2021ರ ನಂತರ ಭಾರತೀಯ T20 ತಂಡವು ಆಕ್ರಮಣಕಾರಿ ಆಟ, ಐಪಿಎಲ್‌ನಿಂದ ಬಂದ ಪ್ರತಿಭೆಗಳು, ವಿಕೆಟ್-ಟೇಕಿಂಗ್ ಬೌಲಿಂಗ್, ಸ್ಥಿರ ನಾಯಕತ್ವ ಮತ್ತು ಆಂತರಿಕ ಪೈಪೋಟಿಯಿಂದಾಗಿ ಜಾಗತಿಕ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಬದಲಾವಣೆಗಳಿಂದಾಗಿ ತಂಡವು ಸತತ ವಿಶ್ವಕಪ್‌ಗಳನ್ನು ಗೆದ್ದಿದೆ.

1. ಆಕ್ರಮಣಕಾರಿ ಆಟವೇ ಗೆಲುವಿನ ಸೂತ್ರ!

2021ರ ಟಿ20 ವಿಶ್ವಕಪ್‌ನಲ್ಲಿ ಸೂಪರ್‌-8 ಹಂತದಲ್ಲೇ ಹೊರಬಿದ್ದಿದ್ದು, ಭಾರತದ ಟಿ20 ಆಟದ ಶೈಲಿ ಬದಲಾಗಲು ವೇದಿಕೆ ಕಲ್ಪಿಸಿತು. ಮೊದಲು ರೋಹಿತ್‌-ದ್ರಾವಿಡ್‌, ಬಳಿಕ ಸೂರ್ಯ-ಗಂಭೀರ್‌ರ ಕಾಂಬಿನೇಷನ್‌ನಲ್ಲಿ ತಂಡ ಆಕ್ರಮಣಕಾರಿ ಆಟಕ್ಕೆ ಮೊದಲ ಆದ್ಯತೆ ನೀಡಿತು.

ಸರಾಸರಿಗಿಂತ ಸ್ಟ್ರೈಕ್‌ರೇಟ್‌ ಕಡೆಗೆ ಹೆಚ್ಚಿನ ಗಮನ ನೀಡಿದ ತಂಡ, ನಿರ್ಭೀತ ಆಟವನ್ನು ಆಡಲಾರಂಭಿಸಿತು. ಬ್ಯಾಟರ್‌ಗಳಿಗೆ ಮೊದಲ ಎಸೆತದಿಂದಲೇ ಎದುರಾಳಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಮುಗಿಬೀಳಲು ಲೈಸೆನ್ಸ್‌ ನೀಡಲಾಯಿತು. ವಿಕೆಟ್‌ ಬಿದ್ದರೂ ಪರವಾಗಿಲ್ಲ, ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ಅಬ್ಬರಿಸಬೇಕು ಎನ್ನುವ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಯಿತು. ಇಂಥ ಮನಸ್ಥಿತಿ ಇರುವ ಆಟಗಾರರನ್ನೇ (ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌, ರಿಂಕು ಸಿಂಗ್‌, ಶಿವಂ ದುಬೆ ಸೇರಿ ಇನ್ನೂ ಅನೇಕರು) ತಂಡಕ್ಕೆ ಆಯ್ಕೆ ಮಾಡಲಾಯಿತು. ಇದರ ಫಲವಾಗಿಯೇ, ಭಾರತ ಇಂದು ಟಿ20 ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಜೊತೆಗೆ ವಿಶ್ವವನ್ನೇ ನಡುಗಿಸುವುದನ್ನು ಅಭ್ಯಾಸ ಮಾಡಿಕೊಂಡಿದೆ. ಭಾರತ ಇತ್ತೀಚಿನ ವರ್ಷಗಳಲ್ಲಿ ಪವರ್‌-ಪ್ಲೇ(1-6 ಓವರ್‌)ನಲ್ಲಿ ನಿರಾಯಾಸವಾಗಿ 75-80 ರನ್‌ ದಾಖಲಿಸುತ್ತಿದೆ.

2. ಐಪಿಎಲ್‌ ಎಂಬ ಮಹಾ ಪಾಠಶಾಲೆ!

ಟಿ20ಯಲ್ಲಿ ಭಾರತ ಇಷ್ಟು ಅಪಾಯಕಾರಿಯಾಗಿ ಬೆಳೆದಿರುವುದರ ಹಿಂದೆ ಐಪಿಎಲ್‌ನ ಪಾತ್ರ ಇದ್ದೇ ಇದೆ. ಐಪಿಎಲ್‌ ಒಂದು ರೀತಿ ಭಾರತ ತಂಡಕ್ಕೆ ಪ್ರತಿಭೆಗಳನ್ನ ಸಿದ್ಧ ರೂಪದಲ್ಲಿ ಒದಗಿಸುವ ಫ್ಯಾಕ್ಟ್ರಿ ಆಗಿದೆ.

ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌, ಅರ್ಶ್‌ದೀಪ್‌ ಸಿಂಗ್‌, ತಿಲಕ್‌ ವರ್ಮಾ ಇವರೆಲ್ಲರ ಆಟ ನೋಡಿದಾಗ ಐಪಿಎಲ್‌ನಿಂದಾಗಿ ಆಗಿರುವ ಲಾಭ ಎಂಥದ್ದು ಎನ್ನುವುದು ತಿಳಿಯಲಿದೆ. ಇವರೆಲ್ಲರೂ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ದಿನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿರೀಕ್ಷೆ, ಒತ್ತಡ ನಿಭಾಯಿಸಲು ಸಿದ್ಧರಿದ್ದರು.ಇದೇ ಕಾರಣದಿಂದಾಗಿ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಆರ್‌.ಅಶ್ವಿನ್‌, ರವೀಂದ್ರ ಜಡೇಜಾರಂಥ ದಿಗ್ಗಜ ಆಟಗಾರರು ಭಾರತ ತಂಡದಿಂದ ದೂರವಾದರೂ ತಂಡಕ್ಕೆ ಯಾವುದೇ ಸಂಪನ್ಮೂಲ ಕೊರತೆ ಎದುರಾಗಲಿಲ್ಲ. ರೋಹಿತ್‌ ಸ್ಥಾನವನ್ನು ಅಭಿಷೇಕ್, ಕೊಹ್ಲಿ ಸ್ಥಾನವನ್ನು ತಿಲಕ್‌, ಅಶ್ವಿನ್‌ ಸ್ಥಾನವನ್ನು ವರುಣ್‌, ಜಡೇಜಾ ಸ್ಥಾನವನ್ನು ಅಕ್ಷರ್‌ ಹೀಗೆ, ಪ್ರತಿಯೊಬ್ಬ ಪ್ರಮುಖ ಆಟಗಾರನ ಸ್ಥಾನಕ್ಕೆ ಅಷ್ಟೇ ಪ್ರತಿಭೆಯುಳ್ಳ ಆಟಗಾರನನ್ನು ತರಲು ಆಯ್ಕೆ ಸಮಿತಿಗೆ ಯಾವುದೇ ಕಷ್ಟವಾಗುತ್ತಿಲ್ಲ.

3. ಬೌಲಿಂಗ್‌ ಕ್ರಾಂತಿ!

ಭಾರತ ತಂಡ ಕಳೆದ 5 ವರ್ಷದಲ್ಲಿ ರಕ್ಷಣಾತ್ಮಕ ಬೌಲಿಂಗ್‌ನಿಂದ ಆಕ್ರಮಣಕಾರಿ ಬೌಲಿಂಗ್‌ ರೂಢಿಸಿಕೊಂಡಿದೆ. ರನ್‌ ಬಿಟ್ಟುಕೊಟ್ಟರೂ ತೊಂದರೆಯಿಲ್ಲ, ಒಂದರ ಹಿಂದೆ ಒಂದು ವಿಕೆಟ್‌ ಕೀಳಬೇಕು ಎನ್ನುವ ಮನಸ್ಥಿತಿಯೊಂದಿಗೆ ಬೌಲಿಂಗ್‌ ದಾಳಿ ಸಂಘಟಿಸುವುದರಿಂದಾಗಿಯೇ ಭಾರತ ಪ್ರಬಲವಾಗಿ ಬೆಳೆದಿದೆ.

ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆನಿಸುವ ಜಸ್‌ಪ್ರೀತ್‌ ಬೂಮ್ರಾ ಇರುವಾಗ, ಬೌಲರ್‌ಗಳಿಗೆ ಆಕ್ರಮಣಕಾರಿ ರಣತಂತ್ರಗಳನ್ನು ಪ್ರಯೋಗಿಸಲು ಸ್ವತಂತ್ರ ಇರಲಿದೆ. ರನ್‌ ನಿಯಂತ್ರಿಸಲು ಬೂಮ್ರಾ ಇದ್ದಾರೆ ಎನ್ನುವ ಧೈರ್ಯದಿಂದಲೇ ಇತರ ಬೌಲರ್‌ಗಳು, ಬ್ಯಾಟರ್‌ಗಳು ದೊಡ್ಡ ಹೊಡೆತಗಳಿಗೆ ಕೈ ಹಾಕುವಂತೆ ಆಮಿಷವೊಡ್ಡಿ ವಿಕೆಟ್‌ ಕಬಳಿಸಲು ಯತ್ನಿಸುತ್ತಾರೆ. ಇದು ಭಾರತಕ್ಕೆ ಉತ್ತಮ ಫಲಿತಾಂಶವನ್ನೂ ತಂದುಕೊಟ್ಟಿದೆ ಎನ್ನುವುದಕ್ಕೆ ಅಂಕಿ-ಅಂಶಗಳೇ ಸಾಕ್ಷಿ.

4. ನಾಯಕತ್ವ ಶೈಲಿಯಲ್ಲಿ ಸ್ಥಿರತೆ

ಭಾರತ ತಂಡದ ಆಟದ ಶೈಲಿಯನ್ನು ಬದಲಿಸಿದ ರೋಹಿತ್‌ ಶರ್ಮಾ, 2024ರಲ್ಲಿ ತಂಡಕ್ಕೆ ಕಪ್‌ ಗೆಲ್ಲಿಸಿಕೊಟ್ಟರು. ಅವರ ನಿವೃತ್ತಿ ಬಳಿಕ ಸೂರ್ಯಕುಮಾರ್‌ಗೆ ನಾಯಕತ್ವದ ಜವಾಬ್ದಾರಿ ಹಸ್ತಾಂತರಗೊಂಡಿತು. ಸೂರ್ಯ ನೀರು ಕುಡಿದಷ್ಟೇ ಸುಲಭವಾಗಿ ತಂಡ ಮುನ್ನಡೆಸಿದರು. ರೋಹಿತ್‌ ನಾಯಕರಾಗಿದ್ದಾಗ ತಂಡ ಹೇಗೆ ಆಡುತ್ತಿತ್ತೋ, ಸೂರ್ಯಕುಮಾರ್‌ರ ಅಡಿಯಲ್ಲೂ ತಂಡ ಅದೇ ಆಟದ ಶೈಲಿ ಮುಂದುವರಿದಿದೆ.

5. ನಿರಂತರ ಪೈಪೋಟಿಯಿಂದ ಲಾಭ

ಇಂದು ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಅಷ್ಟು ಸುಲಭವಲ್ಲ. ಒಂದು ಸ್ಥಾನಕ್ಕೆ ಹತ್ತಾರು ಆಟಗಾರರ ನಡುವೆ ಪೈಪೋಟಿ ಇದ್ದೇ ಇರುತ್ತದೆ. ಹೀಗಾಗಿ, ಬ್ಯಾಟರ್‌ಗಳು ತಮ್ಮ ಮೂಲ ಸ್ಥಾನ ಬಿಟ್ಟು ತಂಡಕ್ಕೆ ಅಗತ್ಯವಿರುವ ಯಾವುದೇ ಕ್ರಮಾಂಕದಲ್ಲಿ ಆಡಲು ಸಜ್ಜಾಗಿರುತ್ತಾರೆ. ಇದು ತಂಡಕ್ಕೆ ಎಂಥದ್ದೇ ಪರಿಸ್ಥಿತಿಯಿಂದ ಬೇಕಿದ್ದರೂ ಗೆಲುವಿನ ಮಾರ್ಗ ಹುಡುಕಿಕೊಳ್ಳಲು ಸಹಕಾರಿಯಾಗಲಿದೆ.

2021-2026: ಯಶಸ್ಸನ್ನು ಹೊದ್ದು ಮಲಗಿರುವ ಟೀಂ ಇಂಡಿಯಾ!

--

* ಜಯದ ಲೆಕ್ಕಾಚಾರ: ಟಿ20ಯಲ್ಲಿ ಭಾರತ ಶೇ.72ರಷ್ಟು ಗೆಲುವಿನ ದಾಖಲೆ ಹೊಂದಿದೆ. ಕಳೆದ 5 ವರ್ಷದಲ್ಲಿ ಉಳಿದೆಲ್ಲಾ ತಂಡಗಳಿಗಿಂತ ಭಾರತ ಹೆಚ್ಚು ಪಂದ್ಯಗಳನ್ನು ಗೆದ್ದಿದೆ.

* ದ್ವಿಪಕ್ಷೀಯ ಸರಣಿಗಳಲ್ಲಿ ಪ್ರಾಬಲ್ಯ: 2023ರ ಆಗಸ್ಟ್‌ನಿಂದ ಭಾರತ ಒಂದೂ ದ್ವಿಪಕ್ಷೀಯ ಟಿ20 ಸರಣಿ ಸೋತಿಲ್ಲ.

* 2 ಬಾರಿ ವಿಶ್ವ ಚಾಂಪಿಯನ್‌: ಭಾರತ ತಂಡ ಕಳೆದ 2 ಆವೃತ್ತಿಯ ಟಿ20 ವಿಶ್ವಕಪ್‌ಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸತತ 2 ಬಾರಿ ವಿಶ್ವಕಪ್‌ ಗೆದ್ದ ಮೊದಲ ದೇಶ ಎನ್ನುವ ದಾಖಲೆ ಬರೆದಿದೆ.

* ದಾಖಲೆಗಳ ಸುರಿಮಳೆ: ಕಳೆದ 5 ವರ್ಷದಲ್ಲಿ ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ಸಾಧ್ಯವಿರುವ ಬಹುತೇಕ ದಾಖಲೆಗಳನ್ನು ಬರೆದಿದೆ. ಕೆಲ ಅಸಾಧ್ಯ ಎನಿಸಿದ ದಾಖಲೆಗಳನ್ನೂ ನಿರ್ಮಿಸಿದೆ. 200+ ರನ್‌ ಗಳಿಸುವುದು ಭಾರತಕ್ಕೆ ಭಾರೀ ಸುಲಭ ಎನ್ನುವಂತಾಗಿದೆ. ಸೂರ್ಯಕುಮಾರ್‌ರ ನಾಯಕತ್ವದಲ್ಲಿ ಭಾರತ ಕೇವಲ 51 ಪಂದ್ಯದಲ್ಲಿ 16 ಬಾರಿ 200ಕ್ಕೂ ಹೆಚ್ಚು ರನ್‌ ದಾಖಲಿಸಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್: ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಫೈನಲ್ ಮ್ಯಾಚ್ ಗೆದ್ದಿದ್ದು ಯಾರು?

ಇಷ್ಟೇ ಅಲ್ಲ, ಕಳೆದ 2 ವರ್ಷದಲ್ಲಿ ಭಾರತ 5 ಬಾರಿ ಇನ್ನಿಂಗ್ಸಲ್ಲಿ 250ಕ್ಕೂ ಹೆಚ್ಚು ರನ್‌ ಪೇರಿಸಿದೆ. 2026ರ ಟಿ20 ವಿಶ್ವಕಪ್‌ನಲ್ಲೇ 2 ಬಾರಿ 250+ ರನ್‌ ದಾಖಲಿಸಿತು ಎನ್ನುವುದು ವಿಶೇಷ.

ಇದನ್ನೂ ಓದಿ: ನಾಯಕ ಸೂರ್ಯಗೆ 100ಕ್ಕೆ 100 ಅಂಕ ನೀಡಿದ ಕ್ರಿಕೆಟ್ ಅಭಿಮಾನಿಗಳು; ಸರಣಿ ಸಾಧನೆಗಳು ಇಲ್ಲಿವೆ