14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮುಂಬೈ ಚರಣದ ಪಂದ್ಯಗಳು ಸ್ಥಳಾಂತರವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಏ.05): ಕೊರೋನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ, ಮುಂಬೈನಿಂದ ಐಪಿಎಲ್‌ 14ನೇ ಆವೃತ್ತಿಯ ಪಂದ್ಯಗಳನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕಾರ್ಯದರ್ಶಿ ಸಂಜಯ್‌ ನಾಯ್ಕ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಂಖೇಡೆ ಕ್ರೀಡಾಂಗಣದ 10 ಮೈದಾನ ಸಿಬ್ಬಂದಿಗೆ ಸೋಂಕು ತಗುಲಿದ್ದು, ಮತ್ತೊಂದು ಜನಕ್ಕೆ ಹರಡಿರುವ ಆತಂಕವಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಯ್ಕ್, ‘ವಾಂಖೇಡೆ ಕ್ರೀಡಾಂಗಣಕ್ಕೆ ಈ ವರೆಗೂ ಯಾರಿಗೂ ಪ್ರವೇಶ ನೀಡಿಲ್ಲ. ಸೋಮವಾರ ಮತ್ತೊಮ್ಮೆ ಎಲ್ಲಾ ಸಿಬ್ಬಂದಿಗೂ ಪರೀಕ್ಷೆ ನಡೆಸಿ, ಪಾಸಿಟಿವ್‌ ಬಂದವರನ್ನು ಚಿಕಿತ್ಸೆಗೆ ಕಳುಹಿಸುತ್ತೇವೆ. ವರದಿ ನೆಗೆಟಿವ್‌ ಇದ್ದವರು ಮುಂಬೈ ಚರಣ ಮುಗಿಯುವ ವರೆಗೂ ಕ್ರೀಡಾಂಗಣದಲ್ಲೇ ಇರಲಿದ್ದಾರೆ’ ಎಂದಿದ್ದಾರೆ.

ಕ್ರಿಕೆಟಿಗರಿಗೆ ಕೊರೋನಾ ಲಸಿಕೆ; ಕೇಂದ್ರ ಆರೋಗ್ಯ ಇಲಾಖೆ ಜೊತೆ ಬಿಸಿಸಿಐ ಮಾತುಕತೆ!

ಇದೇ ವೇಳೆ ಪಂದ್ಯಗಳನ್ನು ಮುಂಬೈನಿಂದ ಸ್ಥಳಾಂತರಿಸಲು ಬಿಸಿಸಿಐ ಇಚ್ಛಿಸಿದರೆ, ಆತಿಥ್ಯ ವಹಿಸಲು ಸಿದ್ಧವಿರುವುದಾಗಿ ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಮೊಹಮದ್‌ ಅಜರುದ್ದೀನ್‌ ತಿಳಿಸಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್‌ 09ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ.