* ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಿಂದಲೇ ಬ್ಯಾಟ್ಸ್‌ಮನ್ ಬದಲಿಗೆ ಬ್ಯಾಟರ್ ಪದ ಬಳಕೆ ಜಾರಿಗೆ* ಲಿಂಗ ಸಮಾನತೆ ಸಾರುವ ಉದ್ದೇಶದಿಂದ ಐಸಿಸಿಯಿಂದ ಮಹತ್ವದ ನಡೆ* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭ

ದುಬೈ(ಅ.08): ಇದೇ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ನಿಂದ ಬ್ಯಾಟ್ಸ್‌ಮನ್‌ ಬದಲಿಗೆ ‘ಬ್ಯಾಟರ್‌ (Batter)’ ಪದ ಬಳಕೆ ಮಾಡಲಾಗುವುದು ಎಂದು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ತಿಳಿಸಿದೆ. 

Add Asianetnews Kannada as a Preferred SourcegooglePreferred

ಇದುವರೆಗೆ ಪುರುಷರ, ಮಹಿಳೆಯರ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌, ಬ್ಯಾಟ್ಸ್‌ವುಮನ್‌ ಎಂದು ಬಳಸಲಾಗುತ್ತಿತ್ತು. ಕ್ರಿಕೆಟ್‌ (Cricket Rules) ನಿಯಮಗಳ ರಚನೆ, ಪರಿಷ್ಕರಣೆ ಮಾಡುವ ಎಂಸಿಸಿ(ಮಾರ್ಲೆಬೋನ್‌ ಕ್ರಿಕೆಟ್‌ ಕ್ಲಬ್‌) ಲಿಂಗ ಸಮಾನತೆ ದೃಷ್ಟಿಯಿಂದ ಇತ್ತೀಚೆಗಷ್ಟೇ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಬದಲಿಗೆ ಬ್ಯಾಟರ್‌ ಪದ ಬಳಕೆ ಮಾಡಬೇಕು ಎಂದು ಸೂಚಿಸಿತ್ತು. ಹೀಗಾಗಿ ಈ ನಿಯಮ ಜಾರಿಗೆ ತರಲು ನಿರ್ಧರಿಸಿರುವ ಐಸಿಸಿ, ಟಿ20 ವಿಶ್ವಕಪ್‌ನಿಂದಲೇ ಬ್ಯಾಟರ್‌ ಎಂದು ಬದಲಾಯಿಸಲಾಗುತ್ತದೆ ಎಂದು ತಿಳಿಸಿದೆ.

MCC Cricket Rules: ಕ್ರಿಕೆಟ್ಟಲ್ಲಿನ್ನು ಬ್ಯಾಟ್ಸ್‌ಮನ್‌ ಬದಲು ಬ್ಯಾಟರ್ ಪದ ಬಳಕೆ..!

ಮಾರ್ಲೆಬೋನ್‌ ಕ್ರಿಕೆಟ್‌ ಕ್ಲಬ್ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುವುದಾಗಿ ಐಸಿಸಿ (ICC) ಕಾರ್ಯ ನಿರ್ವಾಹಕಾಧಿಕಾರಿ ಜೆಫ್‌ ಅಲ್ಲರ್ಡೈಸ್‌ (Geoff Allardice) ತಿಳಿಸಿದ್ದಾರೆ. ಈಗಾಗಲೇ ಐಸಿಸಿ ಬ್ಯಾಟರ್ ಎನ್ನುವ ಪದವನ್ನು ಬಳಸುತ್ತಿದೆ. ಇದೀಗ ನಮ್ಮ ಚಾನೆಲ್ ಹಾಗೂ ವೀಕ್ಷಕ ವಿವರಣೆ ಬಳಗ ಎಂಸಿಸಿಯ ಈ ನಿಯಮವನ್ನು ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ಅಳವಡಿಸಿಕೊಂಡು ಸಾರ್ವತ್ರಿಕವಾಗಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌: ನಿತಿನ್ ಮೆನನ್‌ ಅಂಪೈರ್‌, ಜಾವಗಲ್ ಶ್ರೀನಾಥ್‌ ರೆಫ್ರಿ

ದುಬೈ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಕಾರ‍್ಯನಿರ್ವಹಿಸಲಿರುವ ಅಂಪೈರ್‌ಗಳು, ಮ್ಯಾಚ್‌ ರೆಫ್ರಿಗಳ ಪಟ್ಟಿಯನ್ನು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಪ್ರಕಟಿಸಿದೆ. ಭಾರತದ ನಿತಿನ್‌ ಮೆನನ್‌ ಹಾಗೂ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ (javagal srinath) ಕ್ರಮವಾಗಿ ಅಂಪೈರ್‌ ಹಾಗೂ ಮ್ಯಾಚ್‌ ರೆಫ್ರಿಯಾಗಿ ನೇಮಕಗೊಂಡಿದ್ದಾರೆ. 

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದರೆ ಪಾಕ್‌ಗೆ Blank cheque ಸಿಗುತ್ತೆ: ರಮೀಜ್ ರಾಜಾ!

ಮೈಸೂರ್ ಎಕ್ಸ್‌ಪ್ರೆಸ್‌ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ ಹಾಗೂ ಅಂಪೈರ್ ನಿತಿನ್ ಮೆನನ್‌ ಸದ್ಯ 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಕ್ರಮವಾಗಿ ರೆಫ್ರಿ ಹಾಗೂ ಅಂಪೈರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುಎಇ ನಲ್ಲಿಯೇ ಐಪಿಎಲ್ ಟೂರ್ನಿಯು ನಡೆಯುತ್ತಿದ್ದು, ಇಲ್ಲಿಂದಲೇ ಟಿ20 ವಿಶ್ವಕಪ್‌ ಟೂರ್ನಿಯ ಅಧಿಕಾರಿಗಳ ಗುಂಪಿಗೆ ಸೇರಿಕೊಳ್ಳಲಿದ್ದಾರೆ

ಐಸಿಸಿ 16 ಅಂಪೈರ್‌ಗಳು ಹಾಗೂ 4 ಮ್ಯಾಚ್‌ ರೆಫ್ರಿಗಳು ಸೇರಿ ಒಟ್ಟು 20 ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 24ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಮರಾಯಸ್‌ ಎರಾಸ್ಮಸ್‌ ಹಾಗೂ ಇಂಗ್ಲೆಂಡ್‌ನ ಕ್ರಿಸ್‌ ಗ್ಯಾಫನಿ ಅಂಪೈರ್‌ಗಳಾಗಿ ಕಾರ‍್ಯನಿರ್ವಹಿಸಲಿದ್ದಾರೆ.

ಕಾಶ್ಮೀರದ ವೇಗಿ ಉಮ್ರಾನ್‌ ಮಲಿಕ್‌ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆ

ಅಬುಧಾಬಿ: ಈ ಆವೃತ್ತಿಯ ಐಪಿಎಲ್‌ನಲ್ಲಿ ಅತೀ ವೇಗದ ಎಸೆತವನ್ನು ಎಸೆದಿರುವ ಸನ್‌ರೈಸ​ರ್ಸ್‌ ಹೈದರಾಬಾದ್‌ ಆಟಗಾರ, ಜಮ್ಮು-ಕಾಶ್ಮೀರದ ಯುವ ವೇಗಿ ಉಮ್ರಾನ್‌ ಮಲಿಕ್‌ರನ್ನು (umran malik) ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಶ್ಲಾಘಿಸಿದ್ದಾರೆ. 

ಆರ್‌ಸಿಬಿ (RCB) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಉಮ್ರಾನ್‌ ಗಂಟೆಗೆ 153 ಕಿ.ಮೀ. ವೇಗದಲ್ಲಿ ಚೆಂಡನ್ನು ಬೌಲ್‌ ಮಾಡಿ, ಈ ಐಪಿಎಲ್‌ನಲ್ಲಿ ಅತಿವೇಗದ ಎಸೆತ ಎಸೆದ ದಾಖಲೆ ಬರೆದರು. ‘ಐಪಿಎಲ್‌ ಪ್ರತೀ ವರ್ಷವೂ ಇಂತಹ ಪ್ರತಿಭೆಗಳನ್ನು ಹೊರ ತರುತ್ತದೆ. ಉಮ್ರಾನ್‌ರ ಪ್ರಗತಿ ಮೇಲೆ ಕಣ್ಣಿಡಬೇಕಿದೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.