ICC U-19 World Cup: ಬಾಂಗ್ಲಾವನ್ನು ಬಗ್ಗುಬಡಿಯಲು ರೆಡಿಯಾದ ಭಾರತ..!
* ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿಂದು ಭಾರತ-ಬಾಂಗ್ಲಾದೇಶ ಮುಖಾಮುಖಿ
* ಹಾಲಿ ಚಾಂಪಿಯನ್ ಬಾಂಗ್ಲಾಗೆ ಸೋಲಿನ ಶಾಕ್ ನೀಡಲು ರೆಡಿಯಾದ ಭಾರತ
* ಕಳೆದ ಆವೃತ್ತಿಯ ವಿಶ್ವಕಪ್ ಫೈನಲ್ನಲ್ಲಿ ಬಾಂಗ್ಲಾಗೆ ಶರಣಾಗಿದ್ದ ಭಾರತ
ಆ್ಯಂಟಿಗಾ(ಜ.29): ದಾಖಲೆಯ 4 ಬಾರಿ ಚಾಂಪಿಯನ್ ಭಾರತ, ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ನ (ICC U-19 World Cup) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶನಿವಾರ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪ್ರಮುಖ ಆಟಗಾರರು ಕೋವಿಡ್ಗೆ (COVID 19) ತುತ್ತಾದ ಹೊರತಾಗಿಯೂ ಅದ್ಭುತ ಪ್ರದರ್ಶನ ನೀಡಿ ಕ್ವಾರ್ಟರ್ ಪ್ರವೇಶಿಸಿದ ಭಾರತ, 10ನೇ ಬಾರಿ ಸೆಮೀಸ್ ಪ್ರವೇಶಿಸುವ ಕಾತರದಲ್ಲಿದೆ. ಕಳೆದ ಆವೃತ್ತಿಯ ಫೈನಲ್ನ ಭಾರತವನ್ನು ಸೋಲಿಸಿ ಬಾಂಗ್ಲಾದೇಶ (Bangladesh Cricket) ಚಾಂಪಿಯನ್ ಆಗಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ.
ಕಳೆದ ತಿಂಗಳು ಏಷ್ಯಾಕಪ್ನಲ್ಲಿ (Asia Cup Cricket) ಬಾಂಗ್ಲಾವನ್ನು ಸೆಮೀಸ್ನಲ್ಲಿ ಸೋಲಿಸಿದ್ದ ಭಾರತ, ಮತ್ತೊಮ್ಮೆ ಮೇಲುಗೈ ಸಾಧಿಸುವ ಗುರಿ ಇಟ್ಟುಕೊಂಡಿದೆ. ಬಾಂಗ್ಲಾ 3ನೇ ಬಾರಿ ಸೆಮೀಸ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಗುಂಪು ಹಂತದಲ್ಲಿ ಭಾರತ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದರೆ, ಬಾಂಗ್ಲಾದೇಶ ತಂಡ ಇಂಗ್ಲೆಂಡ್ ವಿರುದ್ದ ಪರಾಭವಗೊಂಡಿತ್ತು. ಯುಎಇ, ಕೆನಡಾ ವಿರುದ್ಧ ಗೆದ್ದು ಸೆಮೀಸ್ಗೇರಿತ್ತು.
ಪ್ರಮುಖರು ತಂಡಕ್ಕೆ ವಾಪಸ್: ಕೊರೋನಾಗೆ ತುತ್ತಾಗಿ ಗುಂಪು ಹಂತದ 2 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ನಾಯಕ ಯಶ್ ಧುಳ್(Yash Dhull), ಉಪನಾಯಕ ಶೇಖ್ ರಶೀದ್ ಸೇರಿದಂತೆ 6 ಆಟಗಾರರು ಚೇತರಿಸಿಕೊಂಡಿದ್ದು ಆಯ್ಕೆಗೆ ಲಭ್ಯರಿದ್ದಾರೆ. ಆದರೆ ಯಶ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದ ನಿಶಾಂತ್ ಸಿಂಧುಗೆ ಸೋಂಕು ತಗುಲಿದ್ದು, ಅವರು ಪಂದ್ಯದಿಂದ ಹೊರಬಿದ್ದಿದ್ದಾರೆ.
ಪಂದ್ಯ ಆರಂಭ: ಸಂಜೆ 6.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಫೆಬ್ರವರಿ 2ನೇ ವಾರದಿಂದ ರಣಜಿ ಟ್ರೋಫಿ: ಜಯ್ ಶಾ
ನವದೆಹಲಿ: 2022ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು (Ranji Trophy Cricket Tournament) ಫೆಬ್ರವರಿ 2ನೇ ವಾರದಿಂದ ಆರಂಭಗೊಳ್ಳಲಿದೆ. ಎರಡು ಹಂತಗಳಲ್ಲಿ ಪಂದ್ಯಾವಳಿಯನ್ನು ನಡೆಸುತ್ತೇವೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಶುಕ್ರವಾರ ತಿಳಿಸಿದ್ದಾರೆ.
Brendan Taylor Ban : ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ!
ಮೊದಲ ಹಂತದಲ್ಲಿ ಲೀಗ್ ಪಂದ್ಯಗಳು ನಡೆಯಲಿದ್ದು, ಐಪಿಎಲ್ ಟೂರ್ನಿ (IPL Tournament) ಮುಕ್ತಾಯಗೊಂಡ ಬಳಿಕ ಜೂನ್ ತಿಂಗಳಲ್ಲಿ ನಾಕೌಟ್ ಪಂದ್ಯಗಳನ್ನು ನಡೆಸಲಾಗುತ್ತದೆ ಎಂದು ಶಾ ಮಾಹಿತಿ ನೀಡಿದ್ದಾರೆ. ‘ಕೋವಿಡ್ ಪರಿಸ್ಥಿತಿ ಬಗ್ಗೆ ನಮ್ಮ ತಂಡ ಸೂಕ್ಷ್ಮ ಕಣ್ಣಿಟ್ಟಿದೆ. ಆಟಗಾರರು, ಸಿಬ್ಬಂದಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಸಿದ್ಧಪಡಿಸಲಿದ್ದೇವೆ. ಪಂದ್ಯಗಳಿಗೆ ಆತಿಥ್ಯ ವಹಿಸುವ ನಗರಗಳ ವಿವರವನ್ನು ಸದ್ಯದಲ್ಲೇ ತಿಳಿಸುತ್ತೇವೆ’ ಎಂದು ಶಾ ಹೇಳಿದ್ದಾರೆ.
ರಣಜಿ ಕಡೆಗಣನೆ ಅಪಾಯಕಾರಿ: ಶಾಸ್ತ್ರಿ
ನವದೆಹಲಿ: ಐಪಿಎಲ್ಗಾಗಿ ರಣಜಿ ಟ್ರೋಫಿಯನ್ನು ಕಡೆಗಣಿಸಬೇಡಿ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಬಿಸಿಸಿಐಗೆ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಭಾರತೀಯ ಕ್ರಿಕೆಟ್ನ (Indian Cricket) ಆಧಾರಸ್ತಂಭವಾಗಿರುವ ರಣಜಿ ಕ್ರಿಕೆಟನ್ನು ಕಡೆಗಣಿಸಿದರೆ ಇಲ್ಲಿನ ಕ್ರಿಕೆಟ್ ಬೆನ್ನೆಲುಬು ಮುರಿದಂತೆ. ಇದು ಅಪಾಯಕಾರಿ’ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಭಾರತ ತಂಡದ ಹಾಲಿ ಕೋಚ್ ರಾಹುಲ್ ದ್ರಾವಿಡ್ಗೆ (Rahul Dravid) ಸಲಹೆಯೊಂದನ್ನು ಸಹ ಶಾಸ್ತ್ರಿ ನೀಡಿದ್ದಾರೆ. ‘ಕೆಲವೇ ಆಟಗಾರರ ಮೇಲೆ ತುಂಬಾ ಸಮಯ ಅವಲಂಬಿತರಾಗಬಾರದು. ಇದು ಭಾರತೀಯ ಕ್ರಿಕೆಟ್ನ ಪ್ರಮುಖ ಘಟ್ಟ. ಮುಂದಿನ 4-5 ವರ್ಷಕ್ಕೆ ಸೂಕ್ತ ಆಟಗಾರರನ್ನು ಈಗಲೇ ಆಯ್ಕೆ ಮಾಡಬೇಕು’ ಎಂದಿದ್ದಾರೆ.