು. ಇದಾದ ಬಳಿಕ ವಿಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್, ಟೀಂ ಇಂಡಿಯಾ ಕ್ರಿಕೆಟಿಗರಾದ ಶಿಖರ್ ಧವನ್, ಜಯದೇವ್ ಉನಾದ್ಕತ್ ಹಾಗೂ ಪಾಂಡ್ಯ ಬ್ರದರ್ಸ್ ಸಹಾ ಕೋವಿಡ್ ಸಂಕಷ್ಟ ತಮ್ಮ ಕೈಲಾದ ನೆರವು ನೀಡಿದ್ದಾರೆ.