ರಣಜಿ ಟ್ರೋಫಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡ ಫೈನಲ್ಗೆ ಪ್ರವೇಶಿಸಿದೆ. ಸೆಮಿಫೈನಲ್ನಲ್ಲಿ ಎರಡು ಬಾರಿಯ ಚಾಂಪಿಯನ್ ಬೆಂಗಾಲ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ, 67 ವರ್ಷಗಳ ಬಳಿಕ ಈ ಐತಿಹಾಸಿಕ ಸಾಧನೆ ಮಾಡಿದೆ.
ಕಲ್ಯಾಣಿ(ಪಶ್ಚಿಮ ಬಂಗಾಳ): ರಣಜಿ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ಬಾರಿ ಜಮ್ಮು ಮತ್ತು ಕಾಶ್ಮೀರ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ. 1934–35ರಲ್ಲೇ ರಣಜಿ ಆರಂಭಗೊಂಡಿದ್ದರೂ ಜಮ್ಮು-ಕಾಶ್ಮೀರ ಮೊದಲ ಬಾರಿ ಆಡಿದ್ದು 1959–60ರಲ್ಲಿ. ಆದರೆ ಚೊಚ್ಚಲ ಬಾರಿ ಫೈನಲ್ಗೇರಲು ತಂಡ ಬರೋಬ್ಬರಿ 67 ವರ್ಷ ಕಾದಿದ್ದು, ಅದಕ್ಕಾಗಿ ಒಟ್ಟು 335 ಪಂದ್ಯಗಳನ್ನು ಆಡಿದೆ.
ಗುರುವಾರ ಕೊನೆಗೊಂಡ ಪಂದ್ಯದಲ್ಲಿ ಜಮ್ಮ-ಕಾಶ್ಮೀರ ತಂಡ 2 ಬಾರಿ ಚಾಂಪಿಯನ್ ಬೆಂಗಾಲ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿತು. 16ನೇ ಬಾರಿ ಫೈನಲ್ಗೇರುವ ಬೆಂಗಾಲ್ ಕನಸು ಭಗ್ನಗೊಂಡಿತು. ಗೆಲುವಿಗೆ 126 ರನ್ ಗುರಿ ಪಡೆದಿದ್ದ ಜಮ್ಮ-ಕಾಶ್ಮೀರ, 4 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು. ವನ್ಶಾಜ್ ಶರ್ಮಾ(ಔಟಾಗದೆ 43) ಹಾಗೂ ಅಬ್ದುಲ್ ಸಮದ್(ಔಟಾಗದೆ 30) ತಂಡವನ್ನು ಗೆಲ್ಲಿಸಿದರು.
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ಬೆಂಗಾಲ್ 328 ರನ್ ಗಳಿಸಿದ್ದರೆ, ತೀವ್ರ ಹೋರಾಟದ ಹೊರತಾಗಿಯೂ ಜಮ್ಮ-ಕಾಶ್ಮೀರ 302 ರನ್ಗೆ ಆಲೌಟಾಗಿ 26 ರನ್ ಹಿನ್ನಡೆ ಅನುಭವಿಸಿತ್ತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಮಾರಕ ದಾಳಿ ನಡೆಸಿದ ಜಮ್ಮ-ಕಾಶ್ಮೀರ, ಬೆಂಗಾಲ್ ತಂಡವನ್ನು ಕೇವಲ 99 ರನ್ಗೆ ನಿಯಂತ್ರಿಸಿತ್ತು. 4ನೇ ದಿನದಂತ್ಯಕ್ಕೆ ತಂಡ 2 ವಿಕೆಟ್ಗೆ 43 ರನ್ ಗಳಿಸಿತ್ತು. ಬಾಕಿಯಿದ್ದ 83 ರನ್ಗಳನ್ನು ತಂಡ ಗುರುವಾರ ಸುಲಭದಲ್ಲಿ ಕಲೆಹಾಕಿ ಗೆದ್ದಿತು. ಮೊಹಮ್ಮದ್ ಶಮಿ, ಆಕಾಶ್ದೀಪ್, ಮುಕೇಶ್ ಕುಮಾರ್, ಶಾಬಾಜ್ ಸೇರಿ ಅಂತಾರಾಷ್ಟ್ರೀಯ ಬೌಲರ್ಗಳನ್ನು ಹಿಮ್ಮೆಟ್ಟಿಸಿದ ತಂಡ, ಅರ್ಹವಾಗಿಯೇ ಫೈನಲ್ಗೇರಿತು.
ಸ್ಕೋರ್: ಬೆಂಗಾಲ್ 328/10 ಮತ್ತು 99/10, ಜಮ್ಮು-ಕಾಶ್ಮೀರ 302/10 ಮತ್ತು 126/4 (ವನ್ಶಾಜ್ ಔಟಾಗದೆ 43, ಸಮದ್ ಔಟಾಗದೆ 30, ಶುಭಮ್ 27, ಆಕಾಶ್ದೀಪ್ 3-46)
ಮೊದಲ ಗೆಲುವಿಗೆ 23 ವರ್ಷದ ಕಾದಿದ್ದ ಜೆಕೆ!
ಜಮ್ಮು-ಕಾಶ್ಮೀರ 67 ವರ್ಷದಲ್ಲೇ ಮೊದಲ ಬಾರಿ ಫೈನಲ್ಗೇರಿದೆ. ಈ ತಂಡ ರಣಜಿಯಲ್ಲಿ ತನ್ನ ಮೊದಲ ಗೆಲುವಿಗೆ ಬರೋಬ್ಬರಿ 23 ವರ್ಷ ಕಾದಿತ್ತು. 1982–83ರಲ್ಲಿ ಸರ್ವಿಸಸ್ ವಿರುದ್ಧ ಮೊದಲ ಗೆಲುವು ದಾಖಲಿಸಿತ್ತು. ಇದೇ ಮೊದಲ ಬಾರಿ ಸೆಮೀಸ್ ತಲುಪಿದ್ದ ತಂಡ, ಫೈನಲ್ಗೂ ತಲುಪುವ ಮೂಲಕ ಚೊಚ್ಚಲ ಕಿರೀಟ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
23ನೇ ಟೀಂ:
ರಣಜಿಯಲ್ಲಿ ಫೈನಲ್ ತಲುಪಿದ 23ನೇ ತಂಡ ಜಮ್ಮು-ಕಾಶ್ಮೀರ. ಈ ಹಿಂದೆ ಫೈನಲ್ಗೇರಿದ್ದ 22 ತಂಡಗಳ ಪೈಕಿ 18 ತಂಡಗಳು ಕನಿಷ್ಠ ಒಮ್ಮೆಯಾದರೂ ಚಾಂಪಿಯನ್ ಆಗಿವೆ.
ಹುಬ್ಬಳ್ಳಿಯಲ್ಲಿ ಫೆ.24ರಿಂದ ಫೈನಲ್ ಹಣಾಹಣಿ
ಬೆಂಗಳೂರು ಹಾಗೂ ಜಮ್ಮು-ಕಾಶ್ಮೀರ ನಡುವಿನ ಫೈನಲ್ ಪಂದ್ಯ ಫೆ.24ಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಇದನ್ನು ಕೆಎಸ್ಸಿಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದೇ ಕಾರಣಕ್ಕೆ ಪಂದ್ಯವನ್ನು ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


