* ಮೂರನೇ ಟೆಸ್ಟ್ನ ಆರಂಭದಲ್ಲೇ ಭಾರತಕ್ಕೆ ಶಾಕ್ ಕೊಟ್ಟ ಆಂಡರ್ಸನ್* ಎರಡಂಕಿ ಮೊತ್ತ ದಾಖಲಿಸುವ ಮುನ್ನವೇ ಟೀಂ ಇಂಡಿಯಾದ ಎರಡು ವಿಕೆಟ್ ಪತನ* ಪೆವಿಲಿಯನ್ ಸೇರಿದ ರಾಹುಲ್&ಪೂಜಾರ
ಲೀಡ್ಸ್(ಆ.25): ಲಾರ್ಡ್ಸ್ ಟೆಸ್ಟ್ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದ ಆರಂಭದಲ್ಲೇ ಅಗ್ರಕ್ರಮಾಂಕದ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ ಎರಡಂಕಿ ಮೊತ್ತ ದಾಖಲಿಸುವಷ್ಟರೊಳಗಾಗಿ ಅಗ್ರಕ್ರಮಾಂಕದ ಇಬ್ಬರು ಬ್ಯಾಟ್ಸ್ಮನ್ ಗಳು ಪೆವಿಲಿಯನ್ ಸೇರಿದ್ದಾರೆ.
ಹೌದು, ಇಲ್ಲಿನ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾಗೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬಿಗ್ ಶಾಕ್ ನೀಡಿದ್ದಾರೆ. ಮೊದಲ ಓವರ್ನಲ್ಲೇ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಈ ಶಾಕ್ನಿಂದ ಹೊರಬರುವ ಮುನ್ನವೇ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಅವರನ್ನು ಸಹಾ ಆಂಡರ್ಸನ್ ಬಲಿ ಪಡೆಯುವ ಮೂಲಕ ಇಂಗ್ಲೆಂಡ್ಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದಾರೆ. ರಾಹುಲ್ ಶೂನ್ಯ ಸುತ್ತಿದರೆ, ಪೂಜಾರ ಬ್ಯಾಟಿಂಗ್ ಕೇವಲ ಒಂದು ರನ್ಗೆ ಸೀಮಿತವಾಯಿತು. ಈ ಇಬ್ಬರು ಬ್ಯಾಟ್ಸ್ಮನ್ಗಳು ಜೋಸ್ ಬಟ್ಲರ್ಗೆ ಕ್ಯಾಚಿತ್ತು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಸದ್ಯ 9 ಓವರ್ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 19 ರನ್ ಬಾರಿಸಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ(4) ಹಾಗೂ ವಿರಾಟ್ ಕೊಹ್ಲಿ(7) ಕ್ರೀಸ್ನಲ್ಲಿದ್ದಾರೆ. ಈ ಇಬ್ಬರು ಬ್ಯಾಟ್ಸ್ಮನ್ಗಳ ಜತೆಯಾಟದ ಮೇಲೆ ಪಂದ್ಯದ ದಿಕ್ಕು ನಿರ್ಧಾರವಾಗುವ ಸಾಧ್ಯತೆಯಿದೆ.
