3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು, ಭಾರತದಲ್ಲಿ ಹಲವೆಡೆ ವಿಪರೀತ ಚಳಿ ವಾತಾವರಣವಿದೆ. ಮೈದಾನ ಕಾಣದಷ್ಟು ಮಂಜು ಕವಿದ ಕಾರಣ ಪಂದ್ಯ ರದ್ದುಗೊಳಿಸಲಾಗಿದೆ.
ಲಖನೌ (ಡಿ.17) ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ರದ್ದಾಗಿದೆ. ಬರೋಬ್ಬರಿ 3 ಗಂಟೆಗಳ ಕಾಲ ಅಂಪೈರ್, ಮ್ಯಾಚ್ ರೆಫ್ರಿ ಹಾಗೂ ಆಟಗಾರರು ಕಾದಿದ್ದಾರೆ. ಆದರೆ ಮಂಜು ದಟ್ಟವಾಗುತ್ತಲೇ ಹೋಗಿದೆ. ದಟ್ಟವಾದ ಮಂಜಿನಿಂದ ಮೈದಾನವೇ ಕಾಣಿಸದಂತಾಗಿದೆ. 100 ಮೀಟರ್ ದೂರದಲ್ಲಿ ನಿಂತರೂ ಕಾಣದಾಗಿದೆ. ಮಂಜು ವಾತಾವರಣ ಸುಧಾರಿಸದ ಕಾರಣ ಭಾರತ ಹಾಗೂ ಸೌತ್ ಆಫ್ರಿಕಾ ನಾಲ್ಕನೇ ಟಿ20 ಪಂದ್ಯ ರದ್ದು ಮಾಡಲಾಗಿದೆ. 5 ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಲಖನೌದಲ್ಲಿ ಆಯೋಜನೆಗೊಂಡಿದ್ದ ಪಂದ್ಯ
ಉತ್ತರ ಪ್ರದೇಶದ ಲಖನೌದಲ್ಲಿರುವ ಏಕಾನ ಕ್ರಿಕೆಟ್ ಮೈದಾನದಲ್ಲಿ 4ನೇ ಟಿ20 ಪಂದ್ಯ ಆಯೋಜನೆ ಮಾಡಲಾಗಿತ್ತು. ಆದರೆ ಪಂದ್ಯ ಆರಂಭಕ್ಕೆ ಮಂಜು ಅನುವು ಮಾಡಿಕೊಡಲೇ ಇಲ್ಲ. ಆರಂಭದಲ್ಲೇ ಟಾಸ್ ವಿಳಂಬ ಮಾಡಲಾಗಿತ್ತು. ಬಳಿಕ ಓವರ್ ಕಡಿತದ ಸಮಯ ಆರಂಭಗೊಂಡಿತ್ತು. ಹೀಗೆ ಬರೋಬ್ಬರಿ 3 ಗಂಟೆಗಳ ಕಾಲ ಕಾದರೂ ಮಂಜು ಕರಗಲಿಲ್ಲ. ಹೀಗಾಗಿ ಪಂದ್ಯ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಭಾರತದ ಸರಣಿ ಗೆಲುವಿನ ಉತ್ತಮ ಚಾನ್ಸ್
ನಾಲ್ಕನೇ ಟಿ20 ಪಂದ್ಯ ರದ್ದಾದರೂ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ ಜೀವಂತವಾಗಿದೆ. ಆದರೆ ಸೌತ್ ಆಫ್ರಿಕಾ ಪರಿಸ್ಥಿತಿ ಹಾಗಿಲ್ಲ. ಕೊನೆಯ ಹಾಗೂ 5ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ಒಂದು ವೇಳೆ ಗೆಲುವು ಸಾಧಿಸಿದರೂ ಸರಣಿ 2-2 ಅಂತರದಲ್ಲಿ ಸಮಬಲಗೊಳ್ಳಲಿದೆ. ಟ್ರೋಫಿ ಭಾರತ ಹಾಗೂ ಸೌತ್ ಆಫ್ರಿಕಾ ಹಂಚಿಕೊಳ್ಳಲಿದೆ. ಆದರೆ ಭಾರತ 5ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದರೆ 3-1 ಅಂತರದಲ್ಲಿ ಸರಣಿ ಗೆಲ್ಲಲಿದೆ.
ಭಾರತ ಸೌತ್ ಆಫ್ರಿಕಾ ಟಿ20 ಸರಣಿ
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 101 ರನ್ ಅಂತರದ ಗೆಲುವು ಕಂಡಿತ್ತು. ಟೀಂ ಇಂಡಿಯಾ 175 ರನ್ ಸಿಡಿಸಿದ್ದರೆ, ಸೌತ್ ಆಪ್ರಿಕಾ 74 ರನ್ ಸಿಡಿಸಿ ಆಲೌಟ್ ಆಗಿತ್ತು. ದ್ವಿತೀಯ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ಸೇಡು ತೀರಿಸಕೊಂಡಿತ್ತು.ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸೌತ್ ಆಫ್ರಿಕಾ 214 ರನ್ ಟಾರ್ಗೆಟ್ ನೀಡಿತ್ತು. ಆದರೆ ಟೀಂ ಇಂಡಿಯಾ 162 ರನ್ ಸಿಡಿಸಿ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ 51 ರನ್ ಗೆಲುವು ಕಂಡಿತ್ತು. ಇನ್ನು 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸಂಘಟಿತ ಹೋರಾಟ ನೀಡಿತ್ತು. ಸೌತ್ ಆಫ್ರಿಕಾ ತಂಡವನ್ನು 117 ರನ್ಗೆ ಆಲೌಟ್ ಮಾಡಿದ ಭಾರತ, 15.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಈ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿತ್ತು.


