Ind vs Eng ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಕೊನೆಗೂ ತುಟಿಬಿಚ್ಚಿದ ಕಿಂಗ್ ಕೊಹ್ಲಿ
* ಕೋವಿಡ್ ಭೀತಿಯಿಂದ ಭಾರತ-ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ರದ್ದು
* ಟೆಸ್ಟ್ ಮ್ಯಾಚ್ ರದ್ದಾದ ಬಗ್ಗೆ ತುಟಿಬಿಚ್ಚಿದ ನಾಯಕ ಕೊಹ್ಲಿ
* ಸದ್ಯ ಐಪಿಎಲ್ನಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದ ಆರ್ಸಿಬಿ ನಾಯಕ
ದುಬೈ(ಸೆ.14): ಇಂಗ್ಲೆಂಡ್ ವಿರುದ್ದದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದು ಅಭಿಮಾನಿಗಳು ಆಸೆಗಣ್ಣಿನಿಂದ ಕಾಯುತ್ತಿದ್ದರು. ಆದರೆ ಕೋವಿಡ್ ಭೀತಿಯಿಂದ 5ನೇ ಟೆಸ್ಟ್ ಪಂದ್ಯವು ಕೊನೆಯ ಕ್ಷಣದಲ್ಲಿ ರದ್ದಾಯಿತು. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಯುಎಇ ಚರಣದ ಐಪಿಎಲ್ನಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿದ್ದಾರೆ. ಇದೀಗ ಕೊಹ್ಲಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾದ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ದುರಾದೃಷ್ಟವಶಾತ್, ಇಂಗ್ಲೆಂಡ್ ಪ್ರವಾಸವನ್ನು ನಾವಿಲ್ಲಿ ಬೇಗ ಮುಗಿಸಬೇಕಾಗಿ ಬಂತು. ಕೋವಿಡ್ ಎಲ್ಲವನ್ನು ಅನಿಶ್ಚಿತತೆಗೆ ದೂಡುವಂತೆ ಮಾಡಿದೆ ಎಂದು ಆರ್ಸಿಬಿಯ ಬೋಲ್ಡ್ ಡೈರಿಯಲ್ಲಿ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಿಸಬಹುದು. ನಾವಿಲ್ಲಿ ಒಳ್ಳೆಯ ಸುರಕ್ಷಿತ ವಾತಾವರಣದಲ್ಲಿದ್ದು, ಗುಣಮಟ್ಟದ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ.
ಯುಎಇ ಚರಣದ ಐಪಿಎಲ್ ಟೂರ್ನಿಯು ಅತ್ಯಂತ ರೋಚಕ ಘಟ್ಟವಾಗಿದ್ದು, ಆರ್ಸಿಬಿ ಹಾಗೂ ಟೀಂ ಇಂಡಿಯಾ ಪಾಲಿಗೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಸಾಕಷ್ಟು ಮಹತ್ವದ್ದಾಗಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಪ್ರಕಟಿಸಿದ ಶಕೀಬ್ ಅಲ್ ಹಸನ್; ಗೇಲ್, ಎಬಿಡಿಗಿಲ್ಲ ಸ್ಥಾನ..!
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವು ರದ್ದಾದ ಮರುದಿನವೇ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ಫ್ರಾಂಚೈಸಿ ವಿಶೇಷ ವಿಮಾನದ ಮೂಲಕ ಮ್ಯಾಂಚೆಸ್ಟರ್ನಿಂದ ಯುಎಇಗೆ ಕರೆ ತಂದಿದೆ. ಸದ್ಯ ಕೊಹ್ಲಿ ಹಾಗೂ ಸಿರಾಜ್ 6 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದಾರೆ.