ಒಂದು ವೇಳೆ ಕೊರೋನಾ ಭೀತಿಯಿಂದಾಗಿ ಐಪಿಎಲ್ ಟೂರ್ನಿ ನಡೆಯದಿದ್ದರೆ ಧೋನಿ ಕ್ರಿಕೆಟ್ ಭವಿಷ್ಯ ಏನು ಎನ್ನುವ ಕುತೂಹಲದ ಬಗ್ಗೆ ಗೌತಮ್ ಗಂಭೀರ್ ಮತ್ತೊಮ್ಮೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.14): 2020ರಲ್ಲಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ನಡೆಯಲಿದೆಯೋ ಅಥವಾ ರದ್ದಾಗಲಿದೆಯೋ ಇನ್ನುವುದು ಇನ್ನೂ ಗೊತ್ತಾಗಿಲ್ಲ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌. ಧೋನಿ ತಂಡಕ್ಕೆ ಮರಳುವುದು ಅಸಾಧ್ಯವಾಗಿದೆ ಎಂದು ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹೇಳಿದ್ದಾರೆ. 

ಧೋನಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ ಬಳಿಕ ಭಾರತ ತಂಡದಲ್ಲಿ ಆಡಿಲ್ಲ. ಈ ಅವಧಿಯಲ್ಲಿ ಧೋನಿ ಎಲ್ಲೂ ವೃತ್ತಿಪರ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ತಂಡಕ್ಕೆ ಮರಳುವುದು ಕಷ್ಟ ಎಂದಿದ್ದಾರೆ. ಅಲ್ಲದೆ ದಿಗ್ಗಜ
ಆಟಗಾರರಾದ ಕಪಿಲ್‌ ದೇವ್‌ ಹಾಗೂ ಸುನಿಲ್‌ ಗವಾಸ್ಕರ್‌ ಕೂಡ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುವುದು ಸುಲಭವಿಲ್ಲ ಎಂದಿದ್ದಾರೆ.

ಧೋನಿಯಿಂದಲೇ ವಿಶ್ವಕಪ್ ಶತಕ ಕೈತಪ್ಪಿತು; ಗಂಭೀರ್ ಹೇಳಿಕೆಗೆ ಫ್ಯಾನ್ಸ್ ಗರಂ!

ಧೋನಿ ಕುರಿತಂತೆ ಡೆಲ್ಲಿ ಮಾಜಿ ಕ್ರಿಕೆಟಿಗ ಗಂಭೀರ್ ಹಲವಾರು ಬಾರಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಧೋನಿಯಿಂದಾಗಿಯೇ 2011ರ ವಿಶ್ವಕಪ್ ಫೈನಲ್‌ನಲ್ಲಿ ನನ್ನ ಶತಕ ಕೈತಪ್ಪಿತು ಎಂದು ಹೇಳಿ ಗಂಭೀರ್ ಟೀಕೆಗೆ ಗುರಿಯಾಗಿದ್ದರು. ಇನ್ನು ಒಂದು ಸಿಕ್ಸರ್‌ನಿಂದ ವಿಶ್ವಕಪ್ ಗೆದ್ದಿದ್ದಲ್ಲ ಎಂದು ಪರೋಕ್ಷವಾಗಿ ಧೋನಿ ಕಾಲೆಳೆದಿದ್ದರು.

ಧೋನಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಕೋಚ್ ರವಿಶಾಸ್ತ್ರಿ ಈ ಹಿಂದೆಯೇ ಹೇಳಿದ್ದರು. ಧೋನಿ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ನಂಬಿಕೆ ಉಳಿಸಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಇನ್ನು ಕೆ.ಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದರು. ಇದೀಗ ರಾಹುಲ್ ವಿಕೆಟ್‌ ಕೀಪಿಂಗ್ ಬ್ಯಾಟ್ಸ್‌ಮನ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
"

Add Asianetnews Kannada as a Preferred SourcegooglePreferred